ಹರ್ಯಾಣವನ್ನು ಮಣಿಸಿದ ಬೆಂಗಾಲ್
Team Udayavani, Sep 20, 2019, 5:53 AM IST
ಪುಣೆ: ಗುರುವಾರದ ಏಕೈಕ ಪ್ರೊ ಕಬಡ್ಡಿ ಮುಖಾಮುಖೀಯಲ್ಲಿ ಬೆಂಗಾಲ್ ವಾರಿಯರ್ 48-36 ಅಂಕಗಳಿಂದ ಹರ್ಯಾಣ ಸ್ಟೀಲರ್ಗೆ ಸೋಲುಣಿಸಿತು.
ಇದರೊಂದಿಗೆ ಬೆಂಗಾಲ್ ತನ್ನ ದ್ವಿತೀಯ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಇದು 17 ಪಂದ್ಯಗಳಲ್ಲಿ ಬೆಂಗಾಲ್ ಸಾಧಿಸಿದ 10ನೇ ಗೆಲುವು. ಒಟ್ಟು ಅಂಕ 63ಕ್ಕೆ ಏರಿದೆ. ದಬಾಂಗ್ ಡೆಲ್ಲಿ 69 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಬಂಗಾಲದ ತ್ರಿವಳಿಗಳಾದ ಮಣೀಂದರ್ ಸಿಂಗ್, ಕೆ. ಪ್ರಪಂಜನ್, ಮೊಹಮ್ಮದ್ ನಬಿಭಕ್Ò ಮೊದಲಾರ್ಧದಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ 30-14 ಅಂಕಗಳ ಭಾರೀ ಮುನ್ನಡೆ ಒದಗಿಸಿದರು. 7ನೇ ಮತ್ತು 13ನೇ ನಿಮಿಷದಲ್ಲಿ ಎದುರಾಳಿಯನ್ನು ಆಲೌಟ್ ಮಾಡಿದ್ದು ಬಂಗಾಲದ ಪ್ರಚಂಡ ಫಾರ್ಮ್ಗೆ ಸಾಕ್ಷಿಯಾಯಿತು. ಹರ್ಯಾಣ ಪರ ವಿನಯ್ ಮಾತ್ರ ಭರವಸೆಯ ಆಟವಾಡಿ ತಂಡಕ್ಕೆ ಮೇಲುಗೈ ಒದಗಿಸಲು ಶ್ರಮಿಸಿದರು. ಆದರೆ ಉಳಿದವರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ದ್ವಿತೀಯಾರ್ಧ ಆರಂಭಗೊಂಡ ಎರಡೇ ನಿಮಿಷದಲ್ಲಿ ಬೆಂಗಾಲ್ ಎದುರಾಳಿಯನ್ನು 3ನೇ ಸಲ ಆಲೌಟ್ ಮಾಡಿತು. ಆದರೆ ಇಲ್ಲಿಂದ ಸ್ಟೀಲರ್ಸ್ ಪ್ರಬಲ ಹೋರಾಟ ಸಂಘಟಿಸಿ ಪಂದ್ಯಕ್ಕೆ ಮರಳುವ ಸೂಚನೆ ನೀಡಿತಾದರೂ ಯಶಸ್ಸು ಕಾಣಲಿಲ್ಲ.
ಮಣೀಂದರ್ ಸಾಹಸ
ಬಂಗಾಲ ಪರ ಮಣೀಂದರ್ ಸಿಂಗ್ 18 ರೈಡಿಂಗ್ ಅಂಕ, ಬಲದೇವ್ ಸಿಂಗ್ 6 ಟ್ಯಾಕಲ್ ಅಂಕ ತಂದಿತ್ತರು. ಸ್ಟೀಲರ್ ಪರ ವಿನಯ್ 14 ಮತ್ತು ವಿಕಾಸ್ ಖಂಡೋಲ 9 ರೈಡಿಂಗ್ ಅಂಕ ಪಡೆದರು. ಪ್ರಶಾಂತ್ ರೈ (ರೈಡಿಂಗ್), ಧರ್ಮರಾಜ್ ಚೆರ್ಲಥಾನ್ (ರಕ್ಷಣೆ) ವೈಫಲ್ಯ ಹರ್ಯಾಣಕ್ಕೆ ಮುಳುವಾಯಿತು. ಪ್ರಶಾಂತ್ ರೈ ಗಳಿಸಿದ್ದು ಒಂದಂಕ ಮಾತ್ರ. ರಕ್ಷಣಾ ವಿಭಾಗದಲ್ಲಿ ಹರ್ಯಾಣ ತೀವ್ರ ಹಿನ್ನಡೆ ಅನುಭವಿಸಿರುವುದು ಕೋಚ್ ರಾಕೇಶ್ ಕುಮಾರ್ ಅವರನ್ನು ಚಿಂತಿಸುವಂತೆ ಮಾಡಿದೆ.