ಬಿಸಿಸಿಐನಿಂದ 51 ಕೋಟಿ ರೂ. ನೆರವು
Team Udayavani, Mar 30, 2020, 5:47 AM IST
ಮುಂಬಯಿ: ಒಂದುಕಡೆ ಇಡೀ ದೇಶವೇ ಕೋವಿಡ್-19 ಹೊಡೆತಕ್ಕೆ ಬಳಲಿ ಹೋಗಿದೆ. ಇನ್ನೊಂದು ಕಡೆ ಅದರ ವಿರುದ್ಧ ಇಡೀ ದೇಶವೇ ಒಂದಾಗಿ ನಿಂತು ಹೋರಾಡುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೆರವಾಗುತ್ತಿದ್ದಾರೆ.
ಪ್ರಧಾನಮಂತ್ರಿ ಪರಿಹಾರ ನಿಧಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಧೀನ ರಾಜ್ಯಸಂಸ್ಥೆಗಳು ಒಟ್ಟಾಗಿ 51 ಕೋಟಿ ರೂ. ಹಣ ನೀಡಿವೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ, ಇನ್ನಿತರ ಒಗ್ಗೂಡಿ ಈ ಹಣ ಅರ್ಪಿಸಿದ್ದಾರೆ. ಕಳೆದ ವರ್ಷ ಪುಲ್ವಾಮದಲ್ಲಿ ಭಾರತೀಯ ಯೋಧರನ್ನು ಪಾಕ್ ಉಗ್ರರು ಕೊಂದಿದ್ದಾಗಲೂ, ಬಿಸಿಸಿಐ 20 ಕೋಟಿ ರೂ. ಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಗ ಐಪಿಎಲ್ ಉದ್ಘಾಟನೆ ಸಮಾರಂಭವನ್ನೇ ಅದು ರದ್ದು ಮಾಡಿ, ಉಳಿದ ಹಣವನ್ನು ಕೇಂದ್ರ ಸರಕಾರಕ್ಕೆ ನೀಡಿತ್ತು.
ಇಂತಹ ಸಂದರ್ಭದಲ್ಲಿ ನಾವೆಲ್ಲ ಒಟ್ಟಾಗಿ ನಿಲ್ಲಬೇಕು. ಕೋವಿಡ್-19ದಿಂದ ಈಗ ಉದ್ಭವಿಸಿರುವ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದೇ ನಮ್ಮೆಲ್ಲರ ಮೊದಲ ಮತ್ತು ಆದ್ಯ ಕರ್ತವ್ಯ ಎಂದು ಬಿಸಿಸಿಐ ಹೇಳಿದೆ. ಬಿಸಿಸಿಐ ನೀಡಿರುವ 51 ಕೋಟಿ ರೂ.ನಲ್ಲಿ ರಾಜ್ಯಸಂಸ್ಥೆಗಳ ಪಾಲೂ ಇದೆ. ರಾಜ್ಯಸಂಸ್ಥೆಗಳು ಅರ್ಧ ಹಣವನ್ನು ಬಿಸಿಸಿಐ ಮೂಲಕ ಕೇಂದ್ರ ಸರ್ಕಾರಕ್ಕೆ, ಇನ್ನರ್ಧ ಹಣವನ್ನು ರಾಜ್ಯಸರ್ಕಾರಕ್ಕೆ ನೀಡಿವೆ.