ಐರೋಡಿ ಗೋವಿಂದಪ್ಪ ಅವರಿಗೆ ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ
Team Udayavani, Sep 12, 2018, 3:33 PM IST
ಮುಂಬಯಿ: ಪಟ್ಟ ಭದ್ರ ಹಿತಾಸಕ್ತಿ ವರ್ಗದ ಲೆಕ್ಕಾಚಾರದಿಂದ ಕಲಾವಿದರ ಬದುಕು ದುಸ್ತರವಾಗಿದೆ. ಕಲೆ, ಸಾಹಿತ್ಯ, ಸಂಗೀತ ಇತ್ಯಾದಿಗಳಿಗೆ ಜಾತಿ, ಪಂಗಡಗಳ ಬಂಧನ ಬೇಡ. ಪ್ರತಿಭೆಯನ್ನು ಮಾನದಂಡವಾಗಿಸಿ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ದೂರಗಾಮಿ ಚಿಂತನೆಯ ಸಮಾಜ ಸೇವಕ ಜಯ ಸಿ. ಸುವರ್ಣ ಅವರು ಮಾತೃಶ್ರೀಯವರ ನೆನಪಿನಲ್ಲಿ ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನಿಸಿ ತಾಯಿಯ ಪ್ರೀತಿಯೊಂದಿಗೆ ಕಲಾಮಾತೆಯ ಆರಾಧಕರಾಗಿ ಮುನ್ನಡೆಯುತ್ತಿದ್ದಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅಭಿಪ್ರಾಯಪಟ್ಟರು.
ಸೆ. 9ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಇದರ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಮಾತೋಶ್ರೀ ದಿವಂಗತ ಅಚ್ಚು ಚಂದು ಸುವರ್ಣ ಅವರ ಸ್ಮರಣಾರ್ಥವಾಗಿ ಸ್ಥಾಪಿಸಿದ ಶಾಶ್ವತ ನಿಧಿಯಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕೊಡ ಮಾಡುವ 14ನೇ ಯಕ್ಷಗಾನ ಕಲಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಜಾಗತೀಕರಣದ ಭರಾಟೆಯಲ್ಲಿ ಕುಟುಂಬ ಸದಸ್ಯರ ಅಂತರ ಹೆಚ್ಚಾಗಿ ಪ್ರೀತಿ ವಾತ್ಸಲ್ಯ ವ್ಯವಹಾರಿಕವಾಗಿದೆ. ಪ್ರಶಸ್ತಿಗಳು ಮಾನವೀಯ ಮೌಲ್ಯಗಳ ಪ್ರತಿಬಿಂಬಗಳಾಗಿವೆ. ವಿವಿಧ ಕಲಾಪ್ರಕಾರಗಳಿಗೆ ವೇದಿಕೆ ಕಲ್ಪಿಸಿ ಉದಯೋನ್ಮುಖ ಕಲಾವಿದರಿಗೆ ಆಧಾರ ಸ್ತಂಭವಾಗಿರುವ ಮುಂಬಯಿ ಬಿಲ್ಲವರ ಅಸೋಸಿಯೇಶನ್ ಒಂದು ಮಾದರಿ ಸಂಸ್ಥೆಯಾಗಿದೆ. ತಮ್ಮ ಕಲಾ ಸೇವೆ ಶಾಶ್ವತವಾಗಿರಲಿ ಎಂದು ಹಾರೈಸಿ, ಯೋಗ್ಯತೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರಶಸ್ತಿಯು ನಗದು, ಸ್ಮರಣಿಕೆ, ಸಮ್ಮಾನ ಪತ್ರ, ಶಾಲು ಮತ್ತು ಫಲಪುಷ್ಪಗಳನ್ನು ಒಳಗೊಂಡಿತ್ತು.
ನ್ಯಾಯವೂ ದೊರಕಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಲ್ಲವ ಮಹಾ ಮಂಡಲ ಮೂಲ್ಕಿ ಇದರ ಅಧ್ಯಕ್ಷ ಜಯ ಸಿ. ಸುವರ್ಣ ಅವರು, ಕೆಲವು ಮೇಳಗಳಲ್ಲಿ ಬಿಲ್ಲವ ಕಲಾವಿದರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಇಂತಹ ಸಮಯದಲ್ಲಿ ಸಂಘಟನೆಯ ಪ್ರತಿಭಟನೆ ಅನಿರ್ವಾಯವಾಯಿತು ಮತ್ತು ಅದಕ್ಕೆ ಶಾಶ್ವತ ನ್ಯಾಯವೂ ದೊರಕಿತು. ಹೆಚ್ಚಿನ ಅಧ್ಯಯನ ಅನುಭವದೊಂದಿಗೆ ಯಕ್ಷಗಾನ ಬಯಲಾಟದಲ್ಲಿ ಮಿಂಚಿದಾಗ ಸಮ್ಮಾನ, ಪ್ರಶಸ್ತಿಗಳು ಹುಡುಕಿ ಕೊಂಡು ಬರುತ್ತವೆ ಎಂದು ಹೇಳಿ ಶುಭ ಹಾರೈಸಿದರು.
ಅಡ್ಡಗೋಡೆ ಸಲ್ಲದು
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್ನ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಮಾತನಾಡಿ, ಯಕ್ಷಗಾನದ ತಾರಾ ಮೌಲ್ಯವನ್ನು ಹೆಚ್ಚಿಸಿದ ಐರೋಡಿ ಗೋವಿಂದಪ್ಪ ಅವರು ತೆಂಕು ಮತ್ತು ಬಡಗು ತಿಟ್ಟುಗಳಲ್ಲೂ ಪರಂಪರೆಯ ಕಲಾವಿದರಾಗಿ ಗುರುತಿಸಿಕೊಂಡವರು ಹಾಗೂ ಕಲಾವಿದರಿಗೆ ಜಾತಿ, ಸಮುದಾಯ, ಪಂಗಡಳ ಅಡ್ಡಗೋಡೆ ಸಲ್ಲದು ಎಂದು ಪ್ರತಿಪಾದಿಸಿದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಮ್ಮಾನಗಳ ಬಿರುದುಗಳನ್ನು ಪಡೆದಿರುವ ಇವರು ಇತಿಹಾಸ ಕಂಡ ಪ್ರತಿಭಾನ್ವಿತ ಕಲಾವಿದ ಎಂದರು.
ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಪ್ರಶಸ್ತಿ ಪ್ರದಾನಿಸಿ ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಸಂಘಟಕ ಎಚ್.ಬಿ.ಎಲ್. ರಾವ್ ಅಭಿನಂದನಾ ಭಾಷಣ ಗೈದರು. ಬಿಎಎಸ್ಎಫ್ ಇಂಡಿಯಾ ಲಿಮಿಟೆಡ್ನ ನಿರ್ದೇಶಕ ಪ್ರದೀಪ್ ಎಂ. ಚಂದನ್ ಶುಭ ಕೋರಿ ಮಾತನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಸೋಸಿಯೇಶನ್ ಉಪ ಕಾರ್ಯಾ ಧ್ಯಕ್ಷ ಹರೀಶ್ ಜಿ. ಅಮೀನ್, ಉದ್ಯಮಿ ಕೃಷ್ಣ ವಿ. ಆಚಾರ್ಯ, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್. ಕೋಟ್ಯಾನ್, ಬಿಲ್ಲವ ಚೇಂಬರ್ಸ್ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಶ್ರೀನಿವಾಸ ಕರ್ಕೇರ, ಕೋಶಾಧಿಕಾರಿ ರಾಜೇಶ್ ಬಂಗೇರ, ಸಾಂಸ್ಕೃತಿಕ ಉಪಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ, ಕಾರ್ಯದರ್ಶಿ ಅಶೋಕ್ ಕೆ. ಕುಕ್ಯಾನ್ ಸಸಿಹಿತ್ಲು ಉಪಸ್ಥಿತರಿದ್ದರು. ಅಕ್ಷಯ ಸಹ ಸಂಪಾದಕ ಹರೀಶ್ ಹೆಜ್ಮಾಡಿ ನಿರೂಪಿಸಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗ ವಾಗಿ ಈಶ್ವರ ಹೆಜ್ಮಾಡಿ ಸ್ಮರಣಾರ್ಥ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ