ಕೋರ್ಟ್ ನಿಂದನೆ ಪ್ರಕರಣ: ಜ|ಕರ್ಣನ್ ವಿರುದ್ಧ ವಾರೆಂಟ್ ಜಾರಿ
Team Udayavani, Mar 10, 2017, 11:43 AM IST
ಹೊಸದಿಲ್ಲಿ : ಕೋರ್ಟ್ ನಿಂದನೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಲು ವಿಫಲರಾಗಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ ಎಸ್ ಕರ್ಣನ್ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ.
ಈ ವಾರಂಟನ್ನು ಕರ್ಣನ್ ಅವರಿಗೆ ತಲುಪಿಸಿ ಅವರನ್ನು ಮಾರ್ಚ್ 31ರಂದು ತನ್ನ ಎದುರು ಹಾಜರು ಪಡಿಸುವಂತೆ ಸುಪ್ರೀಂ ಕೋರ್ಟ್ ಕೋಲ್ಕತಾ ಪೊಲೀಸ್ ಮುಖ್ಯಸ್ಥರಿಗೆ ಆದೇಶ ಹೊರಡಿಸಿದೆ.
ಜಸ್ಟಿಸ್ ಕರ್ಣನ್ ವಿರುದ್ಧದ ಆರೋಪಿತ ಅನುಚಿತ ವರ್ತನೆಯ ಪ್ರಕರಣದ ವಿಚಾರಣೆಯನ್ನು ಭಾರತದ ಶ್ರೇಷ್ಠ ನ್ಯಾಯಮೂರ್ತಿ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ನಡೆಸಲಿದೆ.
ಜಸ್ಟಿಸ್ ಕರ್ಣನ್ ಅವರು ದೇಶದ ಹಲವು ಹಾಲಿ ಹಾಗೂ ಮಾಜಿ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಮದ್ರಾಸ್ ಹೈಕೋರ್ಟಿನ ಹಾಲಿ ನ್ಯಾಯಾಧೀಶರ ಪತ್ನಿಯು ಜಸ್ಟಿಸ್ ಕರ್ಣನ್ ತನ್ನ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ತಮ್ಮ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೂಡ ಸುಪ್ರೀಂ ಕೋರ್ಟ್ ಕೈಗೊಳ್ಳಲಿದೆ.
ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟಿನ ಹಾಲಿ ನ್ಯಾಯಾಧೀಶರ ವಿರುದ್ಧ ಕೋರ್ಟ್ ನಿಂದನೆಯ ಪ್ರಕರಣ ದಾಖಲಾಗಿದ್ದು ಜಸ್ಟಿಸ್ ಕರ್ಣನ್ ಅವರನ್ನು ಕಳೆದ ಫೆಬ್ರವರಿಯಲ್ಲಿ ತನ್ನ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಈಗಾಗಲೇ ಜಸ್ಟಿಸ್ ಕರ್ಣನ್ ಅವರ ಕೈಯಿಂದ ನ್ಯಾಯಾಂಗ ಮತ್ತು ಆಡಳಿತಾತ್ಮಕ ಕಾರ್ಯಭಾರವನ್ನು ಹಿಂಪಡೆದುಕೊಂಡಿದೆ.
ಸುಪ್ರೀಂ ಕೋರ್ಟಿಗೆ ಬರೆದ ಪತ್ರದಲ್ಲಿ ಜಸ್ಟಿಸ್ ಕರ್ಣನ್ ಅವರು ತಾನೋರ್ವ ದಲಿತನಾಗಿರುವುದಕ್ಕೆ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದ್ದರು.
ಜಸ್ಟಿಸ್ ಕರ್ಣನ್ ವಿರುದ್ಧ ಸಹೋದ್ಯೋಗಿ ನ್ಯಾಯಾಧೀಶರು ದೂರು ಸಲ್ಲಿಸಿದ ಕಾರಣ, ಕರ್ಣನ್ ಅವರನ್ನು ಮದ್ರಾಸ್ ಹೈಕೋರ್ಟಿನಿಂದ ಕಲ್ಕತಾ ಹೈಕೋರ್ಟಿಗೆ ವರ್ಗಾಯಿಸಲಾಗಿತ್ತು.