ತುಳು-ಕನ್ನಡಿಗರಿಂದ ಸಂಸದ ಗೋಪಾಲ ಶೆಟ್ಟಿ ಅಭಿನಂದನಾ ಸಮಾರಂಭ
Team Udayavani, Mar 4, 2019, 2:05 AM IST
ಮುಂಬಯಿ: ಮರಾಠಿಗರು ಮತ್ತು ತುಳು ಕನ್ನಡಿಗರದ್ದು ಸಾಮೀಪ್ಯದ ಸಂಬಂಧ ವಾಗಿದೆ. ಯಾವುದೇ ಸೇವೆಗೆ ತುಳು ಕನ್ನಡಿಗರು ನಿಷ್ಠಾವಂತರಾಗಿದ್ದು, ಅಂತಹ ನಿಷ್ಠೆವುಳ್ಳ ಗೋಪಾಲ ಶೆಟ್ಟಿ ಅವರು ನಿಷ್ಕಳಂಕ ಸೇವೆಗೆ ಬೆಸ್ಟ್ ಎಂಪಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಸ್ಕೃತಿ ಪ್ರಿಯರಾದ ತುಳು ಕನ್ನಡಿಗರು ಬಾಳಿನಲ್ಲೂ, ವ್ಯವಹಾರದಲ್ಲೂ ಸಂಸ್ಕೃತಿಯನ್ನು ಮೈಗೂಡಿಸಿದ್ದಾರೆ. ಆದ್ದರಿಂದ ಮರಾಠಿಗರು ಮತ್ತು ತುಳು-ಕನ್ನಡಿಗರು ಆಪ್ತ ಬಂಧುಗಳಂತೆ ಬಾಳುತ್ತಿದ್ದೇವೆ. ಗೋಪಾಲ ಶೆಟ್ಟಿ ಅವರ ಶಿಸ್ತಿನ ಜೀವನ, ಕಾರ್ಯ ತತ್ಪರತೆ, ವ್ಯವಹಾರ ಜ್ಞಾನ, ಮಾತಿನ ಮೋಡಿ, ಪ್ರಾಮಾಣಿಕತೆ ಎಲ್ಲವೂ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ಅವರು ತನ್ನ ಸ್ಥಾನಮಾನಗಳ ದುರ್ಬಳಕೆ ಮಾಡಿದವರಲ್ಲ. ಯಾವತ್ತೂ ತನ್ನ ಖಾಸಗಿ ವಿಚಾರಕ್ಕೆ ಬಳಸಿ ಮಹಾರಾಷ್ಟ್ರದ ಸಚಿವಾಲಯಕ್ಕಾಗಲಿ, ಕೇಂದ್ರದ ಪಾರ್ಲಿಮೆಂಟಿಗೂ ಕೊಂಡೊಯ್ದವರಲ್ಲ. ಅವರು ಬೃಹನ್ಮುಂಬಯಿ ಮಹಾನಗರಕ್ಕೆ ನೂತನ ಆಯಾಮವನ್ನು ನೀಡಿದ ವ್ಯಕ್ತಿಯಾಗಿದ್ದಾರೆ. ಇಂತಹ ಗೋಪಾಲ ಶೆಟ್ಟಿ ರಾಜಕಾರಣಕ್ಕೆ ಆದರ್ಶ ಪುರುಷರೇ ಸರಿ ಎಂದು ರಾಜ್ಯ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ನುಡಿದರು.
ಮಾ. 2ರಂದು ಸಂಜೆ ಬೊರಿವಲಿ ಪಶ್ಚಿಮದ ಪುಷ್ಪಾಂಜಲಿ ಗಾರ್ಡನ್ನಲ್ಲಿ ಸಂಸದ ಗೋಪಾಲ್ ಶೆಟ್ಟಿ ಅವರ ತುಳು-ಕನ್ನಡಿಗರ ಅಭಿಮಾನಿ ಬಳಗವು ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಸಾರಥ್ಯ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಗೋಪಾಲ್ ಶೆಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಸಂಸದ ಗೋಪಾಲ್ ಸಿ. ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು, ಇದೊಂದು ಅಪೂರ್ವ ಸಮಾರಂಭವಾಗಿದ್ದು, ಗೋಪಾಲ್ ಶೆಟ್ಟಿ ಅವರು ಭವಿಷ್ಯದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸ್ಥಾನಕ್ಕೆ ಏರಲಿ ಎಂದು ಶುಭಹಾರೈಸಿದರು.
ಗೋಪಾಲ ಶೆಟ್ಟಿ ಮತ್ತು ಉಷಾ ಗೋಪಾಲ ಶೆಟ್ಟಿ ದಂಪತಿ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ದಹಿಸರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮನೀಷಾ ಚೌಧರಿ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಗೋಪಾಲ್ ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳಾದ ಕೃಷ್ಣಕುಮಾರ್ ಎಲ್. ಬಂಗೇರ, ಡಾ| ಪಿ. ವಿ. ಶೆಟ್ಟಿ, ಚಂದ್ರಶೇಖರ ಎಸ್. ಪೂಜಾರಿ, ರವಿ ಎಸ್. ದೇವಾಡಿಗ, ನ್ಯಾಯವಾದಿ ಆರ್. ಎಂ. ಭಂಡಾರಿ, ದೇವದಾಸ್ ಎಲ್. ಕುಲಾಲ್, ಸದಾನಂದ ಆಚಾರ್ಯ ಕಲ್ಯಾಣು³ರ, ಶ್ರೀನಿವಾಸ ಪಿ. ಸಾಫಲ್ಯ, ಸತೀಶ್ ಎಸ್. ಸಾಲ್ಯಾನ್, ರಾಜ್ಕುಮಾರ್ ಕಾರ್ನಾಡ್, ಉತ್ತಮ್ ಶೆಟ್ಟಿಗಾರ್, ಜಯಂತ್ ಕೆ. ಶೆಟ್ಟಿ, ಸಿಎ ಸಂಜಯ್ ಭಟ್, ರಮೇಶ್ ಬಂಗೇರ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಸಂತೋಷ್ ಆರ್. ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಮಾಜಿ ನಗರ ಸೇವಕ ವಿನೋದ್ ಶೆಲಾರ್ ವೇದಿಕೆಯಲ್ಲಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಭ್ರಮವು ಮುಂಬಯಿವಾಸಿ ತುಳು-ಕನ್ನಡಿಗರಿಗೆ ಹಬ್ಬವೇ ಸರಿ. ತುಳು ಕನ್ನಡಿಗರ ಒಗ್ಗಟ್ಟು ಪ್ರದರ್ಶನದ ಜೊತೆಗೆ ನಮ್ಮೆಲ್ಲರ ಅಭಿಮಾನದ ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಹುಟ್ಟೂರ ಜನತೆಯ ಗೌರವಾರ್ಪಣಾ ಸಂಭ್ರಮವೂ ಹೌದು. ಅವರಂತಹ ಒಳ್ಳೆಯ ಸಂಸದ ತುಳು ಕನ್ನಡಿಗರ ಹಿರಿಮೆಯ ಕಿರೀಟವಾಗಿದೆ. ತಾವು ಯಾವತ್ತೂ ಅಭಿನಂದನೆಗಳಿಗೆ ಆಸೆಪಟ್ಟವರಲ್ಲದಿದ್ದರೂ ಇದು ನಮ್ಮೆಲ್ಲರ ಕರ್ತವ್ಯದ, ಅಭಿಮಾನದ ಸಮ್ಮಾನವಾಗಿದೆ. ನಿಮ್ಮ ಈ ಮಟ್ಟದ ಬೆಳವಣಿಗೆಗೆ ನಿಮ್ಮ ತಾಯಿ ಗುಲಾಬಿ, ಪತ್ನಿ ಉಷಾ ಅವರ ತ್ಯಾಗದಿಂದ ಕೂಡಿದೆ. ಸಾಮಾನ್ಯ ಕುಟುಂಬದಿಂದ ಬಂದ ಯುವಕನೊಬ್ಬ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಈ ಮಟ್ಟಕ್ಕೆ ಬೆಳೆದದ್ದು ಶ್ಲಾಘನೀಯ. ಆತ್ಮಸ್ಥೈರ್ಯವುಳ್ಳ ಎದೆಗಾರಿಕೆಯ, ಎಂದಿಗೂ ಯಾರಿಗೂ ಸಲಾಂ ಹಾಕದ ಸ್ವಾಭಿಮಾನಿ ಗೋಪಾಲ ಶೆಟ್ಟಿ ಅವರ ಪರಿಶ್ರಮ, ನಿಷ್ಠೆ ಈ ಮಟ್ಟದ ಬೆಳವಣಿಗೆಗೆ ಪೂರಕವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಒಂದನೇ ಸ್ಥಾನದ ಸಂಸದನಾಗಿ ಆಯ್ಕೆ ಮಾಡುವ ಕೆಲಸ ಮುಂಬಯಿವಾಸಿ ತುಳು-ಕನ್ನಡಿಗರದ್ದಾಗಲಿ ಎಂದು ನುಡಿದು ಗೋಪಾಲ್ ಸಿ. ಶೆಟ್ಟಿ ಅವರ ಸೇವಾ ವೈಖರಿಯನ್ನು ತಿಳಿಸಿ ಅಭಿನಂದನೆ ಸಲ್ಲಿಸಿದರು.
ಗೋಪಾಲ್ ಶೆಟ್ಟಿ ಅವರ ಮಾತೃಶ್ರೀ ಗುಲಾಬಿ ಸಿ. ಶೆಟ್ಟಿ, ಮಕ್ಕಳಾದ ರಾಕೇಶ್ ಜಿ. ಶೆಟ್ಟಿ, ಐಶ್ವರ್ಯಾ ಆರ್. ಶೆಟ್ಟಿ, ಜ್ಯೋತಿ ಎಸ್. ಶೆಟ್ಟಿ, ಸುದರ್ಶನ್ ಶೆಟ್ಟಿ, ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಇದರ ಗೌರವಾಧ್ಯಕ್ಷ ಡಾ| ಶಂಕರ್ ಬಿ. ಶೆಟ್ಟಿ ವಿರಾರ್, ಸುರೇಶ್ ಶೆಟ್ಟಿ ಗುರ್ಮೆ, ಕೆ. ರಘುರಾಮ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಸಂಘಟಕರಾದ ರವೀಂದ್ರ ಎಸ್. ಶೆಟ್ಟಿ, ಭಾಸ್ಕರ ಎಂ. ಸಾಲ್ಯಾನ್, ಗಂಗಾಧರ ಜೆ. ಪೂಜಾರಿ, ರಜಿತ್ ಎಂ. ಸುವರ್ಣ, ಮಂಜುನಾಥ್ ಬನ್ನೂರು, ಪ್ರವೀಣ್ ಎ. ಶೆಟ್ಟಿ ಶಿಮಂತೂರು, ಪ್ರಕಾಶ್ ಎ. ಶೆಟ್ಟಿ, ವಿಜಯಕುಮಾರ್ ಶೆಟ್ಟಿ ತೋನ್ಸೆ, ಎಂ. ಕೃಷ್ಣ ಶೆಟ್ಟಿ ಚಾರ್ಕೋಪ್, ದಿವಾಕರ ಶೆಟ್ಟಿ ಅಡ್ಯಾರ್, ವೇಣುಗೋಪಾಲ್ ಶೆಟ್ಟಿ ಸೇರಿದಂತೆ ಸಾವಿರಾರು ತುಳು ಕನ್ನಡಿಗರು ಭಾಗವಹಿಸಿದ್ದು, ಮಹಾನಗರದಲ್ಲಿನ ಹೊಟೇಲ್ ಉದ್ಯಮಿಗಳು, ನೂರಾರು ತುಳು ಕನ್ನಡಿಗ ಸಂಘ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡು ಸಂಸದರಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.
ಬ್ರಾಹ್ಮಣ ಪುರೋಹಿತರ ವೇದಘೋಷದೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ಬ್ರಹ್ಮಕುಮಾರಿ ನೀತಾ ಅನುಗ್ರಹಿಸಿದರು. ಪುಲ್ವಾಮಾ ವಿಧ್ವಂಸಕ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಮೇಣದ ಬತ್ತಿಯನ್ನು ಹಚ್ಚಿಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಗೋಪಾಲ ಶೆಟ್ಟಿ ಅವರ ಸುಮಾರು ಮೂರು ದಶಕಗಳ ರಾಜಕೀಯ ನಡೆಯ ಸಿಂಹಾವಲೋಕನದ ನಡೆಯಿತು. ಕಾರ್ಯಕ್ರಮದ ಪ್ರಧಾನ ಸಂಯೋಜಕ ಎರ್ಮಾಳ್ ಹರೀಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕ್ಕಳ, ಅಮೃತಾ ಶೆಟ್ಟಿ, ರಘುನಾಥ್ ಎನ್. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಶೆಟ್ಟಿ ಪೊಯಿಸರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಗಮ್ ಉಪಾಧ್ಯಾಯ ನಿರ್ದೇಶನದಲ್ಲಿ ಸಂಗಮ್ ಸ್ವರ್ ಮುಂಬಯಿ ತಂಡದಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು.
ಸ್ಥಳೀಯ ಡೊನ್ಬೊಸ್ಕೊ ಸರ್ಕಲ್ನಿಂದ ಭವ್ಯ ಮೆರವಣಿಗೆಯಲ್ಲಿ ಚೆಂಡೆ, ವಾದ್ಯ, ಬ್ಯಾಂಡುಗಳ ನಿನಾದದಲ್ಲಿ ಸಾಂಸ್ಕೃತಿಕ ವೈಭವದೊಂದಿಗೆ, ಶ್ವೇತ-ಅಶ್ವಗಳ ರಥದ ಚ್ಯಾರಿಯಟ್ನಲ್ಲಿ ಕೂರಲು ನಿರಾಕರಿಸಿದ ಸಂಸದ ಗೋಪಾಲ್ ಶೆಟ್ಟಿ, ಮಾತೆ ಭಾರತಾಂಬೆ ಮತ್ತು ಪಾಕಿಸ್ಥಾನದಿಂದ ಮುಕ್ತನಾದ ರಾಷ್ಟ್ರದ ಯೋಧ ಅಭಿನಂದನ್ ವರ್ಧಮಾನ್ ಅವರ ಭಾವಚಿತ್ರಗಳನ್ನು ರಥದಲ್ಲಿರಿಸಿ ಜನಸ್ತೋಮದ ಮಧ್ಯ ನಡಿಗೆಯಲ್ಲೇ ಸಾಗಿದ ಗೋಪಾಲ್ ಶೆಟ್ಟಿ ಅವರನ್ನು ಸಾಂಪ್ರದಾಯಿಕವಾಗಿ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.
ನನಗೆ ಪ್ರತಿಯೊಂದು ಕೆಲಸವು ತ್ವರಿತವಾಗಿ ಆಗಬೇಕು. ನೋಡಿದವರಿಗೆ ಒಳ್ಳೆಯದಾಗಿ ಕಾಣಬೇಕು. ಯಾವುದೇ ಕಾರ್ಯಕ್ರಮ ಕನಿಷ್ಠಾವಧಿಯಲ್ಲಿ ಚಿಕ್ಕ ಮತ್ತು ಚೊಕ್ಕವಾಗಿ ನಡೆದರೇನೇ ಚೆಂದ. ಇಲ್ಲವಾದರೆ ಅಂದ ಕೆಡುತ್ತ¤ದೆ. ನಾನು ರಾಜಕೀಯಕ್ಕೆ ಬಂದದ್ದು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲೇ ಹೊರತು ಹುದ್ದೆಗಳನ್ನು ಅಲಂಕರಿಸಲು ಅಲ್ಲ. ಕಾರಣ ನಾನೋರ್ವ ಸೌಲಭ್ಯ ವಂಚಿತನಾಗಿದ್ದು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಕಚೇರಿಗೆ ಹೋಗಿದ್ದೆ. ಅಲ್ಲಿ ನನ್ನ ಮಾತನಾಡುವ ಪರಿ, ಹಾವ ಭಾವ, ಸಂಭಾಷಣೆ ತಿಳಿದ ಧುರೀಣರು ನನ್ನನ್ನೇ ರಾಜಕೀಯದತ್ತ ಸೆಳೆದರು. ಹಾಗೇ ರಾಜಕೀಯಕ್ಕೆ ಬಂದ ನಾನು ನಗರ ಸೇವಕನಾಗಿ, ಶಾಸಕನಾಗಿ, ಸಂಸದನಾಗಿ ಬೆಳೆದೆ. ಈಗ ಎಲ್ಲರೂ ನನಗೆ ಸಚಿವರಾಗಲು ಹೇಳುತ್ತಾರೆ ಆದರೆ ನನಗೆ ಮಂತ್ರಿ ಪದವಿಯಲ್ಲಿ ಆಸೆಯಿಲ್ಲ. ಮತ್ತೂಮ್ಮೆ ಸಂಸದನಾಗುವ ಅವಕಾಶ ದೊರೆತರೆ ಅದನ್ನು ಸ್ವೀಕರಿಸುತ್ತಾ ಜನ ಸಾಮಾನ್ಯರ ಸೇವೆ ಮಾಡುತ್ತೇನೆ. ಇದರಲ್ಲೇ ನನಗೆ ತುಂಬಾ ಖುಷಿ ದೊರಕುತ್ತದೆ. ಸಾಮಾನ್ಯ ಮನೆತನದ ನನ್ನನ್ನು ಗಲ್ಲಿಯಿಂದ ಡೆಲ್ಲಿಯವರೆಗೆ ಮುನ್ನಡೆಸಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಕಾರ್ಯಕ್ರಮವನ್ನು ಆಯೋಜಿಸಿದ ಎರ್ಮಾಳ್ ಹರೀಶ್ ಶೆಟ್ಟಿ ಮತ್ತು ಸಂಘಟಕರಿಗೆ, ತುಳು ಕನ್ನಡಿಗರಿಗೆ ನಾನು ಸದಾ ಆಭಾರಿಯಾಗಿರುವೆ
– ಸಂಸದ ಗೋಪಾಲ್ ಸಿ. ಶೆಟ್ಟಿ,
ಸಮ್ಮಾನಿತರು
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು