ಆರ್ಥಿಕ ಹಿಂಜರಿತ ಕೇಂದ್ರ ಉಪಕ್ರಮ ನಮಗೇನು ಪ್ರಯೋಜನ?
Team Udayavani, Aug 25, 2019, 6:41 AM IST
ಮುಂದಿನ ಐದು ವರ್ಷಗಳಲ್ಲಿ ಮೂಲ ಸೌಕರ್ಯ ವೃದ್ಧಿಗೆ 100 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಕೇಂದ್ರ ಸರಕಾರ ಹೇಳಿದೆ. ಇದರಿಂದ ಮೂಲಸೌಕರ್ಯ ವಲಯದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ. ಅಂತರ್ರಾಜ್ಯ ಸಚಿವಾಲಯಗಳು ಮೂಲಸೌಕರ್ಯ ವೃದ್ಧಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಿವೆ. ಇದು ಜನಸಾಮಾನ್ಯರ ಮೇಲೆ ಬಹಳಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.
ಶುಕ್ರವಾರ ಆರ್ಥಿಕ ಸುಧಾರಣೆ ಕ್ರಮ ಘೋಷಿಸಿದ್ದ ಸರಕಾರ
ಆರ್ಥಿಕತೆ ಕುಸಿಯುವ ಭೀತಿ ಕಾಡುತ್ತಿರುವುದು ನಿಜ. ಆಟೋಮೊಬೈಲ್ ಕ್ಷೇತ್ರವೂ ಸೇರಿದಂತೆ ಉತ್ಪಾದನಾ ವಲಯ ಸಣ್ಣ ಆತಂಕವನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಕೆಲವು ಉತ್ತೇಜನ ಉಪಕ್ರಮಗಳನ್ನು ಪ್ರಕಟಿಸಿದೆ. ಅದು ಯಥಾವತ್ತಾಗಿ ಜಾರಿಯಾದರೆ ಮಾರುಕಟ್ಟೆ ಕೊಂಚ ಚೇತರಿಕೆ ಕಂಡು ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಅದನ್ನು ತಿಳಿಸುವ ಪ್ರಯತ್ನ ಈ ವಾರದ ಉದಯವಾಣಿ ಕಣಜ ಅಂಕಣದ ಉದ್ದೇಶ.
ಕಡಿಮೆ ಬಡ್ಡಿದರದ ಸಾಲ
ರಿಸರ್ವ್ ಬ್ಯಾಂಕ್ ರೆಪೋದರವನ್ನು ಇಳಿಸಿದ ಕೂಡಲೇ ಬ್ಯಾಂಕ್ಗಳು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಬೇಕು. ಇನ್ನು ವಿಶೇಷವಾಗಿ ಮನೆ ಸಾಲ ಮತ್ತು ವಾಹನ ಸಾಲಗಳನ್ನು ಉತ್ಪನ್ನ ಆಧರಿತ ಸಾಲಗಳನ್ನಾಗಿ ಪರಿಗಣಿಸಿ ರೆಪೋ ದರಕ್ಕೆ ಪೂರಕವಾಗಿ ಬಡ್ಡಿದರಗಳನ್ನು ಬ್ಯಾಂಕ್ಗಳು ವಿಧಿಸಲಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರ ತಗ್ಗುವ ನಿರೀಕ್ಷೆ ಇದ್ದು, ಜನಸಾಮಾನ್ಯರು ಬ್ಯಾಂಕ್ಗಳಿಗೆ ಕಟ್ಟುವ ವಾಹನ, ಮನೆ, ಇತರ ರಿಟೇಲ್ ಸಾಲಗಳ ಇಎಂಐ ದರ ಕಡಿಮೆಯಾಗುವ ನಿರೀಕ್ಷೆ ಇದೆ.
30 ದಿನಗಳಲ್ಲಿ ಜಿಎಸ್ಟಿ ರಿಟರ್ನ್ಸ್
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬಾಕಿ ಇರುವ ಜಿಎಸ್ಟಿ ರಿಟರ್ನ್ಸ್ಗಳನ್ನು 30 ದಿನಗಳೊಳಗೆ ಕೇಂದ್ರ ಸರಕಾರ ತೀರಿಸಲಿದೆ. ಜತೆಗೆ ಅರ್ಜಿ ಸಲ್ಲಿಸಿದ 60 ದಿನಗಳಲ್ಲಿ ರಿಟರ್ನ್ಸ್ಗಳನ್ನು ನೀಡಲಿದೆ.ಇದರಿಂದ ಸಣ್ಣ ಉದ್ದಿಮೆಗಳಿಗೆ ಹಣಕಾಸಿನ ಅಭಾವ ತಪ್ಪಲಿದೆ. ಸಣ್ಣ ನಗರ, ಪಟ್ಟಣಗಳ ಉದ್ದಿಮೆಗಳಿಗೆ ಅನುಕೂಲವಾಗಲಿದೆ.
ಬಿಎಸ್4 ಕಾರು ಖರೀದಿಗೆ ಅವಕಾಶ
ಸದ್ಯ ಬಿಎಸ್6 ಕಾರುಗಳು (ಕಡಿಮೆ ಮಾಲಿನ್ಯ ಪ್ರಮಾಣ) ಮಾರುಕಟ್ಟೆಗೆ ಬಂದಿವೆ. ಇವುಗಳಿಗೆ ಹಿಂದಿನ ಬಿಎಸ್4 ಕಾರುಗಳಿಗಿಂತ ಬೆಲೆ ಹೆಚ್ಚು. ಬಿಎಸ್6 ಕಾರುಗಳ ಮಾರಾಟವನ್ನು ಈ ಅವಧಿಯಿಂದ ಕಡ್ಡಾಯ ಮಾಡಿರುವುದರಿಂದ ಹಳೆ ಕಾರುಗಳು ಮಾರಾಟವಾಗದೆ ಬಾಕಿ ಉಳಿದಿವೆ. ಇದನ್ನು ಮಾರಲು ಕೇಂದ್ರ ಸರಕಾರ 2020 ಮಾರ್ಚ್ ವರೆಗೆ ಅನುವು ಮಾಡಿಕೊಟ್ಟಿದೆ. ಇದರಿಂದ ತುಸು ಅಗ್ಗಕ್ಕೆ ಬಿಇಎಸ್4 ಕಾರುಗಳು ಜನಸಾಮಾನ್ಯರಿಗೆ ಲಭ್ಯವಾಗಲಿವೆ.
ನೋಂದಣಿ ಶುಲ್ಕ ಹೆಚ್ಚಳ ತೀರ್ಮಾನ ಮುಂದಕ್ಕೆ
ಇತ್ತೀಚೆಗಷ್ಟೇ ಕಾರುಗಳ ನೋಂದಣಿ ಮೇಲಿನ ಶುಲ್ಕ ಹೆಚ್ಚಿಸಲು (600 ರೂ.ಗಳಿಂದ 5 ಸಾವಿರ ರೂ.ವರೆಗೆ, ಹಳೆಯ ಕಾರುಗಳ ಮರು ನೋಂದಣಿಗೆ 15 ಸಾವಿರ ರೂ.) ಕರಡು ನೀತಿಯೊಂದನ್ನು ಸರಕಾರ ಹೊರತಂದಿತ್ತು. ಇದರಿಂದ ವಾಹನ ಮಾರುಕಟ್ಟೆ ಮೇಲೆ ಮತ್ತು ವಾಹನ ಖರೀದಿದಾರರ ಮೇಲೆ ಪರಿಣಾಮ ಬೀರುವಂತಿದ್ದು, ಈ ತೀರ್ಮಾನ ಮುಂದೂಡುವುದಾಗಿ ಹೇಳಿದೆ.
70 ಸಾವಿರ ಕೋಟಿ
ಸಾರ್ವಜನಿಕ ರಂಗದ ಬ್ಯಾಂಕ್ಗಳಿಗೆ (ಪಬ್ಲಿಕ್ ಸೆಕ್ಟರ್ ಬ್ಯಾಂಕ್) ಮುಂಗಡವಾಗಿ 70 ಸಾವಿರ ಕೋ. ರೂ. ಬಿಡುಗಡೆ ಮಾಡಿದ್ದು, ಇದರಿಂದ ಕಾರ್ಪೊರೇಟ್ ವಲಯ, ಚಿಲ್ಲರೆ ಸಾಲಗಾರರು, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರು, ಸಣ್ಣ ಉದ್ದಿಮೆದಾರರು ಸೇರಿದಂತೆ ಇತರ ಸಾಲಗಾರರಿಗೂ ಅನುಕೂಲವಾಗಲಿದೆ.
ಹೊಸ ಸಾಲಕ್ಕೆ ವ್ಯವಸ್ಥೆ
-ಗ್ರಾಹಕರಿಗೆ ಸುಲಭ ಸೇವೆ ನೀಡಲು ಒಂದಷ್ಟು ಸುಧಾರಣೆ ತರಲಾಗಿದೆ. ಸಾಲ ಮರುಪಾವತಿಗೊಂಡ ದಾಖಲೆಗಳನ್ನು ಸಾಲ ಮುಗಿದ 15 ದಿನಗಳ ಒಳಗೆ ಗ್ರಾಹಕರಿಗೆ ತಲುಪಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಇದರಿಂದ ಹೊಸ ಸಾಲಕ್ಕೆ ಆತ ತತ್ಕ್ಷಣ ಅರ್ಹ. ಆನ್ಲೈನ್
-ಇನ್ನು ಮುಂದೆ ಬ್ಯಾಂಕ್ಗಳಲ್ಲಿ ಸಾಲ ನೀಡುವ ಕ್ರಮ ಇನ್ನಷ್ಟು ಸರಳ. ಕ್ಷಿಪ್ರವಾಗಿ ಸಾಲ ಸೌಲಭ್ಯ ದೊರೆಯಲಿದೆ. ಒಮ್ಮೆ ಬ್ಯಾಂಕ್ಗೆ ಸಾಲದ ಅರ್ಜಿಯನ್ನು ಸಲ್ಲಿಸಿದ ಬಳಿಕ ಅದರ ಸ್ಥಿತಿಗತಿಯನ್ನು ಆನ್ಲೈನ್ನಲ್ಲೇ ನೋಡಬಹುದು. “ಒನ್ ಟೈಮ್ ಸೆಟಲ್ಮ್ಮೆಂಟ್’ ಮಾಡುವ ಎಲ್ಲಾ ವರ್ಗದ ಉದ್ದಿಮೆದಾರರಿಗೂ ಪಾರದರ್ಶಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
-ಬ್ಯಾಂಕ್ ಹೊರತುಪಡಿಸಿ ಉಳಿದ ಹಣಕಾಸು ಸಂಸ್ಥೆಗಳಲ್ಲೂ ಆಧಾರ್ ಬಳಸಬಹುದು. ವಿದೇಶದಲ್ಲಿ ಶಿಕ್ಷಣ ಮುಂದುವರಿಸುತ್ತಿರುವ ಮಕ್ಕಳ ಹೆತ್ತವರು ಇನ್ನು ಮುಂದೆ ಸುಲಭವಾಗಿ ಆ ಖಾತೆಗೆ ಹಣ ವರ್ಗಾ ವಣೆ ಮಾಡಬಹುದು. ಸಾಲವೂ ಸುಲಭವಾಗಿ ಸಿಗಲಿದೆ.
ಗೃಹ ಸಾಲ ಅಗ್ಗ
ಇತ್ತೀಚೆಗೆ ಗೃಹ ಸಾಲ ಪಡೆಯುವವರ ಸಂಖ್ಯೆ ಹಲವು ಕಾರಣಕ್ಕೆ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಗೃಹ ಸಾಲ ನೀಡಿಕೆ ಹೆಚ್ಚಿಸಲು ಸರಕಾರ 20 ಸಾವಿರ ಕೋಟಿ ರೂ. ಹೆಚ್ಚುವರಿ ಹಣವನ್ನು ರಾಷ್ಟ್ರೀಯ ಗೃಹ ಸಾಲ ಮಂಡಳಿಯಿಂದ ನೀಡಲಾಗುತ್ತದೆ. ಇಂತಹ ಸಾಲದ ಮೇಲಿನ ಕೆಲವು ಕಠಿನ ನಿಯಮಾವಳಿಗಳನ್ನು ಸಡಿಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?