ಮತ್ತೆ ಇಬ್ಬರು ಉಗ್ರರ ಎನ್ಕೌಂಟರ್
Team Udayavani, May 31, 2020, 8:34 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಲಾಕ್ಡೌನ್ ಅವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರರ ಶವಗಳು ಉರುಳುತ್ತಲೇ ಇವೆ.
ಈಗ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಶನಿವಾರ ಗುಂಡಿನ ಚಕಮಕಿ ನಡೆದಿದ್ದು, ಹಿಜ್ಬುಲ್ ಮುಜಾಹಿದೀನ್ನ ಇಬ್ಬರು ಉಗ್ರರು ಹತರಾಗಿದ್ದಾರೆ. ಕುಲ್ಗಾಮ್ ಜಿಲ್ಲೆಯ ವಾನ್ಪೊರಾ ಪ್ರಾಂತ್ಯದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಶರಣಾಗತಿಗೆ ನಕಾರ: ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಜಾಡು ಹಿಡಿದ ಭದ್ರತಾ ಪಡೆ, ಉಗ್ರರ ಅಡಗುತಾಣದ ಮುಂದೆ ಶುಕ್ರವಾರ ರಾತ್ರಿಯೇ ಹಾಜರಾಗಿತ್ತು. ಮೊದಲಿಗೆ, ಶರಣಾಗುವಂತೆ ಮಾಡಲಾದ ಮನವಿಗೆ ಉಗ್ರರು ಕಿವಿಗೊಡಲಿಲ್ಲ. ಆದರೆ, ಪಡೆಗಳನ್ನು ಓಡಿಸಲು ಗುಂಡಿನ ಚಕಮಕಿ ನಡೆಸಿದರು.
ಇದು ಮಧ್ಯರಾತ್ರಿ 2 ಗಂಟೆಯಿಂದ ಫೈರಿಂಗ್ ಆರಂಭಿಸಿ, ಮುಂಜಾವ 5 ಗಂಟೆವರೆಗೂ ಜಾರಿಯಲ್ಲಿತ್ತು. ಬೆಳಗ್ಗೆ 8 ಗಂಟೆ ಸುಮಾರಿಗೆ ಉಗ್ರರ ಪೋಷಕರನ್ನು ಕರೆದೊಯ್ದು, ಶರಣಾಗುವಂತೆ ಮನವೊಲಿಸಲು ಮಾಡಿದ ಪ್ರಯತ್ನವೂ ವ್ಯರ್ಥವಾಯಿತು. ಆಗ, ಅನಿವಾರ್ಯವಾಗಿ ಎನ್ಕೌಂಟರ್ ನಡೆಸಬೇಕಾಯಿತು ಎಂದು ಜಮ್ಮು ಮತ್ತು ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.
ಐಎಸ್ಐ ಬೆಂಬಲಿತ ಬೇಹು ಜಾಲ ಪತ್ತೆ
ಪಾಕಿಸ್ಥಾನದ ಅತಿದೊಡ್ಡ ಬೇಹುಗಾರಿಕಾ ಜಾಲವೊಂದನ್ನು ಜಮ್ಮು- ಕಾಶ್ಮೀರದ ಸೇನಾ ಗುಪ್ತಚರ ವಿಭಾಗ ಮತ್ತು ಮುಂಬಯಿ ಪೊಲೀಸರ ಕ್ರೈಂ ಬ್ರಾಂಚ್ ಭೇದಿಸಿದೆ. ಈ ಜಾಲವು ಅಕ್ರಮ ವಾಯ್ಸ್ ಓವರ್ ಇಂಟರ್ನೆಂಟ್ ಪ್ರೊಟಾ ಕಾಲ್ ವಿನಿಮಯದ ಮೂಲಕ ಲಡಾಖ್ನಲ್ಲಿನ ಭಾರತೀಯ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಲು ಯತ್ನಿಸಿತ್ತು. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರಿಗಾಗಿ ಬಲೆ ಬೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.