ಮಂಗಳೂರಿನಲ್ಲಿ ಕ್ರಿಸ್ ಗೇಲ್ ಕಲರವ !
Team Udayavani, Feb 6, 2017, 3:45 AM IST
ಮಂಗಳೂರು: ಕರಾವಳಿ ನಗರಿ ಮಂಗಳೂರು ರವಿವಾರ ಎಂದಿನಂತಿರಲಿಲ್ಲ. ಕ್ರೀಡಾಭಿಮಾನಿಗಳು ತೀವ್ರ ಕುತೂಹಲದಿಂದ ಬೀದಿಗಿಳಿದು ಧಾವಿಸಿ ಬರುತ್ತಿದ್ದರು. ಅಲ್ಲಿ ವಿಶಿಷ್ಟ ಸಂಚಲನವೊಂದು ಮೂಡಿತ್ತು. ಇದಕ್ಕೆ ಕಾರಣರಾದವರು ವಿಶ್ವ ಕ್ರಿಕೆಟಿನ ಸ್ಫೋಟಕ ಬ್ಯಾಟ್ಸ್ಮನ್, ಐಪಿಲ್ನ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಮೂಲಕ ಕನ್ನಡಿಗರ ಮನಗೆದ್ದ ವೆಸ್ಟ್ ಇಂಡೀಸ್ನ ಖ್ಯಾತ ಕ್ರಿಕೆಟಿಗ ಕ್ರಿಸ್ ಗೇಲ್!
ಹೌದು, ಕ್ರಿಸ್ ಗೇಲ್ ರವಿವಾರ ಮಂಗಳೂರಿಗೆ ಆಗಮಿಸಿ ಎಲ್ಲರಲ್ಲೂ ರೋಮಾಂಚನ ಮೂಡಿಸಿದ್ದರು!
ಮಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಕ್ರಿಸ್ ಗೇಲ್ ಅವರನ್ನು ಭಾರತೀಯ ಸಂಪ್ರದಾಯಂತೆ ಆರತಿ ಬೆಳಗಿ, ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು. ಬಳಿಕ ಕರಾವಳಿಯ ಸೀಯಾಳ ಕುಡಿದ ಗೇಲ್, ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು.
ಕ್ರಿಸ್ ಗೇಲ್ ಮಂಗಳೂರಿಗೆ ಆಗಮಿಸುವ ಸುದ್ದಿ ತಿಳಿದು ಬಲ್ಮಠದಲ್ಲಿ ಭಾರೀ ಸಂಖ್ಯೆ ಯಲ್ಲಿ ಕ್ರಿಕೆಟ್ ಅಭಿಮಾನಿಗಳು ನೆರೆದಿದ್ದರು. ರಸ್ತೆಯ ಅಕ್ಕಪಕ್ಕದಲ್ಲೂ ಗೇಲ್ಗಾಗಿ ಕಾದು ನಿಂತಿದ್ದರು. ಪೊಲೀಸ್ ಭದ್ರತೆ ಹಾಗೂ ಅಂಗರಕ್ಷಕರೊಂದಿಗೆ ಗೇಲ್ ಕಾರಿ ನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಇಲ್ಲಿತ್ತು ಗಂಗ್ನಮ್ ಡ್ಯಾನ್ಸ್!
ಗೇಲ್ ಅತಿಯಾಗಿ ಮೆಚ್ಚುವ, ಸಾಮಾಜಿಕ ಜಾಲತಾಣದ ಮೂಲಕ ಹುಚ್ಚೆಬ್ಬಿಸಿದ “ಓಪನ್ ಗಂಗ್ನಮ್ ಸ್ಟೈಲ್’ ಹಾಡು ಕೂಡ ತೇಲಿ ಬಂತು. “ಸೂಪರ್ಸ್ಟಾರ್ ಗೇಲ್ ಗೇಲ್…’ ಎಂಬ ಅಭಿಮಾನಿಗಳ ಭೋರ್ಗರೆತ ಅರಬೀ ಸಮುದ್ರಕ್ಕೂ ಸಡ್ಡು ಹೊಡೆಯುವಂತಿತ್ತು. ಭಾರೀ ಸಂಖ್ಯೆಯಲ್ಲಿ ಗೇಲ್ ಅಭಿಮಾನಿಗಳು ನೆರೆದಿದ್ದರಿಂದ ಸಹಜವಾಗಿಯೇ ನೂಕು ನುಗ್ಗಲು ಉಂಟಾಯಿತು.
“ಮಂಗಳೂರಿಗೆ ಮೊದಲ ಬಾರಿಗೆ ಆಗ ಮಿಸಿದ್ದೇನೆ. ಇಲ್ಲಿನ ವಾತಾವರಣ ಕಂಡು ತುಂಬ ಖುಷಿಯಾಯಿತು. ಇದು ಬೆಂಗ ಳೂರು ಅಲ್ಲ. ಮಂಗಳೂರು ಹಾಗೂ ಬೆಂಗಳೂರು ಮಧ್ಯೆ ಒಂದೆರಡು ಅಕ್ಷರಗಳ ಬದಲಾವಣೆ ಹೊರತು ಎರಡೂ ಉತ್ತಮ ವಾತಾವರಣದ ಸ್ಥಳ’ ಎಂದರು ಗೇಲ್.
ಉದ್ಯಮಿಗಳಾದ ರಮೇಶ್ ನಾಯಕ್, ಸುಚಿತ್ರಾ ಆರ್. ನಾಯಕ್, ದಯಾನಂದ್ ನಾಯಕ್, ಸುಧಾಕರ್ ನಾಯಕ್, ಡಾ| ಹನ್ಸ ರಾಜ್ ಆಳ್ವ, ಡಾ| ಪವನ್ ಹೆಗ್ಡೆ, ಸದಾನಂದ ನಾಯಕ್, ಸಂದೀಪ್ ಮಲ್ಯ, ಪ್ರಖ್ಯಾತ್, ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
ನಿಮ್ಮಿಂದ ನಾನು: ಗೇಲ್
ಯೆಯ್ನಾಡಿಗೆ ಆಗಮಿಸಿದ ಕ್ರಿಸ್ ಗೇಲ್, ಅಭಿಮಾನಿಗಳ ಜತೆ ಸ್ವಲ್ಪ ಸಮಯ ಕಳೆದರು. ಈ ಸಂದರ್ಭದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಮಂಗಳೂರಿನಲ್ಲಿ ನನಗೆ ದೊರೆತಿರುವ ಹೃದಯಸ್ಪರ್ಶಿ ಸ್ವಾಗತ ಬಹಳ ಖುಷಿ ಕೊಟ್ಟಿದೆ. ಅಭಿಮಾನಿಗಳ ಹಾರೈಕೆ, ಬೆಂಬಲ ನನ್ನನ್ನು ಕ್ರಿಕೆಟ್ನಲ್ಲಿ ಮುಂದುವರಿಯುವಂತೆ ಮಾಡಿದೆ. ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಮಂಗಳೂರಿಗೆ ಬಂದಿದ್ದೇನೆ. ನಿಮ್ಮೊಂದಿಗೆ ಸ್ವಲ್ಪ ಹೊತ್ತು ಕಳೆಯವ ಅವಕಾಶ ಒದಗಿಸಿದೆ…’ ಎಂದರು. ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿ ದರು.