ಉತ್ತರ ಪ್ರದೇಶದಲ್ಲಿ ಟ್ರಕ್ ಹರಿದು ಐವರ ಸಾವು; ಮೂವರಿಗೆ ಗಾಯ
Team Udayavani, May 16, 2018, 11:53 AM IST
ಜಾಲೂನ್, ಉತ್ತರ ಪ್ರದೇಶ : ಕಾನ್ಪುರ – ಝಾನ್ಸಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರ್ ಮೇಲೆ ಕುಳಿತಿದ್ದವರ ಮೇಲೆ ಟ್ರಕ್ ಹರಿದು ಸಂಭವಿಸಿದ ಭೀಕರ ಅವಘಡದಲ್ಲಿ ಐವರು ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ವರದಿಯಾಗಿದೆ.
ನತದೃಷ್ಟರು ಈ ಮಾರ್ಗವಾಗಿ ಎಸ್ಯುವಿ ವಾಹನದಲ್ಲಿ ಬರುತ್ತಿದ್ದಾಗ ಅದು ಪಂಕ್ಚರ್ ಆಗಿ ಚಾಲಕನು ಟಯರ್ಬದಲಾವಣೆ ಮಾಡುತ್ತಿದ್ದಾಗ ಡಿವೈಡರ್ ಮೇಲೆ ಕುಳಿತಿದ್ದರು. ಆಗ ವೇಗವಾಗಿ ಧಾವಿಸಿ ಬಂದ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೇರಿ ಅಲ್ಲಿ ಕುಳಿತಿದ್ದವರ ಮೇಲೆ ಹರಿಯಿತು ಎಂದು ಪೊಲೀಸ್ ಸುಪರಿಂಟೆಂಡೆಂಟ್ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.
ಮೃತರನ್ನು ಕವಿತಾ 8, ರಾಹುಲ್ 26, ರಜನಿ 30, ರಾಮ ಭರಣ್ 35, ಕೈಲಾಶಾ ದೇವಿ 50 ಎಂದು ಗುರುತಿಸಲಾಗಿದೆ ಎಂದು ಎಸ್ಪಿ ಹೇಳಿದರು.
ಐವರನ್ನು ಬಲಿತೆಗೆದುಕೊಂಡ ಚಾಲಕನು ತನ್ನ ಟ್ರಕ್ಕನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಎಸ್ಪಿ ಹೇಳಿದರು.