ನಾಯಕತ್ವದಿಂದ ಉಚ್ಚಾಟನೆ: ಭೂಪತಿ ಕಿಡಿ
"ನಾಯಕತ್ವ ಹೋಗಿದ್ದಕ್ಕೆ ಬೇಸರವಿಲ್ಲ, ಭಾರತ ಟೆನಿಸ್ ಸಂಸ್ಥೆ ನೀಡಿದ ಕಾರಣ ಸುಳ್ಳು'
Team Udayavani, Nov 6, 2019, 11:03 PM IST
ಹೊಸದಿಲ್ಲಿ: ಪಾಕ್ ಎದುರಿನ ಕೂಟಕ್ಕಾಗಿ ಭಾರತ ಡೇವಿಸ್ ಕಪ್ ಟೆನಿಸ್ ತಂಡದ ನಾಯಕ ಸ್ಥಾನದಿಂದ ಮಹೇಶ್ ಭೂಪತಿ (ಆಟವಾಡದ ನಾಯಕ) ಅವರನ್ನು ಕಿತ್ತುಹಾಕಿರುವುದು ಈಗ ವಿವಾದದ ಸ್ವರೂಪ ಪಡೆದಿದೆ. ಪಿಟಿಐಗೆ ಸಂದರ್ಶನ ನೀಡಿದ ಭೂಪತಿ, ತನ್ನನ್ನು ಉಚ್ಚಾಟಿಸಿದ್ದಕ್ಕೆ ಯಾವುದೇ ಬೇಸರವಿಲ್ಲ, ಆದರೆ ತಾನು ಕರ್ತವ್ಯ ನಿರ್ವಹಿಸಲು ನಿರಾಕರಿಸಿದೆ ಎಂದು ಹೇಳಿರುವುದು ಶುದ್ಧ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಖೀಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ದೇಶಕ್ಕೆ ತಪ್ಪು ಮಾಹಿತಿ ನೀಡಬಾರದು, 12 ಗ್ರ್ಯಾನ್ಸ್ಲಾéಮ್ನಲ್ಲಿ ಗೆಲುವು ಸಾಧಿಸಿ, 25 ವರ್ಷ ದೇಶಕ್ಕಾಗಿ ಆಡಿರುವ ತಾನು, ದೇಶದ ಕರ್ತವ್ಯ ನಿರ್ವಹಿಸಲು ತಿರಸ್ಕರಿಸಿದ್ದೇನೆನ್ನುವುದು ಶುದ್ಧ ಸುಳ್ಳು’ ಎಂದು ಹರಿಹಾಯ್ದಿದ್ದಾರೆ.
ಘಟನೆಯ ಹಿನ್ನೆಲೆ…
ಪಾಕಿಸ್ಥಾನದ ವಿರುದ್ಧ ಭಾರತ ಟೆನಿಸ್ ತಂಡ ಈ ವರ್ಷ ಸೆಪ್ಟಂಬರ್ನಲ್ಲಿ ಡೇವಿಸ್ ಕಪ್ ಟೆನಿಸ್ ಪಂದ್ಯವಾಡಬೇಕಿತ್ತು. ಇದನ್ನು ಪಾಕ್ನ ಇಸ್ಲಾಮಾ ಬಾದ್ನಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಪಾಕ್ನಲ್ಲಿ ಭದ್ರತಾಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಲ್ಲಿ ಹೋಗಿ ಆಡಲು ಸಾಧ್ಯವಿಲ್ಲ ಎಂದು ತಂಡದ ನಾಯಕ ಭೂಪತಿ ಖಡಾಖಂಡಿತವಾಗಿ ನಿರಾಕರಿಸಿದ್ದರು. ಎಐಟಿಎ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಪಾಕ್ನ ಇಸ್ಲಾಮಾಬಾದ್ನಿಂದ ತಟಸ್ಥ ತಾಣಕ್ಕೆ ಸ್ಥಳಾಂತರಗೊಂಡಿದೆ. ನ. 29, 30ರಂದು ನಡೆಯಲಿದೆ ಎಂದು ನಿಗದಿಪಡಿಸಲಾಗಿದೆ. ಈ ತಂಡವನ್ನು ಪ್ರಕಟಿಸುವ ಮುನ್ನ ಭೂಪತಿಯನ್ನು ನಾಯಕತ್ವದಿಂದ ಕಿತ್ತುಹಾಕಿ, ರೋಹಿತ್ ರಾಜ್ಪಾಲ್ ಅವರನ್ನು ನೇಮಿಸಲಾಯಿತು. ಭೂಪತಿಯನ್ನು ಕಿತ್ತುಹಾಕುವ ಕೆಲವೇ ಗಂಟೆಗಳ ಮುನ್ನ ಪಂದ್ಯಗಳು ಪಾಕ್ನಲ್ಲೇ ನಡೆಯಲಿವೆ ಎನ್ನಲಾಗಿತ್ತು. ಕಿತ್ತುಹಾಕಿದ ಕೂಡಲೇ ತಟಸ್ಥತಾಣಕ್ಕೆ ವರ್ಗಾಯಿಸಿದ ಮಾಹಿತಿ ಹೊರಬಿತ್ತು.
ಭೂಪತಿ ಹೇಳಿದ್ದೇನು?
“ನಾನು ದೇಶದ ಕರ್ತವ್ಯ ನಿರ್ವಹಿಸಲು ವಿರೋಧಿಸಿದ್ದೇನೆನ್ನುವುದು ಸುಳ್ಳು ಸುದ್ದಿ. ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ. ಹಾಗೆ ಸುಳ್ಳು ಹೇಳುವವರಿಗೆ ಅವಕಾಶ ಕೊಡುವುದೂ ಇಲ್ಲ. ನಾನು ಕೇವಲ ಪಾಕಿಸ್ಥಾನದಲ್ಲಿ ಆಡಲು ನಿರಾಕರಿಸಿದ್ದೆ. ಪಾಕ್ನಲ್ಲಿ ಆಡುವುದು ಅಸುರಕ್ಷಿತ ಎಂದು ಗಂಭೀರವಾಗಿಯೇ ಭಾವಿಸಿದ್ದೇನೆ. ಅದನ್ನು ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ (ಐಟಿಎಫ್) ಕೂಡ ಒಪ್ಪಿಕೊಂಡಿದೆ. ಪಾಕ್ಗೆ ಹೋಗಲು ತಿರಸ್ಕರಿಸಿದ್ದಕ್ಕೆ ಈಗ ನನಗೆ ಮತ್ತು ಆಟಗಾರರಿಗೆ ಈ ರೀತಿ ಶಿಕ್ಷೆ ನೀಡಲಾಗಿದೆ’ ಎಂದು ಭೂಪತಿ ಹೇಳಿದ್ದಾರೆ.
ಯಾವುದೇ ಮಾಹಿತಿ ನೀಡಲಿಲ್ಲ
“ನನಗೆ ಟೆನಿಸ್ ಸಂಸ್ಥೆ ನಾಯಕತ್ವದಿಂದ ಕಿತ್ತುಹಾಕುವಾಗ ಒಂದು ಮಾಹಿತಿಯನ್ನೂ ನೀಡಲಿಲ್ಲ. ಅವರು ಆರಂಭದಲ್ಲಿ ಹೇಳಿದ್ದು ಇಸ್ಲಾಮಾಬಾದ್ಗೆ ಹೋಗಲು ನಾನು ನಿರಾಕರಿಸಿದ್ದರಿಂದ ರಾಜ್ಪಾಲ್ಗೆ ನಾಯಕತ್ವ ನೀಡಲಾಗಿದೆ ಎಂದು ಮಾತ್ರ. ಆದರೆ ನನ್ನನ್ನು ನಾಯಕತ್ವದಿಂದಲೇ ಕಿತ್ತುಹಾಕಿದ್ದಾರೆ ಎನ್ನುವುದನ್ನು ತಿಳಿಸಲೇ ಇಲ್ಲ. ನಾಯಕತ್ವ ಬದಲಾಯಿಸುವುದಕ್ಕೆ ನನ್ನ ವಿರೋಧವೂ ಇಲ್ಲ. ಆದರೆ ಸುಳ್ಳು ಸುದ್ದಿ ಹರಡುವುದನ್ನು ಸಹಿಸುವುದಿಲ್ಲ’ ಎಂದು ಭೂಪತಿ ಹೇಳಿದ್ದಾರೆ.
ಮಹೇಶ್ ಭೂಪತಿ ಭಾರತ ಟೆನಿಸ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ನಲ್ಲಿ ವಿಶ್ವಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. 2017ರಲ್ಲಿ ಭಾರತ ಟೆನಿಸ್ ತಂಡದ ನಾಯಕರಾಗಿ ಆಯ್ಕೆಯಾದರು. ಅವರ ನಾಯಕತ್ವದಲ್ಲಿ 5 ಸರಣಿಯಾಡಿದ್ದು, ಅದರಲ್ಲಿ 2 ಬಾರಿ ಭಾರತ ಗೆದ್ದಿದೆ.