ವಾಹನಗಳಿಂದಲೇ ಅಧಿಕ ಮಾಲಿನ್ಯ: ಸುಡುಮದ್ದು ನಿಷೇಧ ವಿರುದ್ಧ ಸುಪ್ರೀಂ
Team Udayavani, Mar 12, 2019, 10:11 AM IST
ಹೊಸದಿಲ್ಲಿ : ಸುಡು ಮದ್ದುಗಳಿಗಿಂತಲೂ ಮೋಟಾರು ವಾಹನಗಳು ಉಗುಳುವ ಹೊಗೆಯಿಂದಲೇ ಅತ್ಯಧಿಕ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪರಿಸರ ಮಾಲಿನ್ಯದ ಪ್ರಶ್ನೆ ಬಂದಾಗ ಜನರು ಪಟಾಕಿ ಕಾರ್ಖಾನೆಗಳನ್ನು ನಿಷೇಧಿಸಬೇಕೆಂಬ ಕೂಗು ಎಬ್ಬಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಈ ಕ್ಷೇತ್ರದಲ್ಲಿ ಅಪಾರ ಉದ್ಯೋಗ ನಷ್ಟವಾಗುತ್ತದೆ. ಆ ಬಗ್ಗೆ ಜನರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದುದರಿಂದ ಸರಕಾರ ಅತ್ಯಧಿಕ ಪರಿಸರ ಮಾಲಿನ್ಯ ಉಂಟಾಗುವುದು ಮೋಟಾರು ವಾಹನಗಳಿಂದಲೋ ಅಥವಾ ಪಟಾಕಿ ಸುಡುವುದರಿಂದಲೋ ಎಂಬುದರ ತುಲನಾತ್ಮಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಜಸ್ಟಿಸ್ ಎಸ್ ಎ ಬೋಬಡೆ ಮತ್ತು ಜಸ್ಟಿಸ್ ಎಸ್ ಎ ನಜೀರ್ ಅವರನ್ನು ಒಳಗೊಂಡ ಪೀಠ ಹೇಳಿತು.
ಪಟಾಕಿ ನಿಷೇಧಿಸುವ ಮೂಲಕ ನಿರುದ್ಯೋಗ ಸೃಷ್ಟಿಯಾಗುವುದನ್ನು ನಾವು ಬಯಸುವುದಿಲ್ಲ ಎಂದು ಸುಪ್ರೀಂ ಪೀಠ ಹೇಳಿತು.
ಸುಡು ಮದ್ದು ಬಳಕೆಯಿಂದ ಗರಿಷ್ಠ ಮಾಲಿನ್ಯ ಉಂಟಾಗುವ ಕಾರಣ ದೇಶಾದ್ಯಂತ ಅದರ ಬಳಕೆಯನ್ನು ನಿಷೇಧಿಸಬೇಕು ಎಂದು ಕೋರಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು.
ಮೋಟಾರು ವಾಹನ ಮತ್ತು ಪಟಾಕಿ – ಇವುಗಳಿಂದ ಆಗುವ ಗರಿಷ್ಠ ಮಾಲಿನ್ಯದ ಬಗ್ಗೆ ಈ ತನಕ ತುಲನಾತ್ಮಕ ಅಧ್ಯಯನ ನಡೆದದ್ದುಂಟಾ ? ಮಾಲಿನ್ಯದ ವಿಷಯಕ್ಕೆ ಬಂದಾಗ ನೀವು ಪಟಾಕಿ ಸುಡುವುದನ್ನು ನಿಷೇಧಿಸಬೇಕು ಎಂದು ಹೇಳುತ್ತೀರಿ. ನಿಜಕ್ಕಾದರೆ ಮೋಟಾರು ವಾಹನಗಳಿಂದಾಗುವ ಪರಿಸರ ಮಾಲಿನ್ಯ ಗರಿಷ್ಠ ಎಂದು ಸುಪ್ರೀಂ ಕೋರ್ಟ್ ಪೀಠ, ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ ಎ ಎನ್ ಎಸ್ ನಾಡಕರ್ಣಿ ಅವರಿಗೆ ಹೇಳಿತು.
“ನೀವು ನಮಗೆ ನಿರುದ್ಯೋಗ ತಡೆಯುವ ವಿಧಾನಗಳ ಬಗ್ಗೆ ತಿಳಿಸಬೇಕು. ಜನರು ನಿರುದ್ಯೋಗಿಗಳಾಗಿ ಹಸಿವಿನಿಂದ ಇರುವುದನ್ನು ನಾವು ಬಯಸುವುದಿಲ್ಲ. ಸುಡು ಮದ್ದುಗಳನ್ನು ಬಳಸುವ ಇತರ ಕ್ಷೇತ್ರಗಳೂ ಇದ್ದಾವು’ ಎಂದು ಪೀಠ ಹೇಳಿತು.