ಪಂಜಾಬ್ ನಾಯಕನ ಬಗ್ಗೆ ಇನ್ನೂ ಯೋಚಿಸಿಲ್ಲ: ಅನಿಲ್ ಕುಂಬ್ಳೆ
Team Udayavani, Oct 17, 2019, 9:32 PM IST
ಹೊಸದಿಲ್ಲಿ: ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿ ಆರ್. ಅಶ್ವಿನ್ ಮುಂದುವರಿಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ನೂತನ ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
“ನಾವು ಶೀಘ್ರದಲ್ಲೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ. ತಂಡ ಸ್ಥಿರ ಪ್ರದರ್ಶನ ನೀಡಲು ಶ್ರಮಿಸಲಾಗುವುದು. ಯಾವ ಆಟಗಾರರನ್ನು ಕೈ ಬಿಡಬೇಕು, ಯಾರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು. ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರಿದ್ದಾರೆ. ಅವರೆಲ್ಲ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನುವ ಭರವಸೆ ನನಗಿದೆ’ ಎಂದು ಕುಂಬ್ಳೆ ಹೇಳಿದರು.
ಅಶ್ವಿನ್ ನಾಯಕತ್ವದಲ್ಲಿ, ಪಂಜಾಬ್ ತಂಡ 2018ರಲ್ಲಿ 7ನೇ ಮತ್ತು 2019ರಲ್ಲಿ 6ನೇ ಸ್ಥಾನ ಪಡೆದಿತ್ತು.
ಹಿಂದಿನ ಅನುಭವವೇ ಪಾಠ
ಪಂಜಾಬ್ ತಂಡದ ಕೋಚ್ ಆಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಂಬ್ಳೆ, “ಈ ಹಿಂದೆ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವದಿಂದ ಬಹಳಷ್ಟು ಪಾಠಗಳನ್ನು ಕಲಿತಿದ್ದೇನೆ. ಆಟಗಾರರು ಮಾನಸಿಕವಾಗಿ ನಿರಾಳವಾಗಿರಬೇಕು. ಈ ನಿಟ್ಟಿನಲ್ಲಿ ನನ್ನ ಕರ್ತವ್ಯ ಸಾಗಲಿದೆ’ ಎಂದರು.
“ನಾನು ಆರ್ಸಿಬಿ ಪರ ಆಡಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಒಂದೆರಡು ಸಲ ತೀರಾ ಸನಿಹಕ್ಕೆ ಬಂದು ನಿರಾಸೆಗೊಂಡಿದ್ದೆವು. ಆದರೆ ಮುಂಬೈ ಇಂಡಿಯನ್ಸ್ ಜತೆ ಇದ್ದಾಗ 3 ವರ್ಷ ಉತ್ತಮ ಫಲಿತಾಂಶ ಲಭಿಸಿತ್ತು. ಈ ಎಲ್ಲ ಅನುಭವಗಳು ಮುಂದಿನ ಕಾರ್ಯಕ್ಕೆ ಸಹಾಯವಾಗುತ್ತವೆ’ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.