ಅಂತಿಮ ರೈಡ್ನಲ್ಲಿ ಗೆಲುವಿನ ಸಂಭ್ರಮ ಆಚರಿಸಿದ ಬುಲ್ಸ್
Team Udayavani, Sep 7, 2019, 12:13 AM IST
ಬೆಂಗಳೂರು: ಅಂತಿಮ ಹಂತದಲ್ಲಿ ತೀವ್ರ ಪೈಪೋಟಿ ಕಂಡ ತೆಲುವು ಟೈಟಾನ್ಸ್ ಎದುರಿನ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ 40-39 ಅಂಕಗಳ ರೋಚಕ ಜಯ ಸಾಧಿಸಿದೆ. ಪವನ್ ಶೆಹ್ರಾವತ್ ಅಂತಿಮ ರೈಡ್ನಲ್ಲಿ 2 ಅಂಕ ಸಂಪಾದಿಸಿ ಬುಲ್ಸ್ಗೆ ಗೆಲುವು ತಂದಿತ್ತರು.
ಶೆಹ್ರಾವತ್ ಪ್ರಚಂಡ ರೈಡಿಂಗ್ ಮೂಲಕ ಗಮನ ಸೆಳೆದರು. ಅವರು 23 ರೈಡ್ಗಳಿಂದ 22 ಅಂಕ ಸಂಪಾದಿಸಿದರು. ಟೈಟಾನ್ಸ್ ಪರ ಸಿದ್ಧಾರ್ಥ್ ದೇಸಾಯಿ ಆಟ ಕೂಡ ಅಮೋಘ ಮಟ್ಟದಲ್ಲಿತ್ತು. ಅವರು 22 ರೈಡಿಂಗ್ ಮೂಲಕ 22 ಅಂಕ ಗಳಿಸಿ ಕೊಟ್ಟರು.
15 ಪಂದ್ಯಗಳಿಂದ 9ನೇ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಬುಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ (48 ಅಂಕ).
ಯುಪಿ ವಿರುದ್ಧ ಪಾಟ್ನಾಗೆ ಸೋಲು
ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ತಂಡ ಪಾಟ್ನಾ ಪೈರೇಟ್ಸ್ ತಂಡವನ್ನು 41-29 ಅಂಕಗಳಿಂದ ಮಣಿಸಿದೆ. ಯುಪಿ ಪರ ಶ್ರೀಕಾಂತ್ ಜಾಧವ್ ದಾಳಿಯಲ್ಲಿ ಮಿಂಚಿದರೆ (10 ಅಂಕ), ನಿತೇಶ್ ಕುಮಾರ್ ರಕ್ಷಣೆಯಲ್ಲಿ ಕೈಹಿಡಿದರು (5 ಅಂಕ). ಪಾಟ್ನಾ ಪರ ಪ್ರದೀಪ್ ನರ್ವಾಲ್ ಅಮೋಘ ದಾಳಿ ನಡೆಸಿ 14 ಅಂಕ ಪಡೆದರು. ಉಳಿದ ಆಟಗಾರರು ವಿಫಲರಾದರು.
ಬೆಂಗಳೂರು ಚರಣಕ್ಕೆ ತೆರೆ
ಕಳೆದೊಂದು ವಾರದಿಂದ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ್ದ ಪೊ› ಕಬಡ್ಡಿ ಬೆಂಗಳೂರು ಚರಣದ ಪಂದ್ಯಗಳಿಗೆ ಶುಕ್ರವಾರ ಅದ್ಧೂರಿ ತೆರೆಬಿದ್ದಿದೆ. ಎರಡು ವರ್ಷದ ಬಳಿಕ ತವರಿಗೆ ಮರಳಿದ್ದ ಕೂಟ ಭರ್ಜರಿ ಯಶಸ್ಸು ಕಂಡಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯ ವೀಕ್ಷಿಸಿದರು. ಶನಿವಾರದಿಂದ ಕೋಲ್ಕತ ಚರಣ ಆರಂಭವಾಗಲಿದೆ.
ಸಚಿವ ಸಿ.ಟಿ. ರವಿ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್ ಸೇರಿದಂತೆ ಹಲವಾರು ಗಣ್ಯರು ಅಂತಿಮ ದಿನದ ಪ್ರೊ ಕಬಡ್ಡಿ ಪಂದ್ಯಕ್ಕೆ ಸಾಕ್ಷಿಯಾದರು. ಚಿತ್ರತಾರೆ ಶ್ರೀಮುರಳಿ ಕನ್ನಡ ವೀಕ್ಷಕ ವಿವರಣೆ ಕೊಠಡಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.