ರಾಜ್ಯಮಟ್ಟದ ಫುಟ್ಬಾಲ್ ಆಟಗಾರ ರಾಜೇಶ್ ಬಂಗೇರ ನಿಧನ
Team Udayavani, Apr 18, 2021, 11:57 AM IST
ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಇದರ ರಾಜ್ಯಮಟ್ಟದ ಫುಟ್ಬಾಲ್ ಆಟಗಾರ, ಗೋಲ್ಕೀಪರ್ ರಾಜೇಶ್ ಬಂಗೇರ (35) ಅವರು ಹೃದಯಾಘಾತದಿಂದ ಎ. 15ರಂದು ಹುಟ್ಟೂರಿನಲ್ಲಿ ನಿಧನ ಹೊಂದಿದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಭಾಂಡೂಪ್ ನಿವಾಸಿಯಾಗಿರುವ ಮೃತರು, ಬೆಳ್ಮಣ್ಣು ಪಾಲದಟ್ಟೆ ಬೆದರೋಡಿ ಮಹಾಬಲ ಬಂಗೇರ ಮತ್ತು ವಸಂತಿ ಬಂಗೇರ ದಂಪತಿಯ ಪುತ್ರ. ಮೃತರು ಎಳೆಯ ವಯಸ್ಸಿನಲ್ಲೇ ಮುಂಬಯಿ ನಗರಕ್ಕೆ ಆಗಮಿಸಿ ಫುಟ್ಬಾಲ್ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಆಯೋಜಿತ ರಮಾನಾಥ ಪಯ್ಯಡೆ ಸ್ಮಾರಕ ಫುಟ್ಬಾಲ್ ಪಂದ್ಯಾಟದಲ್ಲಿ ಮಂಗಳೂರು ಬ್ಲೂಸ್ ತಂಡದ ಪರವಾಗಿ ಆಟವಾಡುತ್ತಿದ್ದರು. ಕೆನರಾ ವಿದ್ಯಾದಾಯಿನಿ ಶಾಲೆಯಲ್ಲಿ ಶಿಕ್ಷಣ ಪಡೆದ ಇವರು ಬ್ರಿಟಿಷ್ ಕೌನ್ಸಿಲ್ನಲ್ಲಿ ಕಾರ್ಯನಿರತರಾಗಿದ್ದರು.
ಮಹಾರಾಷ್ಟ್ರ ರಾಜ್ಯ ತಂಡದ 19ರಿಂದ 21 ವರ್ಷ ವಯೋಮಿತಿಯ ತಂಡವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ಇವರು, ಫುಟ್ಬಾಲ್ ಕ್ರೀಡೆಯ ತರಬೇತುದಾ ರರಾಗಿ ಸೇವೆ ಸಲ್ಲಿಸುತ್ತಿದ್ದರು. ಬೋಂಬೆ ಸ್ಕಾಟಿಷ್ ಕೋರ್ಟ್ಯಾರ್ಡ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಎ. 11ರಂದು ಹುಟ್ಟೂರಿಗೆ ತೆರಳಿದ್ದರು.
ಅವರ ನಿಧನಕ್ಕೆ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ಉಪಾಧ್ಯಕ್ಷ ರವಿ ಅಂಚನ್, ಕಾರ್ಯದರ್ಶಿ ಜಯ ಎ. ಶೆಟ್ಟಿ , ಎಂ. ಪಿ. ಶೆಟ್ಟಿ, ಕೋಶಾಧಿಕಾರಿ ಜಯಂತ್ ಕುಂದರ್, ಕಾರ್ಯಕಾರಿ ಸಮಿತಿಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.