ಅಖಿಲೇಶ್ ಫೋಟೋ ಇರುವ ಶಾಲಾ ಬ್ಯಾಗ್ ವಿತರಣೆ: ಸಿಎಂ ಯೋಗಿ ನಿರ್ಧಾರ!
Team Udayavani, May 2, 2017, 4:00 PM IST
ಲಕ್ನೋ: ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಈಗಾಗಲೇ ಜನಪ್ರಿಯತೆಗಳಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಜೆಪಿಯ ಫೈಯರ್ ಬ್ರ್ಯಾಂಡ್ ಮುಖಂಡ ಯೋಗಿ ಆದಿತ್ಯನಾಥ ಈಗ ಮತ್ತೊಂದು ಮುಖ್ಯವಾದ ನಿರ್ಧಾರ ಕೈಗೊಂಡಿದ್ದಾರೆ. ಹೌದು ಮಾಜಿ ಸಿಎಂ ಅಖಿಲೇಶ್ ಯಾದವ್ ಫೋಟೋ ಹೊಂದಿರುವ ಶಾಲಾ ಬ್ಯಾಗ್ ವಿತರಿಸಲು ಸಿಎಂ ಯೋಗಿ ನೇತೃತ್ವದ ಸರ್ಕಾರ ಅನುಮತಿ ನೀಡಿದೆ.
ಅರೇ ಇದೇನಪ್ಪಾ ಅಂತ ಅಚ್ಚರಿಯಾಗುತ್ತಿದೆಯೇ? ಹಾಲಿ ಮುಖ್ಯಮಂತ್ರಿಗಳ ಫೋಟೋ ಬದಲು ಮಾಜಿ ಸಿಎಂ ಫೋಟೋ ಬಳಕೆ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಸುಳಿದಾಡುತ್ತಿರಬಹುದು..
ಅಖಿಲೇಶ್ ಯಾದವ್ ಫೋಟೋ ಹೊಂದಿರುವ ಶಾಲಾ ಬ್ಯಾಗ್ ವಿತರಿಸಲು ನಿಜವಾದ ಕಾರಣ ಏನು ಗೊತ್ತಾ…ಸಾರ್ವಜನಿಕರ ಹಣ ಪೋಲಾಗಬಾರದು ಎಂಬ ಕಾಳಜಿ ಯೋಗಿ ಆದಿತ್ಯನಾಥ ಅವರದ್ದು! ಶಾಲಾ ಬ್ಯಾಗ್ ಗಳಲ್ಲಿ ಹಿಂದಿನ ಉತ್ತರಪ್ರದೇಶ ಸರ್ಕಾರ ಅಖಿಲೇಶ್ ಯಾದವ್ ಅವರ ಫೋಟೋ ಹಾಕಿ ತಯಾರು ಮಾಡಿ ಇಟ್ಟಿತ್ತು. ಆದರೆ ಈ ಬಾರಿ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಪರಾಜಯಗೊಂಡು, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದ ಗದ್ದುಗೆ ಏರಿದೆ.
ಈ ನಿರ್ಧಾರದಿಂದಾಗಿ ಯೋಗಿ ಆದಿತ್ಯನಾಥ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ ಈ ಗೌರವ ಸೂಚಕ ನಿರ್ಧಾರದ ಬಗ್ಗೆ ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.