ಚೆನ್ನೈ: ತರಕಾರಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಸುರಂಗ ಸ್ಥಾಪನೆ
Team Udayavani, Apr 4, 2020, 5:11 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚೆನ್ನೈ: ತಮಿಳುನಾಡಿನ ತಿರುಪ್ಪುರ್ ಜಿಲ್ಲೆಯ ತೆನ್ನಮ್ಪಾಲ್ಯಂ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ತಡೆಗೆ ‘ಸೋಂಕು ನಿವಾರಕ ಸುರಂಗ’ ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರೂ ಈ ಸುರಂಗದ ಮೂಲಕವೇ ಮಾರುಕಟ್ಟೆಯನ್ನು ಪ್ರವೇಶಿಸಬೇಕಾಗಿದೆ. ಇಲ್ಲಿ ಹಾದು ಹೋಗುವ ಜನರಿಗೆ ನೀರಿನೊಂದಿಗೆ ಮಿಶ್ರಣ ಮಾಡಿರುವ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ.
19 ಅಡಿ ಉದ್ದ ಹಾಗೂ 5 ಅಡಿ ಅಗಲದ ಸುರಂಗವನ್ನು ತೆರೆಯಲಾಗಿದ್ದು, ಪ್ರತಿಯೊಬ್ಬರಿಗೂ ಕನಿಷ್ಠ 5 ಸೆಕೆಂಡ್ಗಳ ಕಾಲ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿದ ಬಳಿಕವೇ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಸಮೀಪದಲ್ಲಿ ರಾಸಾಯನಿಕ ದ್ರಾವಣ ಮಿಶ್ರಿತ ನೀರು ಇರುವ ಟ್ಯಾಂಕರ್ ನಿಲ್ಲಿಸಲಾಗಿದೆ.
ಇದರಿಂದ ಜನರಿಗೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ವೈದ್ಯರಿಂದ ಪರೀಕ್ಷಿಸಿದ ಬಳಿಕವೇ ಈ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಒಂದು ಸುರಂಗಕ್ಕೆ ಲಕ್ಷ ರೂ. ಖರ್ಚು ಬರುತ್ತದೆ. ಜನನಿಬಿಡ 10 ಸ್ಥಳಗಳಲ್ಲಿ ಇದನ್ನು ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.