ಆ.16ರಿಂದ 8ನೇ ಆವೃತ್ತಿ ಕೆಪಿಎಲ್ ಆರಂಭ
ಆರಂಭಿಕ 5 ದಿನ ಬೆಂಗಳೂರಿನಲ್ಲಿ ಪಂದ್ಯ, ಸೆ.1ಕ್ಕೆ ಮೈಸೂರಿನಲ್ಲಿ ಫೈನಲ್
Team Udayavani, Jul 27, 2019, 5:19 AM IST
ಬೆಂಗಳೂರು: 8ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಆ.16ರಿಂದ ಬೆಂಗಳೂರಿನಲ್ಲಿ ಶುರುವಾಗಲಿದ್ದು,ಸೆ.1ರಂದು ಮೈಸೂರಿನಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಕಾರ್ಯದರ್ಶಿ ಸುಧಾಕರ್ ರಾವ್, ಸಹಾಯಕ ಕಾರ್ಯದರ್ಶಿ ಸಂತೋಷ್, ವಕ್ತಾರ ವಿನಯ್ ಮೃತ್ಯುಂಜಯ ಕೆಪಿಎಲ್ ವೇಳಾಪಟ್ಟಿಯ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಆ.16ರಿಂದ ಐದು ದಿನಗಳವರೆಗೆ ಪಂದ್ಯಗಳು ನಡೆಯಲಿವೆ. ಆ.22ರಿಂದ ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿವೆ. ಕೂಟದ ಕೊನೆಯ ಚರಣ ಮೈಸೂರಿನಲ್ಲಿ ಆ.27ರಿಂದ ಆರಂಭವಾಗಲಿದೆ.ಆ.21 ಮತ್ತು 26 ವಿಶ್ರಾಂತಿಯ ದಿನವಾಗಿರಲಿದೆ. ಒಟ್ಟು 25 ಪಂದ್ಯಗಳು ನಡೆಯಲಿವೆ. ಈ ಬಾರಿ ಎಲಿಮಿನೇಟರ್,
ಕ್ವಾಲಿಫೈಯರ್ ಪಂದ್ಯವನ್ನೂ ಸೇರಿಸಿರುವುದು ವಿಶೇಷವಾಗಿದೆ. ಇದರಿಂದ ಕೂಟದ ರೋಚಕತೆ ಏರಲಿದೆ ಎಂದು ಕೆಎಸ್ಸಿಎ ತಿಳಿಸಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಭಾಗವಹಿಸಿದ್ದರು. ಕೂಟದ ಏಳೂ ಫ್ರಾಂಚೈಸಿಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಜೊತೆಗೆ ರಾಯಭಾರಿ, ಕನ್ನಡ ಚಿತ್ರನಟಿ ರಾಗಿಣಿ ದ್ವಿವೇದಿ ಹಾಜರಿದ್ದರು.
ಇಂದು ಕೆಪಿಎಲ್ ಹರಾಜು:
ಆಟಗಾರರ ಆಯ್ಕೆಗೆ ಪೈಪೋಟಿ ಈ ಬಾರಿಯ ಕೆಪಿಎಲ್ಗೆ ಆಟಗಾರರ ಮೊದಲ ಸುತ್ತಿನ ಹರಾಜು ಮೊನ್ನೆ ಜು.23ರಂದು ನಡೆದಿತ್ತು. ಅಂತಿಮ ಹರಾಜು ಶನಿವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಆಗ ಯಾವ ತಂಡದಲ್ಲಿ ಯಾವ ಆಟಗಾರರು ಇರಲಿದ್ದಾರೆ ಎನ್ನುವುದು ಖಚಿತವಾಗಲಿದೆ. ಭಾರತ ತಂಡಕ್ಕೆ ಆಯ್ಕೆಯಾಗಿರುವುದರಿಂದ ಬೆಳಗಾವಿ
ಪ್ಯಾಂಥರ್ಸ್ ಮನೀಶ್ ಪಾಂಡೆಯನ್ನು ಕೈಬಿಟ್ಟಿದೆ. ಆದ್ದರಿಂದ ಅವರು ಯಾವ ತಂಡಕ್ಕೆ ಆಯ್ಕೆಯಾಗುತ್ತಾರೆನ್ನುವುದು ಕುತೂಹಲ ಮೂಡಿಸಿದೆ. ಇನ್ನು ಹುಬ್ಬಳ್ಳಿ ತಂಡ ಆರ್.ವಿನಯ್ ಕುಮಾರ್ರನ್ನು ಉಳಿಸಿಕೊಂಡಿದೆ.