ಚೆಸ್ ಒಲಿಂಪಿಯಾಡ್ ಜ್ಯೋತಿಗೆ ಮಂಗಳೂರಿನಲ್ಲಿ ಸಂಭ್ರಮದ ಸ್ವಾಗತ
Team Udayavani, Jul 20, 2022, 12:08 AM IST
ಮಂಗಳೂರು: ಜಿಲ್ಲೆಗೆ ಆಗಮಿಸಿದ 44ನೇ ಚೆಸ್ ಒಲಿಂಪಿಯಾಡ್ ಜ್ಯೋತಿಗೆ ಮಂಗಳೂರಿನಲ್ಲಿ ಮಂಗಳವಾರ ಸಂಭ್ರಮದ ಸ್ವಾಗತ ಕೋರಲಾಯಿತು.
ಕುದು¾ಲ್ ರಂಗರಾವ್ ಪುರಭವನದಲ್ಲಿ ರಿಲೇ ಜ್ಯೋತಿ ಸ್ವಾಗತ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿಯವರು, “ಇದು ನಗರದ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ಸ್ವಾತಂತ್ರÂದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿ ಆಗಮನವಾಗುತ್ತಿದೆ.
ದೇಶದ ಎಲ ರಾಜ್ಯಗಳ ರಾಜಧಾನಿ ಹಾಗೂ 75 ಜಿಲ್ಲಾ ಕೇಂದ್ರಗಳಲ್ಲಿ ಇದು ಸಂಚರಿಸಲಿದೆ. ರಾಜ್ಯದ ಬೆಂಗಳೂರು ಮತ್ತು ಮಂಗಳೂರಿಗೆ ಈ ಸುವರ್ಣಾವಕಾಶ ದೊರೆತಿರುವುದು ಸೌಭಾಗ್ಯವಾಗಿದೆ’ ಎಂದರು.
“ಭಾರತದಲ್ಲೇ ಜನ್ಮ ತಾಳಿದ ಈ ಕ್ರೀಡೆಗೆ ಕೇಂದ್ರ ಸರಕಾರ ಅದ್ದೂರಿ ಬೆಂಬಲ ನೀಡುತ್ತಿರುವುದು ಸಂತಸದ ಸಂಗತಿ. ದೇಶದಲ್ಲಿ ಮೊದಲ ಬಾರಿಗೆ ಚೆಸ್ ಒಲಂಪಿಯಾಡ್ ಟಾರ್ಚ್ ರಿಲೇ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೊಸದಿಲ್ಲಿಯಲ್ಲಿ ಇದಕ್ಕೆ ಚಾಲನೆ ನೀಡಿದ್ದರು’ ಎಂದರು.
ಕರ್ಣಾಟಕ ಬ್ಯಾಂಕ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯೂಟಿವ್ಆಫೀಸರ್ ಮಹಾಬಲೇಶ್ವರ ಎಂ.ಎಸ್. ಅವರು ಮಾತನಾಡಿ, “ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಚದುರಂಗದಾಟವೂ ಒಂದು. ಅದು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಸರಕಾರ ಇದಕ್ಕೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಇನ್ನಷ್ಟು ಚೆಸ್ ತಾರೆಗಳು ಬೆಳಕಿಗೆ ಬರಲಿದ್ದಾರೆ’ ಎಂದರು.
ಬೆಂಗಳೂರಿನಿಂದ ಬೆಳಗ್ಗೆ ನಗರಕ್ಕೆ ಆಗಮಿಸಿದ ರಿಲೇ ಜ್ಯೋತಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಪುರಭವನಕ್ಕೆ ರ್ಯಾಲಿ ಮೂಲಕ ಸಾಗಿಬಂತು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಯೇನಪೊಯ ವಿವಿ ಉಪ ಕುಲಪತಿ ಡಾ|ಎಂ. ವಿಜಯ ಕುಮಾರ್, ಗ್ರ್ಯಾನ್ಮಾಸ್ಟರ್ಗಳಾದ ತೇಜಕುಮಾರ್, ಜಿ.ಎ. ಸ್ಟಾನಿ, ಚೆಸ್ ಫೆಡರೇಶನ್ ಅಧ್ಯಕ್ಷ ರಮೇಶ್ ಕೋಟೆ, ಎನ್.ಎಸ್.ಎಸ್. ಪ್ರೋಗ್ರಾಂ ಕೋ-ಆರ್ಡಿನೇಟರ್ ಡಾ| ಅಶ್ವಿನಿ ಶೆಟ್ಟಿ, ನೆಹರೂ ಯುವ ಕೇಂದ್ರದ ಅಧಿಕಾರಿ ವಿಷ್ಣುಮೂರ್ತಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಭಾರತೀಯ ಚೆಸ್ ಫೆಡರೇಶನ್ನ ಜಿಲ್ಲಾ ಅಧ್ಯಕ್ಷ ರಾಜಗೋಪಾಲ್ ಶೆಣೈ, ನೆಹರೂ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ರಘುವೀರ್ ಸೂಟರ್ಪೇಟೆ, ಎನ್ಸಿಸಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.