ಬಿಸಿಸಿಐ ಆಡಳಿತಾಧಿಕಾರಿಗಳ ನಡುವೆಯೇ ಭಿನ್ನಮತ?
Team Udayavani, Jul 5, 2017, 10:13 AM IST
ಮುಂಬೈ: ಬಿಸಿಸಿಐಯನ್ನು ಸುಧಾರಿಸುವುದಕ್ಕೆ ಸರ್ವೋಚ್ಚ ನ್ಯಾಯಾಲಯ ನಾಲ್ವರು ಸದಸ್ಯರ ಆಡಳಿತಾಧಿಕಾರಿಗಳನ್ನು
ನೇಮಿಸಿತ್ತು. ಆದರೆ ಈ ಸದಸ್ಯರ ನಡುವೆಯೇ ಭಿನ್ನಮತ ತೋರಿದೆ ಎಂದು ಆಂಗ್ಲ ಮಾಧ್ಯಮದ ವರದಿಯೊಂದು ಹೇಳಿದೆ.
ಕುಂಬ್ಳೆ ವಿಚಾರದಲ್ಲಿ ಬಿಸಿಸಿಐ ನಡೆಯನ್ನು ವಿರೋಧಿಸಿ ಇತ್ತೀಚೆಗೆ ರಾಮಚಂದ್ರ ಗುಹಾ ರಾಜೀನಾಮೆ ನೀಡಿದ್ದರು. ಇದೀಗ ಮತ್ತೂಬ್ಬ ಸದಸ್ಯೆ ಡಯಾನ ಎಡುಲ್ಜಿ ಕೂಡ ಆಡಳಿತಾಧಿಕಾರಿಗಳ ಸಮಿತಿಯೊಂದಿಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದಾರೆಂದು ಹೇಳಲಾಗಿದೆ. ಭಾರತ ಕ್ರಿಕೆಟ್ ಕೋಚ್ ಸ್ಥಾನಕ್ಕೆ ಬಿಸಿಸಿಐ ಇತ್ತೀಚೆಗೆ 2ನೇ ಬಾರಿ ಅರ್ಜಿ ಕರೆದಿತ್ತು. ಇದನ್ನು ಡಯಾನ ವಿರೋಧಿಸಿದ್ದರು. ಮುಖ್ಯ ಆಡಳಿತಾಧಿಕಾರಿ ವಿನೋದ್ ರಾಯ್, ಸದಸ್ಯ ವಿಕ್ರಮ್ ಲಿಮಯೇ
ಬಿಸಿಸಿಐ ನಿಲುವಿಗೆ ಬೆಂಬಲ ಸೂಚಿಸಿದ್ದರು ಎನ್ನಲಾಗಿದೆ. ಅಷ್ಟಲ್ಲದೇ ಅನಿಲ್ ಕುಂಬ್ಳೆ ಅವರನ್ನು ರಾಮಚಂದ್ರ ಗುಹಾ ಸ್ಥಾನದಲ್ಲಿ ಬಿಸಿಸಿಐ ಆಡಳಿತಾಧಿಕಾರಿಯಾಗಿ ನೇಮಿಸಿಕೊಳ್ಳುವಂತೆಯೂ ಎಡುಲ್ಜಿ ಸೂಚಿಸಿದ್ದರಂತೆ. ಇದನ್ನೂ ರಾಯ್ ತಿರಸ್ಕರಿಸಿದ್ದಾರೆನ್ನಲಾಗಿದೆ.
ಇದರ ಜೊತೆಗೆ ಐಪಿಎಲ್ನಂತೆ ಮಹಿಳಾ ಟಿ20 ಲೀಗ್ ನಡೆಸಬೇಕೆಂಬುದು ಡಯಾನ ಬೇಡಿಕೆ. ಸದ್ಯದ ಪರಿಸ್ಥಿತಿಯಲ್ಲಿ
ಈ ಬೇಡಿಕೆ ಸಾಧುವಲ್ಲ ಎನ್ನುವುದು ವಿನೋದ್ ರಾಯ್ ಅಭಿಪ್ರಾಯ ಎನ್ನಲಾಗಿದೆ. ಈ ಬೆಳವಣಿಗೆ ಗಮನಿಸಿದರೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯಲ್ಲೇ ಭಿನ್ನಮತ ಬಿಗಡಾಯಿಸಿರುವ ಅನುಮಾನ ಮೂಡುತ್ತದೆ. ಸುಪ್ರೀಂ ನಿಯೋಜಿತ ಆಡಳಿತಾಧಿಕಾರಿ, ಉದ್ಯಮಿ ವಿಕ್ರಮ್ ಲಿಮಯೇ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಪರಿಣಾಮ ಆಡಳಿತಾಧಿಕಾರಿ ಸ್ಥಾನಕ್ಕೆ ಅವರು ರಾಜೀನಾಮೆ
ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.