ರೈತರ ಸಾಲಮನ್ನಾ ಯೋಜನೆ 26 ಲಕ್ಷ ಮಂದಿಗೆ ಲಾಭ: ಪಾಟೀಲ್
Team Udayavani, Aug 10, 2020, 5:44 PM IST
ಸಾಂದರ್ಭಿಕ ಚಿತ್ರ
ಮುಂಬಯಿ, ಆ. 9: ರಾಜ್ಯದಲ್ಲಿ ಮಹಾವಿಕಾಸ್ ಅಘಾಡಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 28 ಲಕ್ಷಕ್ಕಿಂತ ಅಧಿಕ ರೈತರನ್ನು ಸಾಲದ ಹೊರೆಯಿಂದ ಮುಕ್ತರನ್ನಾಗಿಸಲು ನಿರ್ಧರಿಸಿದ್ದು, ಇಲ್ಲಿಯ ತನಕ 26 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಲ್ಲಿ 16,000 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದ್ದು, ಬಾಕಿ ಉಳಿದ 2.82 ಲಕ್ಷ ರೈತರ ಖಾತೆಗಳಿಗೆ 2 ಸಾವಿರ ಕೋಟಿ ರೂ. ಗಳನ್ನು 10 ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ಸಹಕಾರಿ ಮತ್ತು ಮಾರುಕಟ್ಟೆ ಖಾತೆ ರಾಜ್ಯ ಸಚಿವ ಬಾಳಾಸಾಹೇಬ್ ಪಾಟೀಲ್ ತಿಳಿಸಿದ್ದಾರೆ.
ರಾಜ್ಯದಲ್ಲಿಯ ರೈತರ 1.5 ಲಕ್ಷ ರೂ. ಗಳವರೆಗೆ ಸಾಲ ಮನ್ನಾ ಮಾಡಲು ಬಿಜೆಪಿ-ಶಿವಸೇನೆ ಮೈತ್ರಿ ಸರಕಾರವು 2017ರ ಜೂನ್ 24ರಂದು ಛತ್ರಪತಿ ಶಿವಾಜಿ ಮಹಾರಾಜ್ ಶೆತ್ಕರಿ ಸಮ್ಮಾನ ಯೋಜನೆಯನ್ನು ಜಾರಿಗೊಳಿಸಿತ್ತು. ಬಳಿಕ ಅಧಿಕಾರಕ್ಕೆ ಬಂದ ಮಹಾವಿಕಾಸ್ ಅಘಾಡಿ ಸರಕಾರವು ಹಿಂದಿನ ಸರಕಾರದ ಯೋಜನೆಯ ಹೆಸರನ್ನು ಮಹಾತ್ಮಾ ಜ್ಯೋತಿರಾವ್ ಫುಲೆ ಶೆತ್ಕರಿ ಸಾಲಮುಕ್ತ ಯೋಜನೆ ಎಂದು ಬದಲಾಯಿಸಿ, 2019ರ ಡಿಸೆಂಬರ್ 27ರಂದು ಜಾರಿಗೊಳಿಸಲಾಯಿತು. ಈ ಯೋಜನೆಯಡಿಯಲ್ಲಿ 2015ರ ಎಪ್ರಿಲ್ 1ರಿಂದ 2019ರ ಮಾರ್ಚ್ 31ರ ವರೆಗೆ ಸಾಲ ಹೊಂದಿರುವ ರೈತರ 2 ಲಕ್ಷ ರೂ.ವರೆಗಿನ ಬಾಕಿ ಸಾಲಮನ್ನಾ ಮಾಡಲು ನಿರ್ಧರಿಸಲಾಯಿತು. ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದಂತೆ ರಾಜ್ಯ ಸರಕಾರ ಮಾರ್ಚ್ನಲ್ಲಿ ಲಾಕ್ಡೌನ್ ಜಾರಿಗೊಳಿಸಿತ್ತು.
ಇದರ ಪರಿಣಾಮವಾಗಿ ರಾಜ್ಯದ ಆರ್ಥಿಕ ಚಕ್ರ ಸ್ಥಗಿತಗೊಂಡಿತು. ನೌಕರರ ವೇತನವನ್ನು ಪಾವತಿಸಲು ಸರಕಾರದ ಬಳಿ ಸಾಕಷ್ಟು ಹಣವಿಲ್ಲದ ಕಾರಣ ರೈತರ ಸಾಲ ಮನ್ನಾ ಯೋಜನೆಗೂ ಸಮಸ್ಯೆ ಉಂಟಾಯಿತು. ಆದರೆ, ಅಂತಹ ಪರಿಸ್ಥಿತಿಯಲ್ಲಿಯೂ ರಾಜ್ಯ$ಸರಕಾರ 28.84 ಲಕ್ಷ ಸಾಲಮನ್ನಾಕ್ಕೆ ಅರ್ಹ ರೈತರ ಪೈಕಿ 26 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಲ್ಲಿ 16,000 ಕೋಟಿ ರೂ.ಗಳನ್ನು ಮಾಡಿದೆ. ಇನ್ನೂ ಬಾಕಿ ಉಳಿದ ರೈತರ ಖಾತೆಗಳಲ್ಲಿ ಸಾಲಮನ್ನಾದ ಮೊತ್ತವನ್ನು ಮುಂದಿನ 10 ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.