ಮುಂದಿನ ಪೀಳಿಗೆಗೆ ಸಂಸ್ಕೃತಿ-ಸಾಹಿತ್ಯದ ಅಭಿರುಚಿ ಆವಶ್ಯಕ: ಪೇಟೆಮನೆ ಪ್ರಕಾಶ್
Team Udayavani, Jul 26, 2021, 1:08 PM IST
ಮುಂಬಯಿ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಶ್ರೀಗಳ ಇಚ್ಛೆಯಂತೆ ಅವರ ಷಷ್ಠ Âಬ್ದ ಕಾರ್ಯಕ್ರಮವನ್ನು ಸರಳವಾಗಿ ಸಾಹಿತ್ಯ, ಸಂಸ್ಕೃತಿ, ಕಲೆ, ಭಜನೆಗಳ ಮೂಲಕ ವರ್ಷಪೂರ್ತಿ ಆಚರಿಸುವುದು ನಮ್ಮ ಉದ್ದೇಶ. ಆದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಗ್ರಾಮಗಳಲ್ಲಿ ಈಗಾಗಲೇ ಅರ್ಥಪೂರ್ಣವಾಗಿ ಸಮಿತಿಯು ಅರವತ್ತರ ಸಂಭ್ರಮವನ್ನು ಆಚರಿಸುತ್ತಿದೆ.
ಅಗತ್ಯ ಕಂಡ ಅರವತ್ತು ಕುಟುಂಬಗಳಿಗೆ ಸಹಾಯ ಹಸ್ತ ನೀಡಿದೆ. ಷಷ್ಠ Âಬ್ದ ಆಚರಣೆಯ ಮುಂಬಯಿ ಸಮಿತಿಯು ಅದೇ ನಿಟ್ಟಿನಲ್ಲಿ ಮುಂದುವರಿದು ಸಂಸ್ಕೃತಿ ಮೇಳೈಸುವ ಕಲೆ-ಸಾಹಿತ್ಯ ಮುಂದಿನ ಪೀಳಿಗೆಗೆ ದಾಟಿಸುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಾ, 42ನೇ ಕಾರ್ಯಕ್ರಮದ ಅಂಗವಾಗಿ ಅಧ್ಯಾತ್ಮದ ವಿಷಯವಾಗಿರುವ ಕವಿಗೋಷ್ಠಿಯನ್ನು ಆಯೋಜಿಸುತ್ತಿದ್ದೇವೆ ಎಂದು ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಪೇಟೆಮನೆ ಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು.
ನವಿಮುಂಬಯಿ ಕನ್ನಡ ಸಂಘದ ಸಹಯೋಗದಲ್ಲಿ ಹಾಗೂ ಕನ್ನಡ ಕಲಾ ಕೇಂದ್ರದ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನವಿಮುಂಬಯಿ ಕನ್ನಡ ಸಂಘದ ದಿ| ಎಂ. ಬಿ. ಕುಕ್ಯಾನ್ ಸಭಾಗೃಹದಲ್ಲಿ ಜರಗಿದ ಶ್ರೀಗಳ ಷಷ್ಠ Âಬ್ದ ಸಂಭ್ರಮಾಚರಣೆಯ “ಜ್ಞಾನವಾಹಿನಿ-2021’ರ 42ನೇ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಶುಭ ಹಾರೈಸಿದರು.
ಅತಿಥಿಯಾಗಿದ್ದ ಜಗದೀಶ್ ಶೆಟ್ಟಿ ಪನ್ವೆಲ್ ಮಾತನಾಡಿ, ಈಗಾಗಲೇ ಭಜನೆ, ತಾಳ ಮದ್ದಲೆ, ಕವಿಗೋಷ್ಠಿ, ಸಹಸ್ರನಾಮ, ಹರಿಕಥೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾಮೀಜಿಯವರ ಷಷ್ಠ Âಬ್ದ ಕಾರ್ಯಕ್ರಮಕ್ಕೆ ಶೋಭೆ ತರಲಾಗಿದೆ ಎಂದರು.
ಇನ್ನೋರ್ವ ಅತಿಥಿ ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ. ಆರ್. ಮಾತನಾಡಿ, ಇಂತಹ ಕಾರ್ಯಕ್ರಮಗಳು ಆಶಾದಾಯಕ ಎಂದು ಶುಭ ಹಾರೈಸಿದರು.
ಸಾನ್ವಿ ಜೆ. ರೈ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಎಂ.ವಿ.ಎಂ. ಕಾಲೇಜ್ನ ಪ್ರಾಂಶುಪಾಲ ಡಾ| ಗೋಪಾಲ್ ಕಲ್ಕೋಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಗಳಾಗಿ ಗೋಪಾಲ ತ್ರಾಸಿ, ಬಿ.ಎಚ್. ಕಟ್ಟಿ, ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ಸಂಚಾಲಕ ದಾಮೋದರ್ ಶೆಟ್ಟಿ, ನವಿಮುಂಬಯಿ ಕನ್ನಡ ಸಂಘದ ಗೌರವ ಕಾರ್ಯದರ್ಶಿ ಜಗದೀಶ್ ಡಿ. ರೈ, ಜಯ ಶೆಟ್ಟಿ, ಸ್ವರ್ಣಲತಾ ಡಿ. ಶೆಟ್ಟಿ ಉಪಸ್ಥಿತರಿದ್ದರು.
ಒಡಿಯೂರು ಸಮಿತಿಯ ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ, ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ವಿ. ಕೆ. ಸುವರ್ಣ, ಅನಿಲ್ ಕುಮಾರ್ ಹೆಗ್ಡೆ, ಸಾಹಿತ್ಯಾಸಕ್ತರು ಮತ್ತು ಸ್ವಾಮಿಗಳ ಭಕ್ತರು ಉಪಸ್ಥಿತರಿದ್ದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.