ಈ ಬಾರಿ ಕೇಂದ್ರ ಬಜೆಟ್ ಅನುದಾನದಲ್ಲಿ ಯಥಾಸ್ಥಿತಿ?
Team Udayavani, Jan 11, 2021, 7:40 AM IST
ಹೊಸದಿಲ್ಲಿ:ಕೇಂದ್ರ ಬಜೆಟ್ ಮಂಡನೆಯ ದಿನ ಸಮೀಪಿಸುತ್ತಿರುವಂತೆಯೇ ಆಯವ್ಯಯದಲ್ಲಿ ಯಾವ್ಯಾವ ಕ್ಷೇತ್ರಗಳಿಗೆ ಎಷ್ಟು ಮೊತ್ತ ಹಂಚಿಕೆಯಾಗಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಆದರೆ ಬಜೆಟ್ ಅನುದಾನ ಹಂಚಿಕೆಯಲ್ಲಿ ಯಥಾಸ್ಥಿತಿ ಕಾಪಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯೂ ಹೆಚ್ಚು ಕಡಿಮೆ ಕಳೆದ ಬಾರಿ ನೀಡಿದಷ್ಟೇ ಮೊತ್ತವನ್ನು ಹಂಚಿಕೆ ಮಾಡಲಾಗುವುದು ಎಂದು ಇತರೆ ಇಲಾಖೆಗಳಿಗೆ ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ. ವಿತ್ತೀಯ ಕೊರತೆಯು ಹೆಚ್ಚಾಗದಂತೆ ತಡೆಯಲು ಸರಕಾರ ಇಂಥದ್ದೊಂದು ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.
20 ಮತ್ತು 21ನೇ ವಿತ್ತೀಯ ವರ್ಷದಲ್ಲಿ ಹಲವು ಸಚಿವಾಲಯಗಳು ಸರಾಸರಿ ಶೇ.13ರಷ್ಟು ಹೆಚ್ಚು ಅನುದಾನವನ್ನು ಪಡೆದಿದ್ದವು. ಆದರೆ, ಈ ಬಾರಿ ಕೊರೊನಾದಿಂದಾಗಿ ಮೊದಲ ಎರಡು ತ್ತೈಮಾಸಿಕದಲ್ಲಿ ಈ ಇಲಾಖೆಗಳಿಗೆ ತಮಗೆ ಬಂದ ಅನುದಾನವನ್ನು ವ್ಯಯಿಸಲು ಸಾಧ್ಯವಾಗಿಲ್ಲ. ಈಗ ಕೇಂದ್ರದ ಇಲಾಖೆಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿ, ವೆಚ್ಚ ಕಡಿತ ಮಾಡುವಂತೆ ಸರಕಾರ ಸೂಚಿಸಿದೆ ಎಂದೂ ಹೇಳಲಾಗಿದೆ. ಅದೇ ರೀತಿ, ಸಚಿವಾಲಯಗಳನ್ನೂ 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೊರೊನಾ ನಿಯಂತ್ರಣದಲ್ಲಿನ ತಮ್ಮ ಪಾತ್ರಕ್ಕೆ ಅನುಗುಣವಾಗಿ ಮೊದಲ ಗುಂಪು ಶೇ.20ರಷ್ಟು ವೆಚ್ಚ ಕಡಿತ ಮಾಡಬೇಕಾಗುತ್ತದೆ. ಎರಡನೇ ಗುಂಪು ಶೇ. 40 ಮತ್ತು 3ನೇ ಗುಂಪು ಶೇ.60ರಷ್ಟು ವೆಚ್ಚ ಕಡಿತ ಮಾಡುವಂತೆ ಸೂಚಿಸಲಾಗಿದೆ.