ಬಾಂಗ್ಲಾದೇಶ ಟಿ20 ಸರಣಿ: ಆಯ್ಕೆಯಾಗುವರೇ ಧೋನಿ?
Team Udayavani, Oct 23, 2019, 11:26 PM IST
ಮುಂಬಯಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಗುರುವಾರ ಪ್ರಕಟಗೊಳ್ಳಲಿರುವ ಭಾರತ ತಂಡ ಅನೇಕ ಕುತೂಹಲವನ್ನು ಕಾಯ್ದುರಿಸಿದೆ. ಮಾಜಿ ನಾಯಕ, ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ದಿಂದ ಬೇರ್ಪಟ್ಟಿರುವ ಮಹೇಂದ್ರ ಸಿಂಗ್ ಧೋನಿ ಮರಳಿ ಭಾರತ ತಂಡವನ್ನು ಪ್ರವೇಶಿಸುವರೇ ಎಂಬ ನಿರೀಕ್ಷೆ ಗರಿಗೆದರಿದೆ.
ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಆಯ್ಕೆಗೂ ಮುನ್ನ ಧೋನಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಇಲ್ಲಿ ಧೋನಿ ಭವಿಷ್ಯ ಏನು ಎಂಬ ಬಹುದಿನಗಳ ಪ್ರಶ್ನೆಗೆ ಉತ್ತರ ದೊರಕುವ ಎಲ್ಲ ಸಾಧ್ಯತೆ ಇದೆ. ಅಕಸ್ಮಾತ್ ಧೋನಿ ಆಯ್ಕೆಯಿಂದ ಹೊರಗುಳಿದರೆ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಕೀಪಿಂಗ್ ಸ್ಥಾನಕ್ಕೆ ಸ್ಪರ್ಧೆ ಏರ್ಪಡಲಿದೆ. ಸ್ಯಾಮ್ಸನ್ ಇತ್ತೀಚೆಗಷ್ಟೇ ವಿಜಯ್ ಹಜಾರೆ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದರು.
ಕೊಹ್ಲಿಗೆ ವಿಶ್ರಾಂತಿ ಖಚಿತ
2018ರ ಅಕ್ಟೋಬರ್ನಿಂದ ಸತತವಾಗಿ ಆಡುತ್ತಲೇ ಇರುವ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವುದು ಬಹುತೇಕ ಖಚಿತ ಗೊಂಡಿದೆ. ಆಗ ರೋಹಿತ್ ಶರ್ಮ ನಾಯಕರಾಗಲಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶಸ್ತ್ರಚಿಕಿತ್ಸೆಗೆ ಒಳಗಾದ್ದರಿಂದ ಮುಂಬಯಿಯ ಆಲ್ರೌಂಡರ್ ಶಿವಂ ದುಬೆ ಅವರಿಗೆ ಭಾರತ ತಂಡದ ಬಾಗಿಲು ತೆರೆಯಲೂಬಹುದು.
ಭಾರತ-ಬಾಂಗ್ಲಾದೇಶ ನಡುವೆ 3 ಟಿ20 ಪಂದ್ಯಗಳ ಜತೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಲಾಗುವುದು.