ಭಾರತ-ಪಾಕಿಸ್ತಾನ ಗಡಿ; ಬಿಎಸ್ ಎಫ್ ಗುಂಡಿನ ದಾಳಿಗೆ ಇಬ್ಬರು ಕಳ್ಳಸಾಗಣೆದಾರರ ಸಾವು
ಮಾದಕ ವಸ್ತುಗಳೊಂದಿಗೆ ಒಳನುಸುಳಲು ಯತ್ನಿಸುತ್ತಿದ್ದ ವೇಳೆಯೇ ಗಡಿ ಫೆನ್ಸ್ (ತಂತಿ ಬೇಲಿ) ಬಳಿ ಗುಂಡಿನ ದಾಳಿಗೆ ಬಲಿ
Team Udayavani, Sep 9, 2020, 2:04 PM IST
ಜೈಪುರ್: ರಾಜಸ್ಥಾನದ ಶ್ರೀಗಂಗಾನಗರ್ ಗಡಿ ಪ್ರದೇಶದಲ್ಲಿ ಇಬ್ಬರು ಸ್ಮಗ್ಲರ್ಸ್ ಗಳು ಗಡಿ ಭದ್ರತಾ ಪಡೆಯ(ಬಿಎಸ್ ಎಫ್) ಗುಂಡಿಗೆ ಸಾವನ್ನಪ್ಪಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಪಾಕಿಸ್ತಾನದಿಂದ ಭಾರತದ ಕಡೆಗೆ ಮಾದಕ ದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದಾರೆಂಬ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ಖಚಿತ ಮಾಹಿತಿ ಪಡೆದು ಬಿಎಸ್ ಎಫ್ ಕಾರ್ಯಾಚರಣೆ ನಡೆಸಿರುವುದಾಗಿ ಶ್ರೀಗಂಗಾನಗರ್ ಗಡಿ ಔಟ್ ಪೋಸ್ಟ್ ನ ಖಾಯಾಲಿವಾಲಾ ತಿಳಿಸಿದ್ದಾರೆ.
ಶಸ್ತ್ರಸಜ್ಜಿತ ಸ್ಮಗ್ಲರ್ಸ್ ಗಳು ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿರುವುದನ್ನು ಬಿಎಸ್ ಎಫ್ ವಿಫಲಗೊಳಿಸಿದ್ದು, ಈ ಸಂದರ್ಭದಲ್ಲಿ ಕಳ್ಳಸಾಗಣಿಕೆದಾರರು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಗೆ ಇಬ್ಬರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಮಾದಕ ವಸ್ತುಗಳೊಂದಿಗೆ ಒಳನುಸುಳಲು ಯತ್ನಿಸುತ್ತಿದ್ದ ವೇಳೆಯೇ ಗಡಿ ಫೆನ್ಸ್ (ತಂತಿ ಬೇಲಿ) ಬಳಿ ಗುಂಡಿನ ದಾಳಿಗೆ ಬಲಿಯಾಗಿದ್ದು, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃತ ಸ್ಲಗ್ಲರ್ಸ್ ಬಳಿ ಅಪಾರ ಪ್ರಮಾಣದ ಮಾದಕ ವಸ್ತು, ಪಿಸ್ತೂಲ್, ನೈಟ್ ವಿಶನ್ (ರಾತ್ರಿ ವೀಕ್ಷಣೆ ಡಿವೈಸ್) ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.