ಮಾಯಾಂಕ್ ಸ್ಥಾನ ತಪ್ಪಲು ದ್ರಾವಿಡ್ ನೀತಿ ಕಾರಣ?
Team Udayavani, May 11, 2018, 6:20 AM IST
ಹೊಸದಿಲ್ಲಿ: ಆಫ್ಘಾನಿಸ್ಥಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಯ್ಕೆಯಾಗಿದೆ. ಅಚ್ಚರಿಯೆನ್ನುವಂತೆ ಕರ್ನಾಟಕದ ಕರುಣ್ ನಾಯರ್ ಮತ್ತೆ ಕರೆ ಪಡೆದಿದ್ದಾರೆ. ಆದರೆ ಈ ಬಾರಿ ದೇಶೀಯ ಕ್ರಿಕೆಟ್ನಲ್ಲಿ ಅತಿ ಶ್ರೇಷ್ಠ ಆಟವಾಡಿ 2 ಸಾವಿರದಷ್ಟು ರನ್ ಗಳಿಸಿರುವ ರಾಜ್ಯದ ಮಾಯಾಂಕ್ ಅಗರ್ವಾಲ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದು ಹಲವರಿಗೆ ಅಚ್ಚರಿ ತಂದಿದೆ.
ಈ ಬೆಳವಣಿಗೆಗೆ ಕಾರಣ ರಾಹುಲ್ ದ್ರಾವಿಡ್ ಎನ್ನುವುದು ಹೊಸ ಸುದ್ದಿ. ದ್ರಾವಿಡ್ ಭಾರತದ ಅಂಡರ್-19 ಹಾಗೂ ಎ ತಂಡದ ತರಬೇತುದಾರ. ಎ ತಂಡದಲ್ಲಿ ಆಡಿದ ಅನಂತರವೇ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುವುದು ದ್ರಾವಿಡ್ ಅವರ ನಿಲುವು. ಅದನ್ನು ಬಿಸಿಸಿಐ ಒಪ್ಪಿಕೊಂಡು ಪಾಲಿಸುತ್ತಿದೆ ಎಂದು ಹೇಳಲಾಗಿದೆ.