ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಕೂಟ: ಕೊರೊನಾ ಆತಂಕ ನಡುವೆ ಕೂಟ ಆರಂಭ
Team Udayavani, Mar 11, 2020, 9:15 AM IST
ಬರ್ಮಿಂಗ್ ಹ್ಯಾಮ್: ಕೊರೊನಾ ಭೀತಿಯ ನಡುವೆಯೇ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಬುಧವಾರದಿಂದ ಆರಂಭವಾಗುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಭಾರತ ತಂಡದ ನೇತೃತ್ವ ವಹಿಸಿದ್ದಾರೆ. ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ಗೆ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಕೂಟ ಮಹತ್ವದ್ದಾ ಗಿದ್ದು ಶಕ್ತಿ ಮೀರಿ ಪ್ರಯತ್ನಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಕೊರೊನಾ ವೈರಸ್ನಿಂದಾಗಿ ಇಂಗ್ಲೆಂಡಿನಲ್ಲಿ ಸದ್ಯ ಐವರು ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚಿನ ಮಂದಿಗೆ ಸೋಂಕು ತಗುಲಿದೆ.
ಕೊರೊನಾ ಭೀತಿಯ ಮಧ್ಯೆ ಈ ಋತುವಿನ ಮೊದಲ ಸೂಪರ್ 1000 ಬ್ಯಾಡ್ಮಿಂಟನ್ ಕೂಟ ಸಂಘಟಿಸಲು ಸಿದ್ಧತೆಗಳು ನಡೆಯುತ್ತಿದೆ. ಕೊರೊನಾದಿಂದಾಗಿ ಜರ್ಮನಿ ಓಪನ್ ಸಹಿತ ಹಲವು ಕೂಟಗಳು ಮುಂದೂಡಲ್ಪಟ್ಟಿವೆ. ಇದರಿಂದಾಗಿ ಟೋಕೊಯೋ ಒಲಿಂಪಿಕ್ಸ್ಗೆ ಅರ್ಹತೆಗಳಿಸುವ ನಿಟ್ಟಿನಲ್ಲಿ ಭಾರತ ಬ್ಯಾಡ್ಮಿಂಟನ್ ಆಟಗಾರರಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ಹಿಂದೆ ಸರಿದ ಪ್ರಣಯ್ ಮತ್ತಿತರರು
ಆರೋಗ್ಯದ ದೃಷ್ಟಿಯಿಂದ ಎಚ್.ಎಸ್. ಪ್ರಣಯ್ ಮತ್ತು ವಿಶ್ವದ 10ನೇ ಶ್ರೇಯಾಂಕದ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಸಹಿತ ಏಳು ಮಂದಿ ಭಾರತೀಯ ಆಟಗಾರರು ಆಲ್ ಇಂಗ್ಲೆಂಡ್
ಕೂಟದಿಂದ ಹಿಂದೆ ಸರಿದಿದ್ದಾರೆ.
ಒಲಿಂಪಿಕ್ಸ್ ಅರ್ಹತೆಗೆ ಸೈನಾ ಪ್ರಯತ್ನ
ಸಿಂಧು ಅವರು ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವುದು ಬಹುತೇಕ ಖಚಿತವಾಗಿದೆ.
2019ರ ವಿಶ್ವ ಬ್ಯಾಡ್ಮಿಂಟನ್ ಕೂಟದಲ್ಲಿ ಚಿನ್ನ ಗೆದ್ದಿರುವ ಸಿಂಧು ಅವರು ಆಲ್ ಇಂಗ್ಲೆಂಡಿನಲ್ಲಿ ಭಾರತದ ಎರಡು ದಶಕಗಳ ಪ್ರಶಸ್ತಿ ಬರವನ್ನು ನೀಗಿಸಲು ಹೋರಾಡಲಿದ್ದಾರೆ. ಇದೇ ವೇಳೆ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಇಲ್ಲಿ ಗರಿಷ್ಠ ಅಂಕ ಗಳಿಸಿ ಎಪ್ರಿಲ್ 28ರ ಮೊದಲು ಅಗ್ರ 16ರ ಒಳಗಿನ ಸ್ಥಾನಕ್ಕೇರುವ ಗುರಿ ಇಟ್ಟುಕೊಂಡಿದ್ದಾರೆ. ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಏ.28 ಕೊನೆಯ ದಿನವಾಗಿದೆ. ಆ ದಿನ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 16ನೇ ಸ್ಥಾನದ ಒಳಗಡೆ ಇರುವವರು ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲಿದ್ದಾರೆ.
ಮುಖ್ಯ ರಾಷ್ಟ್ರೀಯ ಕೋಚ್ ಪಿ. ಗೋಪಿಚಂದ್ 2001ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರು. ಆಬಳಿಕ ಭಾರತದ ಯಾವುದೇ ಆಟಗಾರ ಪ್ರಶಸ್ತಿ ಗೆದ್ದಿಲ್ಲ. 20018ರಲ್ಲಿ ಇಲ್ಲಿ ಸೆಮಿಫೈನಲ್ ತಲುಪಿದ್ದ ಸಿಂಧು ಅವರಿಂದ ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮಾಡಲಾಗಿದೆ. ಅವರು ಅಮೆರಿಕದ ಬೈವೆನ್ ಝಾಂಗ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಆದರೆ ಸೈನಾ ಅವರಿಗೆ ಮೊದಲ ಸುತ್ತಿನಲ್ಲಿಯೇ ಕಠಿಣ ಎದುರಾಳಿ ಜಪಾನಿನ ಅಕಾನೆ ಯಮಾಗುಚಿ ಅವರನ್ನು ಎದುರಿಸಬೇಕಿದೆ.