“ಕಲ್ಯಾಣ್-ಡೊಂಬಿವಲಿಯತ್ತ ಸರಕಾರದ ಗಮನ ಅಗತ್ಯ’
Team Udayavani, Jul 7, 2020, 5:30 PM IST
ಮುಂಬಯಿ, ಜು. 6: ಕಲ್ಯಾಣ್-ಡೊಂಬಿವಲಿ ಪ್ರದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೋವಿಡ್ -19 ಬಗ್ಗೆ ಮಹಾರಾಷ್ಟ್ರ ಸರಕಾರ ತತ್ಕ್ಷಣ ಗಮನ ಹರಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಪರಿಸ್ಥಿತಿಯ ಬಗ್ಗೆ ವಿಶ್ಲೇಷಿಸಲು ಫಡ್ನವೀಸ್ ಅವರು ಕಲ್ಯಾಣ್-ಡೊಂಬಿವಲಿಯ ಕೋವಿಡ್ -19 ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಕಲ್ಯಾಣ್ ಪಶ್ಚಿಮದ ಹೋಲಿಕ್ರಾಸ್ ಕೋವಿಡ್ -19 ಆಸ್ಪತ್ರೆಗೆ ಭೇಟಿ ನೀಡಿದ ಅವರು ರೋಗಿಗಳ ಯೋಗಕ್ಷೇಮ ವಿಚಾರಿಸಿ ವೈದ್ಯರೊಂದಿಗೆ ಚರ್ಚಿಸಿದರು. ಕಲ್ಯಾಣ್ -ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಶನಿವಾರ 555 ಹೊಸ ಪ್ರಕರಣ ಗಳನ್ನು ದಾಖಲಿಸಿದ್ದು, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 8,604 ಕ್ಕೆ ಏರಿಕೆಯಾಗಿದೆ. ಪ್ರತಿ ದಿನವೂ 400-500 ಪ್ರಕರಣಗಳು ದಾಖಲಾಗುತ್ತಿರುವುದು ಆತಂಕತದ ವಿಷಯವಾಗಿದೆ. ಈಗ ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಲ್ಯಾಣ್-ಡೊಂಬಿವಲಿಯಲ್ಲಿನ ಕೋವಿಡ್ -19 ಪ್ರಕರಣಗಳು ನಿಯಂತ್ರಣಕ್ಕೆ ಬರುವುದಿಲ್ಲ. ಕಡಿಮೆ ಮಾನವಶಕ್ತಿಯೊಂದಿಗೆ, ನಾಗರಿಕ ಸಂಸ್ಥೆಯು ಅಸ್ತಿತ್ವದಲ್ಲಿರುವ ಸಾಕಷ್ಟುಮೂಲಸೌಕರ್ಯ ಹೊಂದಿರದ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಗರಿಕ ಸಂಸ್ಥೆಗೆ ಹೆಚ್ಚುವರಿ ಮಾನವಶಕ್ತಿಯನ್ನು ಒದಗಿಸಬಹುದೇ ಎಂಬುವುದನ್ನು ರಾಜ್ಯ ಸರಕಾರವು ಪರಿಶೀಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
27 ಗ್ರಾಮಗಳ ಕುರಿತು ಮಹಾರಾಷ್ಟ್ರ ಸರಕಾರದ ಇತ್ತೀಚಿನ ನಿರ್ಧಾರದ ಕುರಿತು ಮಾತನಾಡಿದ ಅವರು, ರಾಜ್ಯವು ಇಡೀ 27 ಹಳ್ಳಿಗಳಿಗೆ ವಿಭಜನೆಯಾಗದಂತೆ ನಾಗರಿಕ ಸಂಸ್ಥೆಯನ್ನು ಪರಿಗಣಿಸಬೇಕಾಗಿತ್ತು. ಕೋವಿಡ್-19 ಅನ್ನು ತಡೆಗಟ್ಟಲು ರಾಜ್ಯವು ಉತ್ತಮವಾಗಿ ಯೋಜನೆ ರೂಪಿಸಬೇಕಾಗಿದೆ. 27 ಹಳ್ಳಿಗಳ ಬಗ್ಗೆ ನಿರ್ಧಾರವನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಇದು ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡಲಿದೆ ಎಂದು ಎಚ್ಚರಿಕೆ ನೀಡಿದರು.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆ(ಕೆಡಿಎಂಸಿ) ಯ ಚುನಾವಣೆಯ ಹಿನ್ನೆಲೆಯಲ್ಲಿ, ಕಳೆದ ತಿಂಗಳು ಮಹಾರಾಷ್ಟ್ರ ಸರಕಾರವು 18 ಗ್ರಾಮಗಳಿಗೆ ಪ್ರತ್ಯೇಕ ಪುರಸಭೆ ರಚಿಸುವ ಅಧಿಸೂಚನೆಯನ್ನು ಜಾರಿಗೊಳಿಸಿದ್ದರೆ, ಉಳಿದಒಂಬತ್ತು ಗ್ರಾಮಗಳು ಕೆಡಿಎಂಸಿಯೊಂದಿಗೆ ಉಳಿಯಲಿವೆ. ಈ ಒಂಬತ್ತು ಗ್ರಾಮದ ಗ್ರಾಮಸ್ಥರು ಅಧಿಸೂಚನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಡಿಎಂಸಿಯಿಂದ ಬೇರ್ಪಡಿಸುವಂತೆ ಒತ್ತಾಯಿಸಿದ್ದಾರೆ. ಈ 27 ಗ್ರಾಮಗಳನ್ನು ಈ ಹಿಂದೆ 2015 ರಲ್ಲಿ ನಡೆದ ನಾಗರಿಕ ಚುನಾವಣೆಗೆ ಮುನ್ನ ಕೆಡಿಎಂಸಿಗೆ ಸೇರಿಸಲಾಯಿತು.