ಪೊಲೀಸರ ಕ್ರೌರ್ಯಕ್ಕೆ ಆಟೊ ಚಾಲಕ ಬಲಿ ; ತೆಂಕಾಸಿ ಜಿಲ್ಲೆಯಲ್ಲಿ ಬಯಲಾಯಿತು ಮತ್ತೂಂದು ಘಟನೆ
Team Udayavani, Jun 29, 2020, 6:30 AM IST
ಚೆನ್ನೈ: ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ ಹಾಗೂ ಮಗ ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ ತಮಿಳುನಾಡು ಪೊಲೀಸರ ಕ್ರೌರ್ಯಕ್ಕೆ ಕುಮಾರೇಸನ್ ಎಂಬ ಆಟೋಚಾಲಕ ಬಲಿಯಾಗಿದ್ದಾನೆ.
ತೆಂಕಾಸಿ ಜಿಲ್ಲೆಯ ವೀರಕೇರಳಂಪುದೂರ್ನಲ್ಲಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಭೂ ವಿವಾದ ಪ್ರಕರಣದಲ್ಲಿ ವಿಚಾರಣೆ ನಡೆಸಲೆಂದು ಆಟೊ ಚಾಲಕ ಎನ್.ಕುಮಾರೇಸನ್ನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು, ಅಲ್ಲೇ ಇರಿಸಿಕೊಂಡು ಹಲ್ಲೆ ನಡೆಸಿದ್ದಾರೆ.
ಮರುದಿನ ಮನೆಗೆ ಬಂದಾಗ ನೋವಿನಿಂದ ಬಳಲುತ್ತಿದ್ದ ಆತನನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಕಿಡ್ನಿ ಹಾಗೂ ಕಿಬ್ಬೊಟ್ಟೆಯ ಮೇಲ್ಭಾಗಕ್ಕೆ ತೀವ್ರ ಹಾನಿಯಾಗಿರುವುದಾಗಿ ತಿಳಿಸಿ ಚಿಕಿತ್ಸೆ ನೀಡುತ್ತಿದ್ದರು.
ಇದನ್ನೂ ಓದಿ: ಪೊಲೀಸರ ಹಿಂಸೆಗೆ ತಂದೆ, ಮಗ ಬಲಿ?
ಆದರೆ, 15 ದಿನಗಳ ಬಳಿಕ ಕುಮಾರೇಸನ್ ಶನಿವಾರ ಮೃತಪಟ್ಟಿದ್ದಾನೆ. ಪೊಲೀಸರ ಕ್ರೌರ್ಯ ಖಂಡಿಸಿ ಮೃತನ ಸಂಬಂಧಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಠಾಣೆಯಲ್ಲಿ ನಡೆದಿದ್ದನ್ನು ಹೇಳಿದರೆ ನಿನ್ನ ತಂದೆಗೆ ಹಿಂಸೆ ನೀಡುವುದಾಗಿ ಪೊಲೀಸರು ಕುಮಾರೇಸನ್ಗೆ ಬೆದರಿಕೆ ಹಾಕಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಎಸ್ಸೈ ಚಂದ್ರಶೇಖರ್ ಮತ್ತು ಪೇದೆ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಜಯರಾಜ್ ಹಾಗೂ ಪುತ್ರನ ಸಾವಿನ ಪ್ರಕರಣದ ತನಿಖೆಯನ್ನು ತಮಿಳುನಾಡು ಸರಕಾರ ಸಿಬಿಐಗೆ ವಹಿಸಿ ರವಿವಾರ ಆದೇಶ ಹೊರಡಿಸಿದೆ.