ಸೌರವ್ ಗಂಗೂಲಿ ಚಿಕಿತ್ಸಾ ತಂಡಕ್ಕೆ ಡಾ| ದೇವಿ ಶೆಟ್ಟಿ ಮಾರ್ಗದರ್ಶನ
Team Udayavani, Jan 5, 2021, 8:14 AM IST
ಹೊಸದಿಲ್ಲಿ: ಕರ್ನಾಟಕದ ಖ್ಯಾತ ಹೃದಯತಜ್ಞ ಡಾ| ದೇವಿ ಶೆಟ್ಟಿ ಅವರು ಸೌರವ್ ಗಂಗೂಲಿ ಅವರ ಶಸ್ತ್ರಚಿಕಿತ್ಸಾ ತಂಡಕ್ಕೆ ಉಪಯುಕ್ತ ಸಲಹೆ ಸೂಚನೆ ನೀಡಿದ್ದಾರೆ.
ಸೋಮವಾರ ನಡೆದ 9 ಹಿರಿಯ ವೈದ್ಯರ ವರ್ಚುವಲ್ ಸಮಾಲೋಚನೆಯಲ್ಲಿ ಡಾ| ಶೆಟ್ಟಿ ಕೂಡ ಪಾಲ್ಗೊಂಡಿದ್ದರು. ತಂಡದಲ್ಲಿದ್ದ ಇನ್ನೋರ್ವ ಪ್ರಮುಖ ವೈದ್ಯರೆಂದರೆ ಡಾ| ಆರ್.ಕೆ. ಪಾಂಡಾ. ಜತೆಗೆ ಅಮೆರಿಕದ ಪರಿಣತ ವೈದ್ಯರೊಬ್ಬರೂ ಇದ್ದರು.
ಹೃದಯಾಘಾತಕ್ಕೆ ಒಳಗಾಗಿ ಕೋಲ್ಕತಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೌರವ್ ಗಂಗೂಲಿ ಅವರಿಗೆ ಇನ್ನೊಂದು ಆ್ಯಂಜಿಯೋಪ್ಲಾಸ್ಟಿ ಅಗತ್ಯವಿದ್ದು, ಇದನ್ನು ಮುಂದಿನ ಕೆಲವು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ ನಡೆಸಬೇಕಾಗುತ್ತದೆ ಎಂದು ವುಡ್ಲ್ಯಾಂಡ್ಸ್ ಹಾಸ್ಪಿಟಲ್ ಎಂ.ಡಿ. ಮತ್ತು ಸಿಇಒ ರೂಪಾಲಿ ಬಸು ಹೇಳಿದ್ದಾರೆ.
ಈ ನಡುವಿನ ಅವಧಿಯಲ್ಲಿ, ಬಹುತೇಕ ಬುಧವಾರ ಗಂಗೂಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು; ದ್ವಿತೀಯ ಆ್ಯಂಜಿಯೋಪ್ಲಾಸ್ಟಿ ದಿನಾಂಕವನ್ನು ನಿಗದಿಗೊಳಿಸಿ ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದರು.