ಉಗ್ರ ಜಾಲ ಭೇದಿಸಿದ ಭದ್ರತಾ ಪಡೆ
Team Udayavani, Aug 10, 2018, 6:00 AM IST
ಹೊಸದಿಲ್ಲಿ/ಜಮ್ಮು: ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿ ಸಂಭ್ರಮಾಚರಣೆಗೆ ಸಿದ್ಧಗೊಳ್ಳುತ್ತಿರುವ ಬೆನ್ನಲ್ಲೇ ಉಗ್ರರ ಕರಿನೆರಳನ್ನು ಭೇದಿಸುವ ಚಟುವಟಿಕೆಯೂ ಚುರುಕುಗೊಂಡಿದೆ. ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವ ದಿಲ್ಲಿ ಪೊಲೀಸರು, ಅವರು ನೀಡಿರುವ ಮಾಹಿತಿಯನ್ನು ಆಧರಿಸಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಓರ್ವ ಪಶ್ಚಿಮ ಬಂಗಾಲದ ಮೊಹಮ್ಮದ್ ಅಜೀಮ್, ಇನ್ನೊಬ್ಬ ಉತ್ತರ ಪ್ರದೇಶದ ಶಾಮ್ಲಿಯ ಆಸ್ ಮೊಹಮ್ಮದ್ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷ ಭದ್ರತಾ ಪಡೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಸಂಜೀವ್ ಕುಮಾರ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, “ಆಸ್ನನ್ನು ಮಂಗಳವಾರವೇ ಬಂಧಿಸಲಾಗಿದೆ. ಅಜೀಮ್ನನ್ನು ಮೂರು ದಿನಗಳ ಹಿಂದೆಯೇ ವಶಕ್ಕೆ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ.
ಉಗ್ರನ ಹತ್ಯೆ
ಬಾರಾಮುಲ್ಲಾ ಜಿಲ್ಲೆಯ ಅರಣ್ಯದಲ್ಲಿ ಗಡಿ ಭದ್ರತಾ ಪಡೆ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯ ಸ್ಥಳದಲ್ಲಿ ಇದೀಗ ಇನ್ನೊಬ್ಬ ಉಗ್ರನ ಮೃತದೇಹ ಪತ್ತೆಯಾಗಿದೆ.