ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣ: ವಿಡಿಯೋಕಾನ್ ಸಮೂಹದ ಸಿಇಓ ವೇಣುಗೋಪಾಲ್ ಧೂತ್ ಬಂಧನ
Team Udayavani, Dec 26, 2022, 1:46 PM IST
ಮುಂಬಯಿ: ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೋಕಾನ್ ಸಮೂಹದ ಸಿಇಓ ವೇಣುಗೋಪಾಲ್ ಧೂತ್ರನ್ನು ಸೋಮವಾರ ( ಡಿ.26 ರಂದು) ಸಿಬಿಐ ಬಂಧಿಸಿದೆ.
ವೀಡಿಯೋಕಾನ್ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಈಗಾಗಲೇ ಅಕ್ರಮ, ವಂಚನೆ ಆರೋಪದಡಿ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್, ಪತಿ ದೀಪಕ್ ಕೊಚ್ಚರ್ ರನ್ನು ಸಿಬಿಐ ಇತ್ತೀಚೆಗೆ ಬಂಧಿಸಿ, ಮುಂಬಯಿಯ ವಿಶೇಷ ನ್ಯಾಯಾಲಯ ಡಿ. 26ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸಿದೆ.
ಐಸಿಐಸಿಐ ಬ್ಯಾಂಕ್ನಿಂದ 3,250 ಕೋಟಿ ರೂ. ಸಾಲ ಪಡೆದ ಕೆಲವು ತಿಂಗಳಲ್ಲೇ ವಿಡಿಯೊಕಾನ್ ಗ್ರೂಪ್ನ ವೇಣುಗೋಪಾಲ್, ನ್ಯೂಪವರ್ ರಿನ್ಯೂವಬಲ್ಸ್ ಕಂಪೆನಿಯಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು.
ಐಸಿಐಸಿಐ ಬ್ಯಾಂಕ್ಗೆ ವಂಚನೆ ಮಾಡಲೆಂದೇ ಇತರೆ ಆರೋಪಿಗಳ ಜತೆ ಸೇರಿಕೊಂಡು ಚಂದಾ ಕೊಚ್ಚರ್ ಖಾಸಗಿ ಕಂಪೆನಿಗೆ ಸಾಲ ಮಂಜೂರು ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಈ ಸಂಬಂಧ ಪ್ರಕರಣದ ತನಿಖೆಯ ವೇಳೆ ಸಿಬಿಐ ಅಧಿಕಾರಿಗಳು ವಿಡಿಯೋಕಾನ್ ಸಮೂಹದ ಸಿಇಓ ವೇಣುಗೋಪಾಲ್ ಧೂತ್ ರನ್ನು ಬಂಧಿಸಿದೆ.
ಇದನ್ನೂ ಓದಿ: ಡಿ.30ಕ್ಕೆ 9 ಸಿನಿಮಾ ಬಿಡುಗಡೆ: ವರ್ಷಾರಂಭ ಡಲ್; ವರ್ಷಾಂತ್ಯ ಫುಲ್!
2010 ಮತ್ತು 2012 ರ ನಡುವೆ ವೀಡಿಯೊಕಾನ್ ಗ್ರೂಪ್ಗೆ ಬ್ಯಾಂಕ್ನಿಂದ ಸಾಲವನ್ನು ಮಂಜೂರು ಮಾಡಿದ ತಿಂಗಳ ನಂತರ, ವೇಣುಗೋಪಾಲ್ ಧೂತ್ ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಡೆಟ್ ಮೂಲಕ ನುಪವರ್ ರಿನ್ಯೂವಬಲ್ಸ್ನಲ್ಲಿ ₹ 64 ಕೋಟಿ ಹೂಡಿಕೆ ಮಾಡಿ, ಬಳಿಕ ಈ ಹಣವನ್ನು ದೀಪಕ್ ಕೊಚ್ಚರ್ ಅವರ ಪಿನ್ನಾಕಲ್ ಎನರ್ಜಿ ಟ್ರಸ್ಟ್ಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎಂದು ವರದಿ ತಿಳಿಸಿದೆ.
ವಿಡಿಯೋಕಾನ್ ಗ್ರೂಪ್ ಸಂಸ್ಥೆಗೆ 3,250 ಕೋಟಿ ರೂಪಾಯಿ ಸಾಲ ಮಂಜೂರು ಆಗಿದೆ. ಆದರೆ ಈ ಸಾಲವನ್ನು ಮಂಜೂರು ಮಾಡುವಾಗ ಆರ್ಬಿಐ ನಿಯಮ ಹಾಗೂ ಐಸಿಐಸಿಐ ಬ್ಯಾಂಕ್ಸ್ ಕ್ರೆಡಿಟ್ ಪಾಲಿಸಿಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.