ದರ್ಶನ ಪಡೆಯದೆ ಮಹಿಳೆಯರು ವಾಪಸ್
Team Udayavani, Dec 25, 2018, 6:00 AM IST
ಶಬರಿಮಲೆ: ಅಯ್ಯಪ್ಪ ದೇಗುಲ ಪ್ರವೇಶಿಸಲು ಸೋಮವಾರ ಇಬ್ಬರು ಮಹಿಳೆಯರು ಪ್ರಯತ್ನ ಮಾಡಿದ್ದು, ಭಕ್ತರ ಪ್ರಬಲ ಪ್ರತಿರೋಧದ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರಯತ್ನ ಕೈಬಿಟ್ಟಿದ್ದಾರೆ. ಚೆನ್ನೈನ ಮನಿತಿ ತಂಡದ ಸದಸ್ಯರಾಗಿರುವ ಬಿಂದು ಮತ್ತು ಕನಕದುರ್ಗಾ ಎಂಬ ಇಬ್ಬರು ವಾಪಸಾದ ಮಹಿಳೆಯರು. ಈ ಘಟನೆಗೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಮಾಡಿಯೇ ಮಾಡುತ್ತೇವೆ ಎಂದು ನಿರ್ಧರಿಸಿದ ಇಬ್ಬರು ಮಹಿಳೆಯರು ಬೆಳಗ್ಗೆ ಪಂಪಾ ನದಿ ತೀರ ತಲುಪಿದ್ದರು. ಅಪಚಿಮೇಡುವಿನಲ್ಲಿ ಅವರಿಗೆ ಭಕ್ತರಿಂದ ಪ್ರತಿರೋಧ ಉಂಟಾಯಿತು. ಪೊಲೀಸರ ಭದ್ರತೆಯಲ್ಲಿ ದೇಗುಲದತ್ತ ತೆರಳುತ್ತಿದ್ದಂತೆ ಸನ್ನಿಧಾನಂನಿಂದ 1 ಕಿಮೀ ದೂರದಲ್ಲಿರುವ ಮರಕ್ಕೂಟಂನಲ್ಲಿ ಭಾರಿ ಸಂಖ್ಯೆ ಯಲ್ಲಿದ್ದ ಭಕ್ತರು ಅವರನ್ನು ತಡೆದರು. ಈ ವೇಳೆ ಪೊಲೀಸರು-ಭಕ್ತರ ನಡುವೆ ತಳ್ಳಾ ಟವೂ ನಡೆಯಿತು. ಪರಿಸ್ಥಿತಿ ಕೈಮೀರುತ್ತಿದೆ ಎಂದಾಗ ಪೊಲೀಸರು ಮಹಿಳೆಯರಿಗೆ ಹಿಂತಿರುಗುವಂತೆ ಸೂಚಿಸಿದರು.