ಸಂಪೂರ್ಣ ಗಮನ ಕ್ರಿಕೆಟ್ನತ್ತ: ಮಿಥಾಲಿ
Team Udayavani, Dec 23, 2018, 6:50 AM IST
ಕೋಲ್ಕತಾ: ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಾದ ಮಿಥಾಲಿ ರಾಜ್, ಮರಳಿ ತಮ್ಮ ಗಮನವನ್ನು ಸಂಪೂರ್ಣವಾಗಿ ಕ್ರಿಕೆಟ್ನತ್ತ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.
“ಇತ್ತೀಚಿನ ಘಟನೆಗಳು ಕೆಟ್ಟ ಅಭಿರುಚಿಯನ್ನು ಬಿಂಬಿಸುವಂತಿದ್ದವು. ಇವು ಬೇರೆ ಬೇರೆ ರೀತಿಯಲ್ಲಿ ಎಲ್ಲರ ಮೇಲೂ ಋಣಾತ್ಮಕ ಪರಿಣಾಮ ಬೀರಿದವು. ವನಿತಾ ಕ್ರಿಕೆಟ್ ಬೇಡದ ಕಾರಣಗಳಿಂದ ಸುದ್ದಿಯಾಯಿತು. ಪರಿಸ್ಥಿತಿ ಈಗ ಸುಧಾರಿಸಿದೆ. ಒಂದು ತಂಡವಾಗಿ, ಆಟಗಾರರಾಗಿ ನಾವು ಕ್ರಿಕೆಟ್ನತ್ತ ಸಂಪೂರ್ಣ ಗಮನ ನೀಡಬೇಕಿದೆ’ ಎಂದು ಮಿಥಾಲಿ ಹೇಳಿದರು. ಕೋಲ್ಕತಾದಲ್ಲಿ ನಡೆದ ಖಾಸಗಿ ಸಮಾರಂಭದ ವೇಳೆ ಅವರು ಮಾಧ್ಯಮಗಳ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.”ನಮ್ಮ ಮುಂದೆ ಮಹತ್ವದ ನ್ಯೂಜಿಲ್ಯಾಂಡ್ ಪ್ರವಾಸವಿದೆ. ತಂಡವಾಗಿ ಮುನ್ನಡೆಯಲು ಇದು ಸಕಾಲ’ ಎಂದರು.
ಕ್ರೀಡಾ ರಾಯಭಾರಿಗಳು
ಹರ್ಮನ್ಪ್ರೀತ್ ನಡುವಿನ ಸಂಬಂಧದ ಕುರಿತು ಪ್ರತಿಕ್ರಿಯಿಸಿದ ಮಿಥಾಲಿ, “ಕ್ರಿಕೆಟ್ ಎನ್ನುವುದು 15ರಷ್ಟು ವೈಯಕ್ತಿಕ ಆಟಗಾರ್ತಿಯರ, ಕೋಚ್ ಹಾಗೂ ಸಹಾಯಕ ಸಿಬಂದಿಗಳುಳ್ಳ ದೊಡ್ಡ ಕುಟುಂಬ. ಇಲ್ಲಿ ಅಭಿಪ್ರಾಯ ಭೇದ ಸಹಜ. ಎಲ್ಲರ ದೃಷ್ಟಿಕೋನವೂ ಬೇರೆ ಬೇರೆಯಾಗಿರುತ್ತದೆ. ಹೀಗಾಗಿ ಕೆಲವು ಪ್ರಕರಣಗಳು ಸಂಭವಿಸುತ್ತವೆ. ನಮ್ಮ ಪಾಲಿಗೆ ಇವೆಲ್ಲ ಆದ್ಯತೆಯ ವಿಷಯಗಳಲ್ಲ. ಆದರೆ ಒಟ್ಟಾಗಿ ನಾವೆಲ್ಲ ಅಂಗಳಕ್ಕಿಳಿದಾಗ ಕ್ರೀಡಾ ರಾಯಭಾರಿಗಳಾಗಿರುತ್ತೇವೆ ಎಂಬುದನ್ನು ಮರೆಯಬಾರದು’ ಎಂದರು.