ಏಶ್ಯ ಕಪ್ ಕ್ರಿಕೆಟ್: ಪಿಸಿಬಿ-ಬಿಸಿಸಿಐ ವ್ಯತಿರಿಕ್ತ ಹೇಳಿಕೆ
Team Udayavani, Mar 1, 2020, 5:35 AM IST
ಕರಾಚಿ: ಮೊನ್ನೆಯಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಏಶ್ಯ ಕಪ್ ಕ್ರಿಕೆಟ್ ಕೂಟ ದುಬಾೖಯಲ್ಲಿ ನಡೆಯಲಿದೆ ಎಂದು ಹೇಳಿದ್ದರು. ಇದರಲ್ಲಿ ಭಾರತ, ಪಾಕಿಸ್ಥಾನ ತಂಡಗಳೆರಡೂ ಪಾಲ್ಗೊಳ್ಳುತ್ತಿವೆ ಎಂದೂ ತಿಳಿಸಿದ್ದರು.
ಆದರೀಗ ಇದಕ್ಕೊಂದು ತಿರುವು ಸಿಕ್ಕಿದೆ. ಈ ಕೂಟವನ್ನು ಆಯೋಜಿಸುವ ಹೊಣೆ ಹೊತ್ತಿರುವ ಪಾಕಿಸ್ಥಾನ ಕ್ರಿಕೆಟ್ ಮಂಡಳಿ, ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದೆ. ಇನ್ನೂ ಸಮಯವಿದೆ, ಹಲವು ಆಯ್ಕೆಗಳಿವೆ ಎಂದು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ ಹೇಳಿದ್ದಾರೆ.
ಅಲ್ಲಿಗೆ ಏಶ್ಯ ಕಪ್ ಕೂಟವನ್ನು ಪಾಕಿಸ್ಥಾನದಲ್ಲೇ ನಡೆಸುತ್ತೇವೆ ಎಂದು ಪಿಸಿಬಿ ಹಠ ಹಿಡಿದರೆ ಅಚ್ಚರಿಯಿಲ್ಲ. ಕೂಟದ ಆತಿಥ್ಯ ಆ ದೇಶದ್ದಾಗಿದೆ. ಇತ್ತೀಚೆಗೆ ಅಲ್ಲಿಗೆ ಮತ್ತೆ ವಿದೇಶಿ ತಂಡಗಳು ತೆರಳಿ ಆಡಲು ಶುರು ಮಾಡಿವೆ. ಆದ್ದರಿಂದ ತನ್ನ ನೆಲದಲ್ಲಿ ಭದ್ರತಾ ಸಮಸ್ಯೆಯಿಲ್ಲ ಎಂದು ಪಾಕ್ ಹೇಳಿಕೊಂಡಿದೆ. ಅಕಸ್ಮಾತ್ ಏಶ್ಯ ಕಪ್ ಪಾಕಿಸ್ಥಾನದಲ್ಲೇ ನಡೆದರೆ ಭಾರತ ತಂಡಕ್ಕೆ ಪಾಕಿಸ್ಥಾನಕ್ಕೆ ತೆರಳಲು ಕೇಂದ್ರ ಸರಕಾರ ಅನುಮತಿ ನಿರಾಕರಿಸುವುದು ಖಂಡಿತ.