ಮತ್ತೆ ಮುಳುಗಡೆ ಭೀತಿ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ;ಹಲವು ರಾಜ್ಯಗಳಲ್ಲಿ ನೆರೆ ಆತಂಕ
Team Udayavani, Sep 12, 2022, 6:42 AM IST
ಪುಣೆಯಲ್ಲಿ ರವಿವಾರ ಸುರಿದ ಭಾರೀ ಮಳೆಗೆ ಉಂಟಾಗಿದ್ದ ಟ್ರಾಫಿಕ್ ಜಾಮ್ನ ದೃಶ್ಯ.
ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಹಲವು ರಾಜ್ಯಗಳಲ್ಲಿ ಮತ್ತೆ ಪ್ರವಾಹ ಭೀತಿಯನ್ನು ಉಂಟುಮಾಡಿದೆ.
ಶನಿವಾರ ದಿಂದಲೇ ಒಡಿಶಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಧಾರಾಕಾರ ಮಳೆ ಆರಂಭವಾಗಿದ್ದು, ಇನ್ನೂ 5 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದು ಈಗಾಗಲೇ ಒಂದು ಹಂತದ ಮಳೆ, ಪ್ರವಾಹ, ಭೂಕುಸಿತದಂತಹ ದುರಂತಗಳಿಂದ ಕಂಗಾಲಾಗಿದ್ದ ಜನರನ್ನು ಮತ್ತೆ ಆತಂಕಕ್ಕೆ ನೂಕಿದೆ.
ಒಡಿಶಾದಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭುವನೇಶ್ವರ ಮತ್ತು ಕಟಕ್ನಲ್ಲಿ ವಿಪರೀತ ಮಳೆಯಾಗಲಿದ್ದು, ಮನೆಗಳಿಂದ ಹೊರಗೆ ಬರದಂತೆ ನಾಗರಿಕರಿಗೆ ಸೂಚಿಸಲಾಗಿದೆ. ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿ ಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ತೆಲಂಗಾಣ ಮತ್ತು ಗುಜರಾತ್ನಲ್ಲೂ ಇದೇ ಸ್ಥಿತಿಯಿದ್ದು, ಸೆ.14 ರವರೆಗೂ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡು, ಪುದು ಚೇರಿ ಮತ್ತು ಕರೈಕಲ್ನಲ್ಲಿ ರವಿ ವಾರ ವರುಣ ಅಬ್ಬರಿಸಿದ್ದು, ಕರ್ನಾಟಕ ಮತ್ತು ಕೇರಳದಲ್ಲಿ ಸೆ. 12ರಂದು ಭಾರೀ ಮಳೆ ಯಾಗಲಿದೆ ಎಂದು ಹವಾ ಮಾನ ಇಲಾಖೆ ಹೇಳಿದೆ. ದಿಲ್ಲಿಯಲ್ಲಿ ಶನಿವಾರ ದಿಂದೀಚೆಗೆ ಅಲ್ಪ ಪ್ರಮಾಣ ದಲ್ಲಿ ಮಳೆಯಾಗಿದೆ. ಸೆ.17- 18ರಂದು ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ವೊಂದು ಸಕ್ರಿಯ ಗೊಳ್ಳುವ ಸಾಧ್ಯತೆ ಯಿದೆ ಎಂದೂ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 5 ದಿನ ಮಳೆಯಬ್ಬರ: ಮುಂಬಯಿ, ರಾಯಗಢ, ಥಾಣೆ, ರತ್ನಗಿರಿ, ಸಿಂಧುದುರ್ಗ ಸೇರಿ ದಂತೆ ಮಹಾರಾಷ್ಟ್ರದ ಹಲವೆಡೆ ಗುಡುಗು-ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ ಆರಂಭ ವಾಗಿದೆ. ಮುಂದಿನ 5 ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರಾಖಂಡದ 5 ಜಿಲ್ಲೆಗಳಿಗೆ ಅಲರ್ಟ್: ಇತ್ತೀಚೆ ಗಷ್ಟೇ ಮೇಘಸ್ಫೋಟ, ಭೂಕುಸಿತದಂಥ ದುರಂತಗಳನ್ನು ಕಂಡಿದ್ದ ಉತ್ತರಾಖಂಡದಲ್ಲಿ ಈಗ ಮತ್ತೂಂದು ಸುತ್ತಿನ ಮಳೆ ಆರಂಭವಾಗಿದೆ. ಪಿತ್ತೋರ್ಗಢ, ಡೆಹ್ರಾಡೂನ್ ಸೇರಿ 5 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗಂಗೋತ್ರಿ, ಯಮುನೋತ್ರಿ ಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಪರ್ಕ ಸ್ಥಗಿತಗೊಳಿಸಲಾ ಗಿದೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಅವರು ರವಿವಾರ ವೈಮಾನಿಕ ಸಮೀಕ್ಷೆಯನ್ನೂ ನಡೆಸಿದ್ದಾರೆ.
ನದಿ ದಾಟಿ ಬಂದು
ಪರೀಕ್ಷೆ ಬರೆದಳು!
ಆಂಧ್ರಪ್ರದೇಶದ ವಿಜಯನಗರದ 21 ವರ್ಷದ ಯುವತಿ ಉಕ್ಕಿ ಹರಿಯುತ್ತಿದ್ದ ಚಂಪಾವದಿ ನದಿಯನ್ನು ದಾಟಿ ಬಂದು ಪರೀಕ್ಷೆ ಬರೆದಿದ್ದಾಳೆ. ಪರೀಕ್ಷಾ ಕೇಂದ್ರ ತಲುಪಬೇಕೆಂದರೆ ನದಿ ದಾಟಲೇಬೇಕಿತ್ತು. ಹೀಗಾಗಿ, ಕುಟುಂಬ ಸದಸ್ಯರೊಬ್ಬರ ಸಹಾಯದಿಂದ ನದಿ ದಾಟಿದ್ದಾಳೆ. ಈಜು ಬಾರದ ಹಿನ್ನೆಲೆಯಲ್ಲಿ ಸಹೋದರನೇ ಆಕೆಯನ್ನು ನದಿ ದಾಟಿಸಿದ್ದಾನೆ. ಇಬ್ಬರೂ ಕಷ್ಟಪಟ್ಟು ನದಿ ದಾಟುತ್ತಿರುವ ವೀಡಿಯೋ ವೈರಲ್ ಆಗಿದೆ.