ಹಸಿವು ನೀಗಿಸುವ ಯೋಜನೆ ಜಾರಿ ಮಾಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್
Team Udayavani, Nov 16, 2021, 9:15 PM IST
ನವದೆಹಲಿ:”ದೇಶದಲ್ಲಿ ಹಲವರು ಹಸಿವಿನಿಂದ ಬಳಲುತ್ತಿದ್ದು, ಹಸಿವು ತಾಳಲಾರದೇ ಸಾಯುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳೊಂದಿಗೂ ಸಮಾಲೋಚನೆ ನಡೆಸಿ ಯೋಜನೆಯೊಂದನ್ನು ಜಾರಿ ಮಾಡಬೇಕಾದ ಅವಶ್ಯಕತೆಯಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇಶಾದ್ಯಂತ ಸಮುದಾಯ ಅಡುಗೆಮನೆಗಳನ್ನು ನಿರ್ಮಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ನಾವು ಅಂತಾರಾಷ್ಟ್ರೀಯ ಅಪೌಷ್ಟಿಕತೆಯ ಸೂಚ್ಯಂಕದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ದೇಶದಲ್ಲಿನ ಹಸಿವು ನಿವಾರಣೆಯೇ ನಮ್ಮ ಏಕೈಕ ಉದ್ದೇಶ. ದೇಶದ ಯಾರೊಬ್ಬರೂ ಹಸಿವಿನಿಂದ ಸಾಯದಂತೆ ನೋಡಿಕೊಳ್ಳುವುದೇ ಸರ್ಕಾರದ ಜವಾಬ್ದಾರಿಯಾಗಿದೆ ಎಂದೂ ಪೀಠ ಹೇಳಿತು.
ಇದನ್ನೂ ಓದಿ:ಸಯ್ಯದ್ ಮುಷ್ತಾಕ್ ಅಲಿ: ಕರ್ನಾಟಕಕ್ಕೆ ಗೆಲುವಿನ ಮನೋಹರ
“ನೀವು ಹಸಿವು ನೀಗಿಸುವ ಯೋಜನೆ ಕೈಗೊಳ್ಳುವುದಿದ್ದರೆ, ಯಾವ ಸಂವಿಧಾನವೂ, ಯಾವ ಕಾನೂನೂ, ಯಾವ ಕೋರ್ಟ್ ಕೂಡ ಬೇಡ ಎನ್ನುವುದಿಲ್ಲ. ಈಗಾಗಲೇ ತಡವಾಗಿ ಹೋಗಿದೆ. ಮತ್ತಷ್ಟು ಮುಂದೂಡಿಕೆಯಾಗುವುದು ಬೇಡ. ನಾವು ನಿಮಗೆ 2 ವಾರಗಳ ಕಾಲಾವಕಾಶ ಕೊಡುತ್ತೇವೆ. ರಾಜ್ಯಗಳೊಂದಿಗೆ ಚರ್ಚಿಸಿ, ಒಂದು ಯೋಜನೆ ಜಾರಿಯ ನಿರ್ಧಾರ ಕೈಗೊಳ್ಳಿ’ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ನ್ಯಾಯಪೀಠ ಸೂಚಿಸಿತು.