60 ದಿನಗಳಲ್ಲೇ ಅಮ್ಮಾ ಸೀಟಿಗೆ ಬಂದ ಚಿನ್ನಮ್ಮ
Team Udayavani, Feb 6, 2017, 3:45 AM IST
ಚೆನ್ನೈ: ತಮಿಳುನಾಡಿನಲ್ಲಿ ಇನ್ನು ಶಶಿಕಲಾ ಹೊಳಪು. ಜಯಲಲಿತಾಗೆ ಪ್ರಿಯವಾಗಿದ್ದ ಕಡುಹಸಿರು ಬಣ್ಣದ ಸೀರೆಯನ್ನೇ ತೊಟ್ಟ ಶಶಿಕಲಾ (ಚಿನ್ನಮ್ಮ) ಮೊಗದಲ್ಲಿ ಅಧಿಕಾರದ ಮುಗುಳ್ನಗೆ !
ಮುಖ್ಯಮಂತ್ರಿ ಕುರ್ಚಿಗಾಗಿ ವಿ.ಕೆ. ಶಶಿಕಲಾ ನಟರಾಜನ್ ನಡೆಸಿದ ತೆರೆಮರೆಯ ಎಲ್ಲ ಪ್ರಯತ್ನಗಳೂ ಸಫಲಗೊಂಡಿದ್ದು, ರವಿವಾರ ನಡೆದ ಶಾಸಕ ಪಕ್ಷ ಸಭೆಯಲ್ಲಿ ಸರ್ವಾನುಮತದಿಂದ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಫೆ. 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪೊಲಿಟಿಕಲ್ ಕ್ಲೈಮ್ಯಾಕ್ಸ್: ಜಯಲಲಿತಾ ನಿಧನದ ಬಳಿಕ ಈ 60 ದಿನಗಳಲ್ಲಿ ತಮಿಳುನಾಡಿನ ರಾಜಕೀಯ ಸಿನಿಮೀಯ ರೂಪ ಪಡೆದಿತ್ತು. ಜಯಲಲಿತಾ ಅಂತ್ಯಸಂಸ್ಕಾರಕ್ಕೂ ಮುನ್ನವೇ ಒ. ಪನ್ನೀರ್ ಸೆಲ್ವಂ ಹಂಗಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರೂ ಒಮ್ಮತದ ನಿರ್ಣಯ ಆಗಿರಲಿಲ್ಲ. ಇದರ ಬೆನ್ನಲ್ಲೇ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಸಿಎಂ ಸ್ಥಾನಕ್ಕೆ ತೆರೆಮರೆಯ ಕಸರತ್ತು ನಡೆಸಿ, ಪಕ್ಷದ ಶಾಸಕರನ್ನು ಓಲೈಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಶಾಸಕ ಪಕ್ಷದ ಸಭೆಯ ನಿರ್ಣಯವನ್ನು ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ಅವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಲಾಗಿದೆ.
ಪನ್ನೀರ್ ಸೆಲ್ವಂ ರಾಜೀನಾಮೆ: ಪಕ್ಷದ ಸಭೆಗೂ ಮುನ್ನವೇ ಒ. ಪನ್ನೀರ್ ಸೆಲ್ವಂಗೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಸೂಚಿಸಿದ್ದು, ಅದರಂತೆ ಅವರು ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಮುಂದಿಟ್ಟಿದ್ದಾರೆ. ಈ ಮೂಲಕ ಪನ್ನೀರ್ ತನ್ನ 60 ದಿನಗಳ ಸಿಎಂ ಹುದ್ದೆಯ ಚುಟುಕು ಇನ್ನಿಂಗ್ಸ್ ಅನ್ನು ಮುಗಿಸಿದಂತಾಗಿದೆ.
ಪನ್ನೀರ್ ಒತ್ತಾಯ!: ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ಅನಂತರ ಶಶಿಕಲಾ, “ಅಮ್ಮನ ನಿಧನದ ಬಳಿಕ ಪನ್ನೀರ್ ಸೆಲ್ವಂ ಅವರೇ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗುವಂತೆ ಕೇಳಿ ಕೊಂಡರು. ಈಗ ಸಿಎಂ ಆಗುವಂತೆಯೂ ಅವರೇ ಒತ್ತಾಯಿಸಿದರು. ಅಮ್ಮ ನಡೆದ ಹಾದಿಯಲ್ಲೇ ಸಾಗೋಣ. ವಿಪಕ್ಷಗಳು ಎಐಎಡಿಎಂಕೆ ಹೋಳಾ ಗುವುದನ್ನು ಬಯಸಿದ್ದವು. ಆದರೆ, ಅದು ಸಾಧ್ಯವಾಗಿಲ್ಲ’ ಎಂದಿದ್ದಾರೆ.
ಡಿಎಂಕೆ ವಾಗ್ಧಾಳಿ: ಆಡಳಿತಾರೂಢ ಎಐಎ ಡಿಎಂಕೆ ಪಕ್ಷದ ಸಿನಿಮೀಯ ನಡೆಗಳನ್ನು ಡಿಎಂಕೆ ಖಂಡಿಸಿದೆ. ಚೆನ್ನೈಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್ “ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಜನ ಜಯಲಲಿತಾ ಅವರ ಮುಖ ನೋಡಿ ಮತ ನೀಡಿದ್ದರು ವಿನಾ ಪನ್ನೀರ್ ಸೆಲ್ವಂಗಾಗಲೀ ಜಯಲಲಿತಾ ಅವರ ಮನೆಕೆಲಸದಾಕೆಗಾಗಲೀ ಮತ ಹಾಕಿರಲಿಲ್ಲ’ ಎನ್ನುವ ಮೂಲಕ ಶಶಿಕಲಾ ಅವರನ್ನು “ಕೆಲಸದಾಳು’ಗೆ ಹೋಲಿಸಿದ್ದಾರೆ. “ಈಗ ರಚನೆಗೊಳ್ಳುತ್ತಿರುವ ಸರಕಾರ ಜನಾದೇಶದಿಂದ ರೂಪುಗೊಂಡಿದ್ದಲ್ಲ. ಇಂಥ ಸ್ಥಿತಿಯಲ್ಲಿ ನಮ್ಮ ಪಕ್ಷವೇ ಇದ್ದಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳುತ್ತಿದ್ದೆವು. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಹೇಳಿದ್ದಾರೆ.