ಕನ್ನಡ ಸೇವಾ ಸಂಘ ಪೊವಾಯಿ ತಾಳಮದ್ದಳೆ, ಸಮ್ಮಾನ
Team Udayavani, Sep 30, 2017, 3:01 PM IST
ಮುಂಬಯಿ: ಕನ್ನಡ ಸೇವಾ ಸಂಘ ಪೊವಾಯಿ ಇದರ ತುಳು ಸಾಂಸ್ಕೃತಿಕ ಸಮಿತಿಯ ವತಿಯಿಂದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ಮತ್ತು ಸಮ್ಮಾನ ಕಾರ್ಯಕ್ರಮವು ಇತ್ತೀಚೆಗೆ ಜರಿಮರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಲಾಪ್ರಕಾಶ ಪ್ರತಿಷ್ಠಾನ ಮುಂಬಯಿ ಇದರ ರೂವಾರಿ ಪ್ರಕಾಶ್ ಶೆಟ್ಟಿ ಸುರತ್ಕಲ್ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಾವಿದ ಜಬ್ಬರ್ ಸಮೋ ಅವರು ಓರ್ವ ಜಾತಿ, ಧರ್ಮವನ್ನು ಮೀರಿದ ಕಲಾವಿದರಾಗಿದ್ದಾರೆ. ಕಲೆಗೆ ಜಾತಿ-ಧರ್ಮ ಇಲ್ಲ ಎಂಬುದನ್ನು ಅವರು ನಿರೂಪಿಸಿದ್ದಾರೆ ಎಂದು ನುಡಿದರು.
ಮತ್ತೋರ್ವ ಅತಿಥಿ ಮಹಾಬಲ ಎ. ಕುಂದರ್ ಅವರು ಮಾತನಾಡಿ, ಕನ್ನಡ ಸೇವಾ ಸಂಘ ಪೊವಾಯಿ ಸರ್ವಧರ್ಮದ ಸಂಸ್ಥೆಯಾಗಿದೆ. ಇಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯಿಂದ ಕಲೆ-ಕಲಾವಿದರನ್ನು ಗೌರವಿಸುವ, ಪ್ರೋತ್ಸಾಹಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ಅಭಿನಂದನೀಯವಾಗಿದೆ. ಜಬ್ಟಾರ್ ಸಮೋ ಅವರ ಕಲಾ ಸೇವೆ ಅನುಪಮಾಗಿದೆ ಎಂದು ನುಡಿದು ಶುಭಹಾರೈಸಿದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ, ನಾಟಕ, ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಕನ್ನಡ ಸೇವಾ ಸಂಘ ಪೊವಾಯಿಯ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿದೆ. ಜಬ್ಬರ್ ಸಮೋ ಅವರೋರ್ವ ಮಾದರಿ ಕಲಾವಿದರಾಗಿದ್ದಾರೆ. ಅವರನ್ನು ಗೌರವಿಸಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ನುಡಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ದಿವಾಕರ ಎನ್. ಶೆಟ್ಟಿ ಮುದ್ರಾಡಿ ಅವರು, ಕನ್ನಡ ಸೇವಾ ಸಂಘ ಪೊವಾಯಿಯ ಕಾರ್ಯಚಟುವಟಿಕೆಗಳನ್ನು ನಾನು ಬಹಳ ಸಮೀಪದಿಂದ ನೋಡುತ್ತಿದ್ದೇನೆ. ಸಮಾಜಮುಖೀ ಧೋರಣೆಯಲ್ಲಿ ಸಂಘವು ಸಕ್ರಿಯವಾಗಿರುವುದು ಅಭಿನಂದನೀಯ. ಜಬ್ಬರ್ ಸಮೋ ಅವರನ್ನು ಸಂಸ್ಥೆಯಿಂದ ಸಮ್ಮಾನಿಸಿ ಅಭಿನಂದಿಸುವುದು ನಮಗೆಲ್ಲರಿಗೂ ಆನಂದವಾಯಿತು ಎಂದರು.
ಮತ್ತೋರ್ವ ಗೌರವ ಅತಿಥಿ ಉದ್ಯಮಿ ಜಯಲಕ್ಷ್ಮೀ ಜಗನ್ನಾಥ ಶೆಟ್ಟಿ ಮಾತನಾಡಿ, ಯಕ್ಷಗಾನವನ್ನು ನಾನು ಹತ್ತಿರದಿಂದ ಬಲ್ಲವಳು.ನನ್ನ ತಂದೆ ಅಡ್ವೆ ವಾಸು ಶೆಟ್ಟಿ ಅವರು ಯಕ್ಷಗಾನ ಅರ್ಥದಾರಿ
ಗಳಾಗಿದ್ದರು. ನಾನು ಯಕ್ಷಗಾನವನ್ನು ಪ್ರೀತಿಸುತ್ತೇನೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸೇವಾ ಸಂಘ ಪೊವಾಯಿ ಅಧ್ಯಕ್ಷ ಪಾಂಗಾಳ ನಾನಾಯರ ಗರಡಿ ಪ್ರಭಾಕರ ಎಸ್. ಶೆಟ್ಟಿ ಅವರು ಮಾತನಾಡಿ, ಕನ್ನಡ ಸೇವಾ ಸಂಘವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸ್ಥಾಪನೆಗೊಂಡ ಸಂಸ್ಥೆಯಾಗಿದೆ. ನಾವು ಶಿಕ್ಷಣಕ್ಕೆ ಮುಂದೆಯೂ ಆಧ್ಯತೆಯನ್ನು ನೀಡುತ್ತೇವೆ. ಸಂಘವು ಪ್ರತೀ ವರ್ಷ ಯಕ್ಷಗಾನ, ನಾಟಕ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ತುಳು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸಾಂತೂರು ಅಶೋಕ್ ಎಸ್. ಶೆಟ್ಟಿ ಮತ್ತು ಅವರ ತಂಡದ ಸದಸ್ಯರು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಸಂಘದ ಮಾಜಿ ಅಧ್ಯಕ್ಷರುಗಳಾದ ಸುಧಾಕರ ಪೂಜಾರಿ, ನ್ಯಾಯವಾದಿ ಆರ್. ಜಿ. ಶೆಟ್ಟಿ, ಡಿ. ಕೆ. ಶೆಟ್ಟಿ, ರಮೇಶ್ ಡಿ. ರೈ, ಮಹೇಶ್ ಎಸ್. ಶೆಟ್ಟಿ ಅವರ ಸಹಾಯ, ಪ್ರೋತ್ಸಾಹ ಅಪಾರವಾಗಿದೆ. ಸಂಘದ ಮಹಿಳಾ ವಿಭಾಗವು ಸಂಸ್ಥೆಯ ಪ್ರಗತಿಯಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಕಲಾವಿದ, ಅರ್ಥದಾರಿ ಜಬ್ಟಾರ್ ಸಮೋ ಅವರನ್ನು ಗೌರವಿಸಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ನುಡಿದು ಶುಭಹಾರೈಸಿದರು.
ಸಮಾರಂಭದಲ್ಲಿ ಯಕ್ಷಗಾನ ಅರ್ಥದಾರಿ ಜಬ್ಬರ್ ಸಮೋ ಅವರನ್ನು ಗಣ್ಯರ ಸಮ್ಮುಖದಲ್ಲಿ ಬಿರುದು ಪ್ರದಾನಿಸಿ ಸಮ್ಮಾನಿಸಿ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಜಬ್ಬರ್ ಸಮೋ ಅವರು, ಮುಂಬಯಿ ಮಹಾನಗರದಲ್ಲಿ ನಾನು ನಿಮ್ಮೆಲ್ಲರ ಪ್ರೀತಿಗೆ ಅಭಾರಿಯಾಗಿದ್ದೇನೆ. ಇದು ಅರ್ಥಪೂರ್ಣ ಸಮ್ಮಾನವಾಗಿದೆ. ಇದು ನನ್ನ ಶರೀರದಲ್ಲಿರುವ, ಹೃದಯದಲ್ಲಿರುವ ಕಲೆಗೆ ಧಕ್ಕಿದ ಸಮ್ಮಾನವಾಗಿದೆ. ಕಲಾಸೇವೆಯು ನನ್ನ ಉಸಿರಿರುವರೆಗೆ ಮಾಡುತ್ತೇನೆ. ಈ ಸಮ್ಮಾನವನ್ನು ಕಲೆಗೆ ಅರ್ಪಿಸುತ್ತಿದ್ದೇನೆ ಎಂದರು.
ವೇದಿಕೆಯಲ್ಲಿ ತುಳು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸಾಂತೂರು ಅಶೋಕ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಎಸ್. ಶೆಟ್ಟಿ, ಕಲಾಪ್ರಕಾಶ ಪ್ರತಿಷ್ಠಾನದ ಸಂಚಾಲಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್, ಸಂಘದ ಕೋಶಾಧಿಕಾರಿ ಸಂದೇಶ್ ಆರ್. ಶೆಟ್ಟಿ ಮೂಡುಬೆಳ್ಳೆ, ಗೌರವ ಕಾರ್ಯದರ್ಶಿ ನಾಗರಾಜ ಗುರುಪುರ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ನಾಗರಾಜ ಗುರುಪುರ ಸ್ವಾಗತಿಸಿದರು. ಬಾಲಕೃಷ್ಣ ಜೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕಲಾವಿದರುಗಳಾದ ಮೋಹನ್ ಮಾರ್ನಾಡ್, ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ, ಹಿರಿಯರಾದ ಜಯ ಶೆಟ್ಟಿ, ಭವಾನಿ ಶೆಟ್ಟಿ, ಸಂಘಟಕ ಕರುಣಾಕರ ಶೆಟ್ಟಿ ಕುಕ್ಕುಂದೂರು, ತಾಳಮದ್ದಳೆಯ ಕಲಾವಿದರನ್ನು ಗೌರವಿಸಲಾಯಿತು. ಸಮ್ಮಾನ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ಆರ್. ಜಿ. ಶೆಟ್ಟಿ, ಡಿ. ಕೆ. ಶೆಟ್ಟಿ, ರಮೇಶ್ ಡಿ. ರೈ, ಸದಸ್ಯ ಪ್ರವೀಣ್ ಶೆಟ್ಟಿ ಐಐಟಿ, ಮಾಜಿ ಅಧ್ಯಕ್ಷ ದಯಾನಂದ ಸಿ. ಬಂಗೇರ, ಪ್ರಭಾಕರ ಪಣಿಯೂರು, ಅಮಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ