ವೀರಶೈವ ಪದ ಬಗ್ಗೆ ಹಠ ಬೇಡ: ಸಚಿವ ರಾಯರಡ್ಡಿ
Team Udayavani, Mar 10, 2018, 7:00 AM IST
ಬೆಂಗಳೂರು: ಲಿಂಗಾಯತ ಹಾಗೂ ವೀರಶೈವ ಪದಗಳಲ್ಲಿ ವ್ಯತ್ಯಾಸವಿಲ್ಲ. ಎರಡೂ ಒಂದೇ. ಆದರೆ, ವೀರಶೈವ ಹೆಸರು ಬಳಕೆ ಮಾಡಿದರೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗುವುದಿಲ್ಲ. ಹೀಗಾಗಿ, ವೀರಶೈವ ಪದ ಬಗ್ಗೆ ಹಠ ಬೇಡ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಋಗ್ವೇದದ ಪ್ರಕಾರ ವೀರಶೈವರು ಲಿಂಗಾಯತರಲ್ಲ. ಹಿಂದೂಗಳು. ಹೀಗಾಗಿಯೇ ಹಿಂದೆ ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ಎಂಬ ಬೇಡಿಕೆ
ಕೇಂದ್ರಕ್ಕೆ ಹೋದಾಗ ತಿರಸ್ಕರಿಸಲಾಗಿತ್ತು. ಈಗ ಮತ್ತೂಮ್ಮೆ ಆ ಹೆಸರು ಇದ್ದರೆ ಸ್ಥಾನಮಾನ ಸಿಗುವುದಿಲ್ಲ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಹಾಗೂ ವೀರಶೈವ ಮಹಾಸಭಾ ಮತ್ತೂಮ್ಮೆ ಈ ಕುರಿತು ಯೋಚಿಸಿ ತೀರ್ಮಾನಕ್ಕೆ ಬರಲಿ ಎಂದು ತಿಳಿಸಿದರು.ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ಬಾಯಿ ಚಪಲಕ್ಕೆ ಮಾತನಾಡುವುದು ಬಿಡಬೇಕು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮಾ.14ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಎಲ್ಲ ತೀರ್ಮಾನವಾಗಲಿದೆ. ನಾನೂ ಸೇರಿ ಯಾವ ಸಚಿವರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟರೆ ಈಗಾಗಲೇ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುತ್ತಿರುವ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಅವರಿಗೆ ಅನ್ಯಾಯ ಆಗುತ್ತೆ ಅನ್ನುವುದಾದರೆ ನಮಗೆ ಬೇಡ ಎಂದು ಹೇಳಿದರು.