26/11ರ ಉಗ್ರದಾಳಿ ಮುಯ್ಯಿಗೆ ಸೇನೆ ಸಿದ್ಧವಿತ್ತು; UPA ತಡೆಯಿತು: ಮೋದಿ
Team Udayavani, Mar 1, 2019, 1:53 PM IST
ಹೊಸದಿಲ್ಲಿ : 2008ರಲ್ಲಿ ನಡೆದಿದ್ದ 26/11ರ ಅತ್ಯಂತ ವಿನಾಶಕಾರಿ ಮುಂಬಯಿ ಉಗ್ರ ದಾಳಿಗೆ ಪಾಕ್ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಭಾರತೀಯ ವಾಯು ಪಡೆ ಸಿದ್ಧವಿತ್ತು. ಆದರೆ ಅಂದಿನ ಯುಪಿಎ ಸರಕಾರ ಅದನ್ನು ತಡೆದಿತ್ತು’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರಕಾರದ ವಿರುದ್ಧ ನೇರ ವಾಕ್ ದಾಳಿ ನಡೆಸಿದರು.
ತಮಿಳು ನಾಡಿನಲ್ಲಿ ವಿವಿಧ ರೈಲು – ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ‘ಭಾರತ ಅನೇಕ ವರ್ಷಗಳಿಂದ ಭಯೋತ್ಪಾದನೆಯ ಪಿಡುಗನ್ನು ಅನುಭವಿಸುತ್ತಾ ಸಹಿಸಿಕೊಂಡಿತ್ತು. ಆದರೆ ಇಂದಿನದ್ದು ಬದಲಾಗಿರುವ ಭಾರತ’ ಎಂದು ಹೇಳಿದರು.
‘2004 -2014ರ ಅವಧಿಯಲ್ಲಿ ಭಾರತದ ಮೇಲೆ ಹಲವು ಉಗ್ರ ದಾಳಿಗಳು ನಡೆದಿದ್ದವು. ಉಗ್ರರನ್ನು ಶಿಕ್ಷಿಸಬೇಕು ಎಂದು ಭಾರತೀಯರು ಬಹುವಾಗಿ ಆಶಿಸಿದ್ದರು. ಆದರೆ UPA ಸರಕಾರ ಅದನ್ನು ಮಾಡಲಿಲ್ಲ. ಆದರೆ ಯಾವಾಗ ಉರಿ ಮತ್ತು ಪುಲ್ವಾಮಾ ಉಗ್ರ ದಾಳಿಗಳು ನಡೆದವೋ ಆಗ ನಮ್ಮ ಎಂಟೆದೆಯ ಸೈನಿಕರು ತಮ್ಮ ಶಕ್ತಿ, ಸಾಮರ್ಥಯ ಏನೆಂಬುದನ್ನು ತೋರಿಸಿಕೊಟ್ಟರು. ದೇಶಕ್ಕಾಗಿ ಪ್ರಾಣಾರ್ಪಣೆಗೆ ಸಿದ್ಧರಾಗಿ ದುಡಿಯುತ್ತಿರುವ ನಮ್ಮ ಸೈನಿಕರಿಗೆ ನನ್ನ ಸೆಲ್ಯೂಟ್’ ಎಂದು ಮೋದಿ ಹೇಳಿದರು.