ದೇಗುಲ ನಿರ್ವಹಣೆ ಹೊಣೆ ಸರಕಾರಕ್ಕೇಕೆ: ಸುಪ್ರೀಂ ಪ್ರಶ್ನೆ
Team Udayavani, Apr 10, 2019, 6:00 AM IST
ಹೊಸದಿಲ್ಲಿ: ಹಿಂದೂ ದೇಗುಲಗಳನ್ನು ಸರಕಾರಗಳೇ ಏಕೆ ನಿರ್ವಹಣೆ ಮಾಡಬೇಕು ಎಂದು ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್, ದೇಗುಲಗಳ ನಿರ್ವಹಣೆಯ ಹೊಣೆ ಯಾರಿಗೆ ನೀಡಬೇಕೆಂಬುದನ್ನು ಆಯಾ ದೇಗುಲಗಳ ಭಕ್ತರೇ ನಿರ್ಧರಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟಿದೆ. ಒಡಿಶಾದ ಪುರಿ ಜಗನ್ನಾಥ ದೇಗುಲದಲ್ಲಿ ದೇವರ ವಿಗ್ರಹಗಳು ಕಾಣೆಯಾಗಿರುವುದು, ಅವ್ಯವಹಾರಗಳು ಹಾಗೂ ಭಕ್ತಾದಿಗಳಿಗೆ ದೇಗುಲದ ಆಡಳಿತ ಮಂಡಳಿಯಿಂದ ಕಿರಿಕಿರಿ ಉಂಟಾಗುತ್ತಿರುವುದರ ವಿರುದ್ಧ ಸಲ್ಲಿಸಲಾಗಿರುವ ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ಹೇಳಿದೆ.
2014ರಲ್ಲಿ ತಮಿಳುನಾಡಿನ ಚಿದಂಬರಂ ನಲ್ಲಿನ 1,500 ವರ್ಷ ಹಳೆಯ ನಟರಾಜ ದೇಗುಲದ ಆಡಳಿತವನ್ನು ತಮಿಳುನಾಡು ಸರಕಾರದಿಂದ ತೆರವುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದನ್ನು, ಸೋಮ ವಾರದ ವಿಚಾರಣೆ ವೇಳೆ ಸ್ಮರಿಸಿದ ನ್ಯಾಯ ಮೂರ್ತಿ ಬೋಬ್ದೆ, ಆ ತೀರ್ಪನ್ನು ಪುರಿ ಜಗನ್ನಾಥ ದೇಗುಲ ಪ್ರಕರಣದ ವಿಚಾರಣೆ ಸಂದ ರ್ಭದಲ್ಲೂ ಪರಿಗಣಿಸುವುದಾಗಿ ತಿಳಿಸಿದರು.
“”ತಮಿಳುನಾಡಿನ ಹಲವಾರು ದೇಗುಲಗಳಲ್ಲಿ ದೇವರ ಮೂರ್ತಿಗಳು ಕಳವಾಗಿರುವ ಪ್ರಕರಣ ಗಳು ಇನ್ನೂ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ದೇವರ ಮೂರ್ತಿಗಳು ಭಕ್ತರ ಪಾಲಿಗೆ ಅಮೂಲ್ಯ ವಾದಂಥವು. ಹೀಗಿರುವಾಗ, ದೇಗುಲ ದಲ್ಲಿ ಇಂಥ ಗುರುತರ ಕಳ್ಳತನ ಗಳಾ ಗುತ್ತಿದ್ದರೂ ದೇವಸ್ಥಾನಗಳ ನಿರ್ವಹಣೆ ಮಾಡುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ” ಎಂದು ನ್ಯಾ| ಬೋಬ್ದೆ ಹೇಳಿದ್ದಾರೆ. ವಿಚಾರಣೆ ವೇಳೆ, ಕಕ್ಷಿ ದಾರರಾದ ಗೋವ ರ್ಧನ ಮಠದ ಜಗದ್ಗುರು ಶಂಕರಾ ಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಯವರ ಪರ ವಕೀಲ ಸುಚಿತ್ ಮೊಹಾಂತಿ ಮಾತ ನಾಡಿ, “”ಭಕ್ತರ ಧಾರ್ಮಿಕ ಆಚರಣೆಗಳಲ್ಲಿ ದೇಗು ಲದ ಆಡಳಿತ ಮಂಡಳಿಗಳು ಮೂಗು ತೂರಿಸುತ್ತಿರುವು ದರಿಂದಲೇ ಕೆಲವಾರು ಧಾರ್ಮಿಕ ಉತ್ಸವಗಳ ಸಂದರ್ಭಗಳಲ್ಲಿ ಕಾಲ್ತುಳಿತದಂಥ ಪ್ರಕರಣಗಳು ದೇಗುಲಗಳಲ್ಲಿ ಸಂಭವಿಸುತ್ತವೆ” ಎಂದರು.