ಕನ್ನಡ ವಿಭಾಗ ಮುಂಬಯಿ ವಿವಿ : ವಿಶೇಷ ಕಾರ್ಯಾಗಾರ
Team Udayavani, Feb 27, 2019, 2:48 PM IST
ಮುಂಬಯಿ: ಮಾಧ್ಯಮ ವಿಮರ್ಶೆಗಾಗಿ ಇರುವುದು. ಅದು ವಿಶ್ಲೇಷಣೆಗೆ ಸೀಮಿತವಾಗಿರಬೇಕು. ಹೊಗಳಿಕೆಗಾಗಿ ಅಲ್ಲ. ಹಿಂದೆ ಸುದ್ದಿ ಸಂಗ್ರಹದ ಕಾರ್ಯವು ಕಷ್ಟದಾಯಕವಾಗಿತ್ತು. ಇಂದು ಸುದ್ದಿಗೆ ಸಾಕಷ್ಟು ಮೂಲಗಳಿವೆ. ಮಾಧ್ಯಮದವರು ಭಕ್ತರಾಗದೆ ವಿಮರ್ಶಕರಾಗಬೇಕು. ಸಮಕಾಲೀನ ಎಲ್ಲ ವಿದ್ಯಮಾನಗಳನ್ನು ಸರಿಯಾಗಿ ವಿಶ್ಲೇಷಿಸುವುದು ಮಾಧ್ಯಮದ ಕೆಲಸ. ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಜವಾಬ್ದಾರಿ ಪತ್ರಿಕೆಯ ಮೇಲಿದೆ. ಜನರಲ್ಲಿ ಜಾಗೃತಿ ಮೂಡಿಸುವುದು ಪತ್ರಿಕೆಗಳ ಉದ್ದೇಶವಾಗಬೇಕು ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಹೇಳಿದರು.
ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಬರವಣಿಗೆಯನ್ನು ರೂಢಿಸಿಕೊಳ್ಳುವ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಪತ್ರಿಕೆ ಸಮುದಾಯವನ್ನು ಕಟ್ಟುವ ಕೆಲಸವನ್ನು ಮಾಡಬೇಕು. ಜನಜಾಗೃತಿಯನ್ನು ಹುಟ್ಟು ಹಾಕಿ ಸಮಾಜಮುಖೀ ಚಿಂತನೆಯನ್ನು ಬೆಳೆಸಬೇಕು. ಸರ್ಕಾರವನ್ನು, ಸಮಾಜವನ್ನು ತಿದ್ದುವ ಜವಾಬ್ದಾರಿ ಮಾಧ್ಯಮದ್ದಾಗಿರಬೇಕು ಎಂದು ಅವರು ಹೇಳಿದರು.
ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ಮುಂಬಯಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿದೆ ಎಂದು ನುಡಿದರು.
ವಿಷಯ ತಜ್ಞರಾಗಿ ಆಗಮಿಸಿದ ಲೇಖಕರಾದ ಲತಾ ಸಂತೋಷ್ ಶೆಟ್ಟಿ ಅವರು ವ್ಯಾಪಕ, ಓದು, ಅಧ್ಯಯನ, ಮುಕ್ತ ಮನಸ್ಸು ಇದ್ದಾಗ ಒಳ್ಳೆಯ ಲೇಖನ ಬರೆಯಲು ಸಾಧ್ಯವಾಗುತ್ತದೆ. ನಾವು ಲೇಖನಕ್ಕೆ ಆರಿಸಿಕೊಳ್ಳುವ ವಿಷಯ ಯಾವುದೇ ಆದರೂ ಅದರ ಬಗ್ಗೆ ಆಸಕ್ತಿ ಮತ್ತು ಜ್ಞಾನ ಇರಬೇಕಾದದ್ದು ಅತೀ ಅಗತ್ಯ. ಲೇಖನ ಬರೆಯುವುದು ಒಂದು ಕಲೆ. ನಿತ್ಯ ನಿರಂತರವಾಗಿ ಬರೆಯುತ್ತಾ ಅಭ್ಯಾಸ ಬಲದಿಂದ ಬರೆಯುವ ಕಲೆ ಸಿದ್ಧಿಸುತ್ತದೆ. ಲೇಖಕರು ತೆರೆದ ಕಣ್ಣು ಮತ್ತು ಹೃದಯದವರಾಗಿರಬೇಕು. ನಾವು ಬರೆಯುವ ಲೇಖನಗಳ ಶೀರ್ಷಿಕೆ, ಉಪಶೀರ್ಷಿಕೆ, ಪೀಠಿಕೆಗಳು ಆಕರ್ಷಕವಾಗಿರಬೇಕು. ಉತ್ತಮ ಓದುಗರು ಮಾತ್ರ ಒಳ್ಳೆಯ ಲೇಖಕರಾಗಲು ಸಾಧ್ಯ ಎಂದು ಲೇಖನ ಬರೆಯುವ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ವೈಭವೀಕರಣ ಸಲ್ಲದು
ಯುವ ಲೇಖಕ, ಕರ್ನಾಟಕ ಮಲ್ಲದ ಹಿರಿಯ ಉಪಸಂಪಾದಕ ವಿಶ್ವನಾಥ ಅಮೀನ್ ನಿಡ್ಡೋಡಿ ಅವರು ಮಾತನಾಡಿ, ಸಮಾಜದಲ್ಲಿ ನಡೆಯುವ ನೈಜ ಘಟನೆಗಳು, ಪ್ರಸ್ತುತ ವಿದ್ಯಮಾನಗಳನ್ನು ಮುಖ್ಯ ಆಕರಗಳನ್ನಾಗಿ ಇಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಒಂದು ವಿಷಯವನ್ನು ಆರಿಸಿಕೊಂಡು ಅದರ ಕುರಿತು ಗಂಭೀರ ಚಿಂತನೆಯನ್ನು ನಡೆಸಿ, ಇತರರೊಂದಿಗೆ ಚರ್ಚಿಸಿ ಬರೆಯಬೇಕು. ವಿಷಯ ಅಥವಾ ವ್ಯಕ್ತಿಯ ವೈಭವೀಕರಣ ಸಲ್ಲದು. ನಾವು ಬರೆಯುವ ವಿಷಯ ನೇರವಾಗಿರಬೇಕು. ಸಮಾಜದ ಸುಧಾರಣೆಯ ಆಶಯದಿಂದಲೇ ಪತ್ರಕರ್ತ ಕಾರ್ಯ ನಿರ್ವಹಿಸುತ್ತಾನೆ. ಒಳ್ಳೆಯ ಬರವಣಿಗೆ, ಸುದ್ದಿ ವಿಶ್ಲೇಷಣೆ ಓದುಗನ ಮೇಲೆ ಖಂಡಿತ ಪರಿಣಾಮ ಬೀರುತ್ತದೆ ಎನ್ನುವುದನ್ನು ಸೋದಾಹರಣವಾಗಿ ವಿವರಿಸಿದರು.
ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಶೋಧನ ಸಹಾಯಕರಾದ ಡಾ| ಉಮಾರಾವ್, ಸುರೇಖಾ ದೇವಾಡಿಗ, ಶಿವರಾಜ್ ಎಂ. ಜಿ, ಶೈಲಜಾ ಹೆಗಡೆ, ಸೋಮಶೇಖರ್ ಮಸಳಿ, ಜಮೀಲಾ ವಿಪ್ಪರಗಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅನಿತಾ ಪೂಜಾರಿ, ತಾಕೋಡೆ, ಉದಯ ಶೆಟ್ಟಿ, ಡಾ| ಕೆ. ಗೋವಿಂದ ಭಟ್, ಜಯ ಪೂಜಾರಿ, ಲಕ್ಷಿ$¾à ಪೂಜಾರಿ ಅವರು ತಮ್ಮ ಲೇಖನಗಳನ್ನು ಪ್ರಸ್ತುತಪಡಿಸಿದರು. ವಿದುಷಿ ವೀಣಾ ಶಾಸ್ತ್ರಿ ಅವರು ಪಂಪ, ಕುಮಾರವ್ಯಾಸ ಭಾರತ, ದಾಸರ ರಚನೆ, ವಚನಗಳನ್ನು ವಿವಿಧ ರಾಗ ಸಂಯೋಜನೆಯೊಂದಿಗೆ ಪ್ರಸ್ತುತಪಡಿಸಿ ಕನ್ನಡ ಕಾವ್ಯದಲ್ಲಿರುವ ಸಂಗೀತದ ಕುರಿತು ಬೆಳಕು ಚೆಲ್ಲಿದರು. ಆಗಮಿಸಿದ ಯುವ ಲೇಖಕರಾದ ವಿಶ್ವನಾಥ ಅಮೀನ್ ನಿಡ್ಡೋಡಿ ಹಾಗೂ ಲತಾ ಸಂತೋಷ್ ಶೆಟ್ಟಿ ಅವರನ್ನು ವಿಭಾಗದ ಪರವಾಗಿ ಶಾಲು ಹೊದಿಸಿ ಗ್ರಂಥ ಗೌರವದೊಂದಿಗೆ ಗೌರವಿಸಲಾಯಿತು. ಪಾರ್ವತಿ ಪೂಜಾರಿ ಅವರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ