ಗೆಲುವಿನ ಹಳಿ ಏರಲು ರಾಜಸ್ಥಾನ ಹೋರಾಟ: ಡೆಲ್ಲಿಗೆ ಮತ್ತೊಂದು ಗೆಲುವಿನ ಯೋಜನೆ
Team Udayavani, Oct 9, 2020, 9:12 AM IST
ಶಾರ್ಜಾ: ಟೂರ್ನಿಯಲ್ಲಿ ಇದುವರೆಗೂ ಸ್ಥಿರ ನಿರ್ವಹಣೆ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಶುಕ್ರವಾರದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿದೆ. ಈ ಪಂದ್ಯ ಮತ್ತೂಮ್ಮೆ ಸಿಕ್ಸರ್ ಸುರಿಮಳೆಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಉಭಯ ತಂಡಗಳಿಗೂ ಯುವ ಆಟಗಾರರೇ ಹೆಚ್ಚಿನ ಬಲ ತುಂಬಿರುವುದರಿಂದ ಈ ಕಾದಾಟ ಕುತೂಹಲಕಾರಿ ಎನಿಸಲಿದೆ.
ಡೆಲ್ಲಿ ಸಮರ್ಥ ತಂಡ: ಈ ಬಾರಿಯ ಐಪಿಎಲ್ ಕೂಟದಲ್ಲಿ ಸೈಲೆಂಟ್ ಆಗಿ ಆಟವಾಡುತ್ತಾ ಎಲ್ಲರ ಮನಗೆದ್ದಿರುವ ಡೆಲ್ಲಿ ಮೊದಲು ಪ್ಲೇ ಆಫ್ಗೆ ಪ್ರವೇಶ ಪಡೆಯುವ ಸೂಚನೆಯೊಂದನ್ನು ನೀಡಿದೆ. ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕದೊಂದಿಗೆ 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಡೆಲ್ಲಿ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನಕ್ಕೇರಿ ನಿಟ್ಟುಸಿರು ಬಿಡುವ ಯೋಜನೆ ಅಯ್ಯರ್ ಬಳಗದ್ದಾಗಿದೆ. ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಭಾರತೀಯರು ಮಿಂಚುತ್ತಿರುವುದು ತಂಡಕ್ಕೆ ಹೆಚ್ಚು ಸಹಕಾರಿಯಾಗಿದೆ.
ಪೃಥ್ವಿಶಾ, ಶಿಖರ್ ಧವನ್, ನಾಯಕ ಶ್ರೇಯಸ್ ಅಯ್ಯರ್ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ. ಬೌಲಿಂಗ್ನಲ್ಲಿ ರಬಾಡ, ಅನ್ರಿಚ್ ನೋರ್ಜೆ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಕಳೆದ ಆರ್ಸಿಬಿ ವಿರುದ್ಧ ಮಿಂಚಿದ್ದ ಮಾರ್ಕಸ್ ಸ್ಟೋಯಿನಿಸ್ ಆಲ್ ರೌಂಡ್ ಪ್ರದರ್ಶನ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್. ಆದರೆ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಗಾಯದ ಸಮಸ್ಯೆಯಿಂದ ಕೂಟದಿಂದ ಹೊರನಡೆದಿದ್ದು ಡೆಲ್ಲಿ ಸ್ಪಿನ್ ವಿಭಾಗಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗುವುದಂತು ನಿಜ
ಇದು ಸಣ್ಣ ಅಂಗಳ
ಶಾರ್ಜಾ ಮೈದಾನ ಟಿ20 ಮಾದರಿಯ ಕ್ರಿಕೆಟಿಗೆ ಹೇಳಿ ಮಾಡಿಸಿದಂತಿದೆ ಇಲ್ಲಿ ಹೊಡಿಬಡಿ ಆಟ ಸರ್ವೆಸಾಮಾನ್ಯ ಇಲ್ಲಿ ಆಡಿದ ಬಹುತೇಕ ಪಂದ್ಯಗಳಲ್ಲಿ 200 ಪ್ಲಸ್ ಮೊತ್ತ ದಾಖಲಾಗಿದ್ದರೂ ಚೇಸಿಂಗ್ ಮಾಡಿ ಎದುರಾಳಿ ತಂಡಗಳು ಗೆದ್ದ ಅದೆಷ್ಟೊ ನಿದರ್ಶನಗಳಿವೆ ಆದ್ದರಿಂದ ಈ ಪಂದ್ಯವೂ ಸಿಕ್ಸರ್ ಬೌಂಡರಿಗಳ ಸುರಿಮಳೆಗೆ ಕಮ್ಮಿ ಇರಲಾರದು. ರಾಜಸ್ಥಾನ ಇಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವುದರಿಂದ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ:ರಾಹುಲ್ ನಾಮ್ ತೊ ಸುನಾ ಹಿ ಹೋಗಾ!
ರಾಜಸ್ಥಾನಕ್ಕೆ ಬ್ಯಾಟಿಂಗ್ ಚಿಂತೆ ಮೊದಲೆರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದ್ದ ಸಂಜು ಸ್ಯಾಮ್ಸನ್, ನಾಯಕ ಸ್ಟೀವನ್ ಸ್ಮಿತ್ ಇದೀಗ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ತಂಡದ ವ್ಯವಸ್ಥಾಪಕರಿಗೆ ತಲೆನೋವು ತಂದಿದೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ತಮ್ಮ ಅವಕಾಶವನ್ನು ಸಮರ್ಥಿ ಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಮೇಜರ್ ಬದಲಾವಣೆ ಮಾಡಿ ಯಶಸ್ಸು ಕಾಣದ ರಾಜಸ್ಥಾನ್ ಈ ಪಂದ್ಯಕ್ಕೂ ಕೆಲ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ. ದುಬಾರಿ ಸ್ಪೆಲ್ ನಡೆಸಿದ ಅಂಕಿತ್ ರಜಪೂತ್ ಬದಲಿಗೆ ವರಣ್ ಆ್ಯರನ್ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆರಂಭಿಕನಾಗಿ ಜೈಸ್ವಾಲ್ ಬದಲು ಮನನ್ ವೋಹ್ರಾ ಬ್ಯಾಟ್ ಬೀಸಲೂಬಹುದು.
ರಾಜಸ್ಥಾನ: ಜೈಸ್ವಾಲ್/ಮನನ್ ವೋಹ್ರಾ, ಸ್ಟೀವನ್ ಸ್ಮಿತ್ (ನಾಯಕ), ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್, ಮಹಿಪಾಲ್ ಲೊನ್ರೊರ್, ರಾಹುಲ್ ತೆವಾತಿಯ, ಜೋಫ್ರಾ ಆರ್ಚರ್, ಟಾಮ್ ಕರನ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್/ ವರುಣ್ ಆ್ಯರನ್ ಕಾರ್ತಿಕ್ ತ್ಯಾಗಿ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರಾನ್ ಹೆಟ್ಮೇರ್, ಮಾರ್ಕಸ್ ಸ್ಟೋಯಿನಿಸ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅನ್ರಿಚ್ ನೋರ್ಜೆ