ಅಗ್ರಸ್ಥಾನಿ ಚೆನ್ನೈ ವಿರುದ್ಧ ಕೆಕೆಆರ್ಗೆ ಸೇಡಿನ ತವಕ
Team Udayavani, May 3, 2018, 7:30 AM IST
ಕೋಲ್ಕತಾ: ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಪಡೆಗೆ ಗುರುವಾರ ಕೋಲ್ಕತಾದ “ಈಡನ್ ಗಾರ್ಡನ್ಸ್’ನಲ್ಲಿ ಅಗ್ನಿಪರೀಕ್ಷೆಯೊಂದು ಎದುರಾಗುವ ಸಾಧ್ಯತೆ ಇದೆ. ಅದು ಕೋಲ್ಕತಾ ನೈಟ್ರೈಡರ್ ವಿರುದ್ಧ ಮರು ಪಂದ್ಯವನ್ನು ಆಡಲಿದ್ದು, ಭಾರೀ ಹೋರಾಟವನ್ನು ನಿರೀಕ್ಷಿಸಲಾಗಿದೆ.
ಸದ್ಯ ಚೆನ್ನೈ 8 ಪಂದ್ಯ ಗಳಿಂದ 12 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಎಲ್ಲರಿಗಿಂತ ಮೇಲಿದೆ. ಇತ್ತ ಕೆಕೆಆರ್ 8ರಲ್ಲಿ 4ನ್ನು ಗೆದ್ದು 4ನೇ ಸ್ಥಾನದಲ್ಲಿ ಉಳಿದಿದೆ. ಇಲ್ಲಿಂದ ಮೇಲೇರಬೇಕಾದರೆ ಕೆಕೆಆರ್ ತವರಿನಂಗಳದ ಲಾಭವನ್ನು ಎತ್ತಬೇಕಾ ದುದು ಅನಿವಾರ್ಯ. ಇದೂ ಸೇರಿದಂತೆ ಕೆಕೆಆರ್ ಈಡನ್ನಲ್ಲಿ ಒಟ್ಟು 3 ಲೀಗ್ ಪಂದ್ಯಗಳನ್ನು ಆಡಲಿಕ್ಕಿದೆ.
ಆಲ್ರೌಂಡರ್ ಶೇನ್ ವಾಟ್ಸನ್ ಅವರ ಭರ್ಜರಿ ಫಾರ್ಮ್ ಚೆನ್ನೈಗೆ ವರವಾಗಿ ಪರಿಣಮಿಸಿದೆ. ಆರ್ಸಿಬಿಯಲ್ಲಿರುವಾಗ ರನ್ನಿಗಾಗಿ ಚಡ ಪಡಿಸುತ್ತಿದ್ದ ವಾಟ್ಸನ್ ಪ್ರಸಕ್ತ ಋತುವಿನ ಸರ್ವಾ ಧಿಕ ವೈಯಕ್ತಿಕ ಗಳಿಕೆಯನ್ನು (106) ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಂಬಾಟಿ ರಾಯುಡು ಕೂಡ ಸಖತ್ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, 370 ರನ್ ಬಾರಿಸಿ ಅಗ್ರಸ್ಥಾನಿಯಾಗಿದ್ದಾರೆ; ಆರಂಭಿಕನಾಗಿಯೂ ಸೈ, ಮಧ್ಯಮ ಕ್ರಮಾಂಕಕ್ಕೂ ಸೈ ಎಂಬುದಾಗಿ ಸಾಧಿಸಿ ತೋರಿಸಿದ್ದಾರೆ.
ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯವನ್ನು ಗೆದ್ದು ಹೆಚ್ಚಿನ ಆತ್ಮವಿಶ್ವಾಸ ಸಂಪಾದಿಸಿದ್ದನ್ನು ಮರೆಯುವಂತಿಲ್ಲ. ಕೆಕೆಆರ್ ಬೆಂಗಳೂರಿನಲ್ಲಿ ಆರ್ಸಿಬಿ ನೀಡಿದ 176 ರನ್ ಗುರಿಯನ್ನು ನಾಲ್ಕೇ ವಿಕೆಟ್ ನಷ್ಟದಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತ್ತು. ಇತ್ತ ತನ್ನ 2ನೇ ತವರಾದ ಪುಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಡೆಲ್ಲಿಯನ್ನು 13 ರನ್ನುಗಳಿಂದ ಸೋಲಿಸಿತ್ತು. ವೇಗಿಗಳಾದ ಲುಂಗಿ ಎನ್ಗಿಡಿ ಮತ್ತು ಕೆ.ಎಂ. ಆಸಿಫ್ ಸೇರಿಕೊಂಡು ಮುನ್ನುಗ್ಗಿ ಬಂದ ಡೆಲ್ಲಿಗೆ ಲಗಾಮು ತೊಡಿಸುವಲ್ಲಿ ಯಶಸ್ವಿಯಾಗಿದ್ದರು. ಕೇರಳದ ಆಸಿಫ್ ಪಾಲಿಗೆ ಇದು ಮೊದಲ ಐಪಿಎಲ್ ಪಂದ್ಯವಾಗಿತ್ತು. 3 ಓವರ್ಗಳಿಂದ 43 ರನ್ ಸೋರಿಹೋದರೂ 2 ವಿಕೆಟ್ ಹಾರಿಸಿ ಗಮನ ಸೆಳೆದಿದ್ದರು.
ಕಾರ್ತಿಕ್ಗೆ ಸವಾಲು
ಚೆನ್ನೈಯವರೇ ಆದ ಕೆಕೆಆರ್ ಕಪ್ತಾನ ದಿನೇಶ್ ಕಾರ್ತಿಕ್ ಚೆನ್ನೈ ಸವಾಲನ್ನು ಹೇಗೆ ಎದುರಿಸಲಿ ದ್ದಾರೆ ಎಂಬುದು ಈ ಪಂದ್ಯದ ಮತ್ತೂಂದು ಕುತೂಹಲ. ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್ 6ಕ್ಕೆ 202 ರನ್ ಪೇರಿಸಿಯೂ ಸೋಲಿನ ಆಘಾತಕ್ಕೆ ಸಿಲುಕಿತ್ತು. ಚೆನ್ನೈ ಒಂದು ಎಸೆತ ಬಾಕಿ ಇರುವಂತೆಯೇ 5ಕ್ಕೆ 205 ರನ್ ಬಾರಿಸಿ ಅಮೋಘ ಜಯ ಸಾಧಿಸಿತ್ತು. 23 ಎಸೆತಗಳಿಂದ 56 ರನ್ ಬಾರಿಸಿದ ಸ್ಯಾಮ್ ಬಿಲ್ಲಿಂಗ್ಸ್ ಗೆಲುವಿನ ರೂವಾರಿಯಾಗಿದ್ದರು. ಈ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಳ್ಳಬೇಕಾದ ಒತ್ತಡ ಕೋಲ್ಕತಾ ಮೇಲಿದೆ.
ಸ್ಪಿನ್ನರ್ಗಳು ಪ್ರಧಾನ ಪಾತ್ರ
ಲಿನ್, ಉತ್ತಪ್ಪ, ರಸೆಲ್, ಕಾರ್ತಿಕ್ ಅವರೆಲ್ಲ ಕೆಕೆಆರ್ನ ಬ್ಯಾಟಿಂಗ್ ಹುರಿಯಾಳಾಗಿದ್ದಾರೆ. ಬೌಲಿಂಗ್ನಲ್ಲಿ ಸ್ಪಿನ್ನರ್ಗಳು ಪ್ರಧಾನ ಅಸ್ತ್ರವಾಗಿದ್ದಾರೆ. ಸುನೀಲ್ ನಾರಾಯಣ್, ಕುಲದೀಪ್ ಯಾದವ್, ಪೀಯೂಷ್ ಚಾವ್ಲಾ ಎಸೆತಗಳು ಈಡನ್ ಅಂಗಳದಲ್ಲಿ ಟರ್ನ್ ಪಡೆದದ್ದೇ ಆದಲ್ಲಿ ಚೆನ್ನೈ ಸಂಕಟಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ.
ಕೆಕೆಆರ್ ತನ್ನ ಕೊನೆಯ ತವರು ಪಂದ್ಯವನ್ನು ಎ. 21ರಂದು ಪಂಜಾಬ್ ವಿರುದ್ಧ ಆಡಿತ್ತು. ಮಳೆಪೀಡಿತ ಈ ಪಂದ್ಯದಲ್ಲಿ ಡಿ-ಎಲ್ ನಿಯಮದಂತೆ 9 ವಿಕೆಟ್ಗಳಿಂದ ಕಳೆದುಕೊಂಡಿತ್ತು.
ಧೋನಿ ಕಪ್ತಾನನ ಆಟ
ಕೆಕೆಆರ್ ವಿರುದ್ಧ 12-7ರ ಗೆಲುವಿನ ದಾಖಲೆ ಹೊಂದಿರುವ ಚೆನ್ನೈ ಗುರುವಾರದ ಫೇವರಿಟ್ ತಂಡ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಹಾಗೆಯೇ ಸದ್ಯದ ಫಾರ್ಮ್ ಕಂಡಾಗ ಧೋನಿ ಪಡೆಯೇ ಒಂದು ತೂಕ ಮೇಲಿದೆ ಎನ್ನಲಡ್ಡಿಯಿಲ್ಲ. ಸ್ವತಃ ಧೋನಿ ಕಳೆದ 3 ಇನ್ನಿಂಗ್ಸ್ಗಳಲ್ಲಿ ಕಪ್ತಾನನ ಆಟ ಪ್ರದರ್ಶಿಸುತ್ತ ಬಂದಿರುವುದು ತಂಡದ ಬ್ಯಾಟಿಂಗ್ ಚಿಂತೆಯನ್ನು ದೂರಗೊಳಿಸಿದೆ. ಧೋನಿಯ ಹಿಂದಿನ 3 ಇನ್ನಿಂಗ್ಸ್ಗಳಲ್ಲಿ 2 ಅರ್ಧ ಶತಕಗಳಿದ್ದವು. ಆರ್ಸಿಬಿ ವಿರುದ್ಧ 34 ಎಸೆತಗಳಿಂದ ಅಜೇಯ 70 ರನ್ ಸಿಡಿಸಿ 206 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಧೋನಿಯ ತಾಜಾ ಸಾಹಸಕ್ಕೊಂದು ಉತ್ತಮ ನಿದರ್ಶನ.