ಭಾರತಕ್ಕೆ ಬಲಿಷ್ಠ ಇಟಲಿ ಎದುರಾಳಿ
Team Udayavani, Feb 1, 2019, 12:30 AM IST
ಕೋಲ್ಕತಾ: ಬಹುತೇಕ ಹೊಸ ರೂಪ ಪಡೆದಿರುವ ಡೇವಿಸ್ ಕಪ್ ಟೆನಿಸ್ನಲ್ಲಿ ಭಾರತ-ಇಟಲಿ ತಂಡಗಳ ಹೋರಾಟ ಶುಕ್ರವಾರ-ಶನಿವಾರ ಕೋಲ್ಕತಾದಲ್ಲಿ ನಡೆಯಲಿದೆ. ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳ ಸೆಟ್ ಸಂಖ್ಯೆ 5ರಿಂದ 3ಕ್ಕೆ ಇಳಿದಿದೆ. ಮಾತ್ರವಲ್ಲ ಗುಂಪು ಹಂತಕ್ಕೆ ತೇರ್ಗಡೆಯಾಗಲು ಅರ್ಹತಾ ಸುತ್ತನ್ನು ಶುರು ಮಾಡಲಾಗಿದೆ. ಈ ಪ್ರಕಾರ ವಿಶ್ವಾದ್ಯಂತ 12 ಅರ್ಹತಾ ಸುತ್ತು ನಡೆಯಲಿದೆ. ಸ್ಪೇನಿನ ಮ್ಯಾಡ್ರಿಡ್ನಲ್ಲಿ ಈ ವರ್ಷಾಂತ್ಯದ ನವೆಂಬರ್ನಲ್ಲಿ ಫೈನಲ್ ನಡೆಯಲಿದೆ.
ಸ್ವದೇಶದಲ್ಲೊಂದು ಸರಣಿ ವಿದೇಶದಲ್ಲೊಂದು ಸರಣಿಯಂತೆ ಪಂದ್ಯಗಳನ್ನು ಆಯೋಜಿಸುವ ಮಾದರಿಯನ್ನು ಮಾತ್ರ ಯಥಾವತ್ ಉಳಿಸಿಕೊಳ್ಳಲಾಗಿದೆ. ಹಲವು ಬದಲಾವಣೆಗಳೊಂದಿಗೆ ಆಕರ್ಷಕವಾಗಿ ಗೋಚರಿಸುತ್ತಿರುವ ಡೇವಿಸ್ಕಪ್ನಲ್ಲಿ ಭಾರತ, ಬಲಿಷ್ಠ ಇಟಲಿ ತಂಡವನ್ನು ತನ್ನದೇ ನೆಲದಲ್ಲಿ ಎದುರಿಸುವ ಅವಕಾಶ ಪಡೆದಿದೆ.ಶುಕ್ರವಾರ ಇತ್ತಂಡಗಳ ನಡುವೆ 2 ಸಿಂಗಲ್ಸ್ ಪಂದ್ಯಗಳು ನಡೆಯಲಿವೆ. ಶನಿವಾರ 1 ಡಬಲ್ಸ್ ಹಾಗೂ ಮತ್ತೆರಡು ರಿವರ್ಸ್ ಸಿಂಗಲ್ಸ್ ಪಂದ್ಯ ನಡೆಯಲಿದೆ. ಕನಿಷ್ಠ 3 ಪಂದ್ಯ ಗೆದ್ದ ತಂಡಕ್ಕೆ ಗುಂಪು ಹಂತಕ್ಕೆ ತೇರ್ಗಡೆಯಾಗುವ ಅವಕಾಶ ಲಭ್ಯವಾಗಲಿದೆ. ಯಾವುದೇ ತಂಡ ಸತತವಾಗಿ 3 ಪಂದ್ಯ ಗೆದ್ದರೆ ಉಳಿದೆರಡು ಪಂದ್ಯಗಳನ್ನು ಆಡಿಸುವುದಿಲ್ಲ.
ಪ್ರಜ್ಞೆàಶ್ ನೆಚ್ಚಿನ ಆಟಗಾರ
ಭಾರತ ತಂಡದಲ್ಲಿ ಸದ್ಯ ಫಾರ್ಮ್ನಲ್ಲಿರುವ ಪ್ರಜ್ಞೆàಶ್ ಗುಣೇಶ್ವರನ್, ರಾಮ್ಕುಮಾರ್ ರಾಮನಾಥನ್ ಇದ್ದಾರೆ. ಡಬಲ್ಸ್ನಲ್ಲಿ ರೋಹನ್ ಬೋಪಣ್ಣ-ದಿವಿಜ್ ಶರಣ್ ಸ್ಪರ್ಧಿಸಲಿದ್ದಾರೆ. 102ನೇ ಶ್ರೇಯಾಂಕದಲ್ಲಿರುವ ಪ್ರಜ್ಞೆàಶ್ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಆಸ್ಟ್ರೇಲಿಯನ್ ಓಪನ್ ಅರ್ಹತಾ ಸುತ್ತಿನಲ್ಲಿ ಅವರು ವಿಶ್ವದ 25ನೇ ಶ್ರೇಯಾಂಕದ ಡೆನ್ನಿಸ್ ಶಪೊವಲೋವ್ ಅವರನ್ನು ಸೋಲಿಸಿದ್ದರು. ಮತ್ತೂಂದು ಕಡೆ ಅನುಭವಿ ರಾಮಕುಮಾರ್ ಕೂಡ ಭಾರತದ ಭರವಸೆಗೆ ಕಾರಣರಾಗಿದ್ದಾರೆ. ಡಬಲ್ಸ್ನಲ್ಲಿ ಗ್ರ್ಯಾನ್ಸ್ಲಾéಮ್ ಕಿರೀಟವನ್ನೇ ಗೆದ್ದಿರುವ ರೋಹನ್ ಬೋಪಣ್ಣ ತಂಡದಲ್ಲಿರುವುದು ಭಾರತದ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಇವರಿಗೆ ದಿವಿಜ್ ಶರಣ್ ಸೂಕ್ತ ಬೆಂಬಲ ನೀಡುವ ನಂಬಿಕೆಯಿದೆ.
ಇಟಲಿ ಬಲಿಷ್ಠ ತಂಡ
ಪ್ರವಾಸಿ ಇಟಲಿ ತಂಡದಲ್ಲಿ ಮಾರ್ಕೊ ಸೆಶಿನಾಟೊ, ಆ್ಯಂಡ್ರಿಯಾಸ್ ಸೆಪ್ಪಿ, ಮ್ಯಾಟಿಯೊ ಬಾರೆಟ್ಟಿನಿ ಇದ್ದಾರೆ. 2015ರಲ್ಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾéಮ್ನಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದಿರುವ ಸಿಮೋನ್ ಬೊಲೆಲ್ಲಿ ಕೂಡ ಇದ್ದಾರೆ. ಈ ತಂಡದಲ್ಲಿ ಮೂವರು ಆಟಗಾರರು ವಿಶ್ವದ 50 ಶ್ರೇಯಾಂಕದೊಳಗೆ ಇದ್ದಾರೆನ್ನುವುದು ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆ. ಭಾರತ ಹಿಂದಿನ ಪಂದ್ಯದಲ್ಲಿ ಸರ್ಬಿಯ ವಿರುದ್ಧ 0-4ರಿಂದ ಸೋತು ಹೋಗಿತ್ತು. ಆದ್ದರಿಂದ ಆಟವಾಡದ ನಾಯಕ ಮಹೇಶ್ ಭೂಪತಿಗೆ ಇಲ್ಲಿ ತಂಡವನ್ನು ಗೆಲ್ಲಿಸಲೇಬೇಕಾದ ಒತ್ತಡವಿದೆ. ಆಟಗಾರರಿಗೆ ಯಾವುದೇ ಕಾರಣಕ್ಕೂ ಮೈಮರೆಯದಂತೆ ಅವರು ಎಚ್ಚರಿಕೆ ನೀಡಿದ್ದಾರೆ.
ಕೋಲ್ಕತಾ ಭಾರತತದ ನೆಚ್ಚಿನ ತಾಣ
ಇಟಲಿ ವಿರುದ್ಧ ಭಾರತ ಉತ್ತಮ ಗೆಲುವಿನ ದಾಖಲೆ ಹೊಂದಿಲ್ಲ. ಆದರೆ ಪ್ರಸ್ತುತ ಪಂದ್ಯಗಳು ನಡೆಯುತ್ತಿರುವ “ಕಲ್ಕತ್ತ ಸೌತ್ ಕ್ಲಬ್’ನಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಇಲ್ಲಿ 8 ಪಂದ್ಯಗಳನ್ನು ಗೆದ್ದಿದ್ದರೆ, 2 ಪಂದ್ಯಗಳನ್ನು ಮಾತ್ರ ಸೋತಿದೆ. 1985ರಲ್ಲಿ ಇಟಲಿ ವಿರುದ್ಧವೂ ಭಾರತ ಒಂದು ಪಂದ್ಯವನ್ನು ಗೆದ್ದಿತ್ತು.
ಸೆಟ್ ಸಂಖ್ಯೆಯನ್ನು ಕಡಿಮೆ ಮಾಡಿದ್ದೇಕೆ?
ಡೇವಿಸ್ ಕಪ್ನಲ್ಲಿ ಅತ್ಯಂತ ಕ್ರಾಂತಿಕಾರಕವಾದ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಪುರುಷರ ಸಿಂಗಲ್ಸ್ನ ಸೆಟ್ಗಳ ಸಂಖ್ಯೆಯನ್ನು 5ರಿಂದ 3ಕ್ಕಿಳಿಸಿದ್ದು ಮಹತ್ವದ್ದು. ಅಭಿಮಾನಿಗಳು ಡೇವಿಸ್ಕಪ್ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದರಿಂದ ಪಂದ್ಯದ ಅವಧಿಯನ್ನು ಕಿರಿದುಗೊಳಿಸಲು ಈ ನಿರ್ಧಾರ ಮಾಡಲಾಗಿದೆ. ಇದರಿಂದ 3 ಸೆಟ್ನಲ್ಲಿ ಪಂದ್ಯ ಮುಗಿದು ಹೋಗುವುದು ಮಾತ್ರವಲ್ಲ, ಹೆಚ್ಚು ಆಕರ್ಷಕವಾಗಿಯೂ ಇರುತ್ತದೆ ಎನ್ನುವುದು ಲೆಕ್ಕಾಚಾರ. ಮುಂದಿನ ದಿನಗಳಲ್ಲಿ ಗ್ರ್ಯಾನ್ಸ್ಲಾéಮ್ ಕೂಟಗಳಲ್ಲೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆಯಿದೆ.