ಶ್ರೀಶಾಂತ್ ಕೌಂಟಿ ಮನವಿ ತಳ್ಳಿಹಾಕಿದ ಸುಪ್ರೀಂ
Team Udayavani, May 16, 2018, 6:20 AM IST
ಹೊಸದಿಲ್ಲಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿಬಿದ್ದು ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾದ ಶ್ರೀಶಾಂತ್ಗೆ ಮತ್ತೆ ಹಿನ್ನಡೆ ಯಾಗಿದೆ. ಅವರ ಕೌಂಟಿ ಕನಸು ಛಿದ್ರಗೊಂಡಿದೆ.
ತನ್ನ ಮೇಲಿನ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡು ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಆಡಲು ಅವಕಾಶ ಮಾಡಿಕೊಡಬೇಕು ಎಂದು ಶ್ರೀಶಾಂತ್ ಮನವಿ ಮಾಡಿದ್ದರು. ಇದಕ್ಕೆ ಬಿಸಿಸಿಐನಿಂದ ಸಮ್ಮತಿ ದೊರಕಲಿಲ್ಲ. ಇದರಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಮನವಿಯನ್ನು ತಳ್ಳಿಹಾಕಿದ್ದಾರೆ.
ಶ್ರೀಶಾಂತ್ ತಳಮಳ ನಮಗೆ ಅರ್ಥವಾಗುತ್ತದೆ. ಆದರೆ ದಿಲ್ಲಿ ಹೈಕೋರ್ಟ್ ನಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದನ್ನು ನೋಡಿ ನಿರ್ಧರಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಹಿಂದೆ ಶ್ರೀಶಾಂತ್ ನಿರಪರಾಧಿ ಎಂದು ದಿಲ್ಲಿ ಹೈಕೋರ್ಟ್ ಆದೇಶ ನೀಡಿತ್ತು. ಇದರ ವಿರುದ್ಧ ದಿಲ್ಲಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ಜುಲೈಯಲ್ಲಿ ನಡೆಯಲಿದೆ.