ಭಾರತ ಟೆಸ್ಟ್ ವಿಶ್ವಕಪ್ ಫೈನಲ್ ತಲುಪಿದರೆ ಏಶ್ಯ ಕಪ್ ಮುಂದಕ್ಕೆ?
Team Udayavani, Mar 1, 2021, 6:40 AM IST
ದುಬಾೖ: ಭಾರತ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್ ಪ್ರವೇಶಿಸಿದರೆ ಆಗ ಶ್ರೀಲಂಕಾ ಆತಿಥ್ಯದಲ್ಲಿ ನಡೆಯುವ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ಮುಂದೂಡಲ್ಪಡಲಿದೆ ಎಂಬ ಸುದ್ದಿಯೊಂದು ಕೇಳಿಬಂದಿದೆ. ಇವೆರಡೂ ಏಕಕಾಲದಲ್ಲಿ ನಡೆಯುವುದೇ ಇದಕ್ಕೆ ಕಾರಣ.
ಐಸಿಸಿ ವೇಳಾಪಟ್ಟಿ ಪ್ರಕಾರ 2021ರ ಜೂನ್ನಲ್ಲಿ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ವಿಶ್ವಕಪ್ ಫೈನಲ್ ನಡೆಯಲಿದೆ. ಮುಂದೂಡಲ್ಪಟ್ಟ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ಕೂಡ ಇದೇ ವೇಳೆ ಶ್ರೀಲಂಕಾದಲ್ಲಿ ಸಾಗಲಿದೆ. ಒಂದು ವೇಳೆ ಟೆಸ್ಟ್ ವಿಶ್ವಕಪ್ ಫೈನಲ್ಗೆ ಲಗ್ಗೆ ಇರಿಸಿದರೆ ಆಗ ಭಾರತಕ್ಕೆ ಏಶ್ಯ ಕಪ್ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. ಇದರಿಂದ ಏಶ್ಯದ ಕ್ರಿಕೆಟ್ ಮಂಡಳಿಗಳಿಗೆ ಹಾಗೂ ಟೂರ್ನಿಯ ಪ್ರಸಾರಕರಿಗೆ ದೊಡ್ಡ ಪ್ರಮಾಣದ ನಷ್ಟ ಸಂಭವಿಸಲಿದೆ. ಪಂದ್ಯಾವಳಿಯ ಆಕರ್ಷಣೆಯೂ ಕಡಿಮೆ ಆಗಲಿದೆ. ಇದನ್ನು ತಪ್ಪಿಸಬೇಕಾದರೆ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮುಂದೂಡುವುದೊಂದೇ ಮಾರ್ಗ ಎನ್ನಲಾಗಿದೆ.
ಧ್ವನಿಗೂಡಿಸಿದ ಪಾಕ್!
ಅಚ್ಚರಿಯೆಂಬಂತೆ, ಪಿಸಿಬಿ ಅಧ್ಯಕ್ಷ ಎಹಸಾನ್ ಮಣಿ ಕೂಡ ಈ ಕುರಿತು ಧ್ವನಿ ಎತ್ತಿರುವುದು. ಏಶ್ಯ ಕಪ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಸಾಧ್ಯವಾಗದೇ ಹೋದರೆ ಈ ಪಂದ್ಯಾವಳಿಯನ್ನು 2023ರ ತನಕ ಮುಂದೂಡುವುದೇ ಒಳ್ಳೆಯದು ಎಂದಿದ್ದಾರೆ.
ಜತೆಗೆ, ವರ್ಷಾಂತ್ಯ ಭಾರತದಲ್ಲಿ ನಡೆ ಯುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ವೇಳೆ ಪಾಕಿಸ್ಥಾನದ ಆಟಗಾರರ ಜತೆಗೆ ಅಭಿಮಾನಿಗಳಿಗೆ, ಮಾಧ್ಯಮದವರಿಗೆ ಭಾರತ ಸರಕಾರ ವೀಸಾ ಖಾತ್ರಿ ನೀಡ ಬೇಕೆಂದೂ ಮಣಿ ಮನವಿ ಮಾಡಿದರು.