ಭುವನೇಶ್ವರ್ ಮತ್ತೆ ಗಾಯಾಳು: ಏಕದಿನಕ್ಕೆ ಠಾಕೂರ್ ಸೇರ್ಪಡೆ
Team Udayavani, Dec 13, 2019, 11:33 PM IST
ಚೆನ್ನೈ: ಮೊನ್ನೆಯಷ್ಟೇ ಚೇತರಿಸಿ ಕೊಂಡು ಟೀಮ್ ಇಂಡಿಯಾ ಸೇರಿಕೊಂಡ ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಮತ್ತೆ ಗಾಯಾಳಾಗಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿ ಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಮುಂಬಯಿಯ ಶಾದೂìಲ್ ಠಾಕೂರ್ ಸೇರ್ಪಡೆಗೊಂಡಿದ್ದಾರೆ.
ಈ ಸ್ಥಾನಕ್ಕೆ ನವದೀಪ್ ಸೈನಿ, ಉಮೇಶ್ ಯಾದವ್ ರೇಸ್ನಲ್ಲಿದ್ದರು. ಆದರೆ ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಶಾದೂìಲ್ಗೆ ಅವಕಾಶ ನೀಡಿತು.
ಮತ್ತೆ ಕಾಡಿದ ಸ್ನಾಯು ಸೆಳೆತ
ಭುವನೇಶ್ವರ್ ಕುಮಾರ್ ತೊಡೆಯ ಸ್ನಾಯು ಸೆಳೆತದಿಂದಾಗಿ ಕಳೆದ ಕೆಲವು ಸಮ ಯದಿಂದ ವಿಶ್ರಾಂತಿಯಲ್ಲಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಚೇತರಿಸಿಕೊಂಡ ಕಾರಣ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಗೆ ಆಯ್ಕೆಯಾದರು. ಆದರೆ ಈ ಸರಣಿಯ ಮುಂಬಯಿ ಪಂದ್ಯದಲ್ಲಿ ಭುವನೇಶ್ವರ್ಗೆ ಮತ್ತೆ ಸ್ನಾಯು ಸೆಳೆತದ ಸಮಸ್ಯೆ ಕಾಡಿತು. ಹೀಗಾಗಿ ಅವರು ಚೆನ್ನೈಯಲ್ಲಿ ಅಭ್ಯಾಸಕ್ಕೆ ಇಳಿಯಲಿಲ್ಲ.
ಇದು ಭಾರತದ ಏಕದಿನ ತಂಡದಲ್ಲಿ ಸಂಭವಿಸಿದ 2ನೇ ಬದಲಾವಣೆ. ಇದಕ್ಕೂ ಮೊದಲು ಆರಂಭಕಾರ ಶಿಖರ್ ಧವನ್ ಬದಲು ಮಾಯಾಂಕ್ ಅಗರ್ವಾಲ್ ಅವರನ್ನು
ಸೇರಿಸಿಕೊಳ್ಳಲಾಗಿತ್ತು.
ಸರಣಿಯ ಮೊದಲ ಏಕದಿನ ಪಂದ್ಯ ರವಿವಾರ ಚೆನ್ನೈಯಲ್ಲಿ ನಡೆಯಲಿದೆ.
ನೆಟ್ ಅಭ್ಯಾಸಕ್ಕೆ ಬುಮ್ರಾ
ಭುವನೇಶ್ವರ್ ಕುಮಾರ್ ತಂಡದಿಂದ ಬೇರ್ಪಟ್ಟ ಬೆನ್ನಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಕಡೆಯಿಂದ ಶುಭ ಸಮಾಚಾರವೊಂದು ಕೇಳಿ ಬಂದಿದೆ. ಅವರು ವಿಂಡೀಸ್ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯದ ವೇಳೆ ಭಾರತ ತಂಡದ ನೆಟ್ ಪ್ರ್ಯಾಕ್ಟೀಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಗಾಯಾಳಾಗಿದ್ದ ಬುಮ್ರಾ, ಅಂದಿನಿಂದ ಭಾರತ ತಂಡದಿಂದ ಬೇರ್ಪಟ್ಟಿದ್ದಾರೆ. ಇದೀಗ ಮುಂದಿನ ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ಸೇರಿಕೊಳ್ಳುವ ಸೂಚನೆ ನೀಡಿದ್ದಾರೆ.
ಪುನಶ್ಚೇತನ ಪ್ರಕ್ರಿಯೆಯ ಅಂಗವಾಗಿ ನೆಟ್ನಲ್ಲಿ ಕಾಣಿಸಿಕೊಳ್ಳುವ ವೇಳೆ ಬುಮ್ರಾ ಅವರ ಪ್ರಗತಿಯನ್ನು ಫಿಸಿಯೋ ನಿತಿನ್ ಪಟೇಲ್ ಹಾಗೂ ಟ್ರೇನರ್ ನಿಕ್ ವೆಬ್ ಗಮನಿಸಲಿದ್ದಾರೆ.
ವಿಂಡೀಸ್ ಸರಣಿಯ ಬಳಿಕ ಭಾರತ ಹೊಸ ವರ್ಷದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯ ವಿರುದ್ಧ ಸೀಮಿತ ಓವರ್ಗಳ ಸರಣಿಗಳಲ್ಲಿ ಭಾಗವಹಿಸಲಿದೆ. ಈ ವೇಳೆ ಬುಮ್ರಾ ತಂಡಕ್ಕೆ ಮರಳುವ ಸಾಧ್ಯತೆ ಕಡಿಮೆ. ಇದರ ಬದಲು ಭಾರತ “ಎ’ ತಂಡದೊಂದಿಗೆ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡು ಮ್ಯಾಚ್ ಪ್ರ್ಯಾಕ್ಟಿಸ್ ಮಾಡುವ ಇರಾದೆಯಲ್ಲಿದ್ದಾರೆ.