ವಾಯುಮಾಲಿನ್ಯ: ದಿಲ್ಲಿ ಟಿ20 ಪಂದ್ಯ ಅತಂತ್ರ
Team Udayavani, Oct 31, 2019, 5:38 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಹೊಗೆಯ ಸಮಸ್ಯೆ ವಿಪರೀತವಾಗಿದೆ. ದೀಪಾವಳಿ ಪಟಾಕಿ ಸಿಡಿತದ ಅನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹೀಗಾಗಿ ನ. 3ರ ಭಾರತ-ಬಾಂಗ್ಲಾದೇಶ ಟಿ20 ಪಂದ್ಯ ಅತಂತ್ರಕ್ಕೆ ಸಿಲುಕಿದೆ. ಈ ಪಂದ್ಯ ನಿಲ್ಲಿಸಿ ಎಂದು ಈಗಾಗಲೇ ಪರಿಸರಪ್ರೇಮಿಗಳು ಬೇಡಿಕೆಯಿಟ್ಟಿದ್ದಾರೆ. ಆದರೆ ಬಿಸಿಸಿಐ ಅದು ಸಾಧ್ಯವಿಲ್ಲ ಎಂದು ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.
ಪ್ರತೀ ವರ್ಷ ದೀಪಾವಳಿ ವೇಳೆ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ತೀವ್ರವಾಗುತ್ತದೆ. ಸಹಜವಾಗಿಯೇ ದಿಲ್ಲಿಯ ಮಾಲಿನ್ಯ ಮಟ್ಟ ಅತೀ ಕಳಪೆ ಶ್ರೇಯಾಂಕ ಹೊಂದಿದೆ. ಈಗಂತೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಬುಧವಾರ ಹೊಗೆಯ ತೀವ್ರತೆಯಿಂದ ಎದುರಿಗಿರುವ ವ್ಯಕ್ತಿ ಕಾಣುತ್ತಿರಲಿಲ್ಲ, ಹಗಲಲ್ಲೂ ವಾಹನಗಳು ದೀಪವನ್ನು ಹೊತ್ತಿಸಿಕೊಂಡು ಹೋಗಬೇಕಾದ ಪರಿಸ್ಥಿತಿಯಿತ್ತು.
ಈ ಸ್ಥಿತಿಯಲ್ಲಿ ಉಸಿರಾಟಕ್ಕೆ ಬಹಳ ಸಮಸ್ಯೆಯಾಗಲಿದೆ. 3 ಗಂಟೆ ಕಾಲ ನಡೆಯುವ ಪಂದ್ಯದಲ್ಲಿ ಆಟಗಾರರಿಗೆ ಈ ಸಮಸ್ಯೆ ತೀವ್ರವಾಗಿ ಕಾಡಲಿದೆ. ಪ್ರೇಕ್ಷಕರೂ ಸಮಸ್ಯೆ ಎದುರಿಸಲಿದ್ದಾರೆ. ಆದ್ದರಿಂದ ಪಂದ್ಯ ಬೇಡವೆಂದು ಹೇಳಲಾಗಿದೆ. ಈಗಾಗಲೇ ವೇಳಾಪಟ್ಟಿಯನ್ನು ನಿಗದಿಪಡಿಸಿರುವ ಬಿಸಿಸಿಐ ಕೊನೆಯ ಹಂತದಲ್ಲಿ ಅದನ್ನು ಬದಲಿಸುವ ಸ್ಥಿತಿಯಲ್ಲಿಲ್ಲ. ತನ್ನ ಅಸಹಾಯಕತೆಯನ್ನು ಅದು ಹೊರಹಾಕಿದೆ.
2017ರ ಹೊಸದಿಲ್ಲಿ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟಿಗರು ವಿಪರೀತ ಉಸಿರಾಟದ ಸಮಸ್ಯೆಗೆ ಸಿಲುಕಿದ್ದರು.