ದೇಶಿ ಕ್ರಿಕೆಟ್ನಲ್ಲೂ ಕಾಂಟ್ರಾಕ್ಟ್ ಪದ್ಧತಿ ಜಾರಿ: ಗಂಗೂಲಿ
Team Udayavani, Oct 29, 2019, 5:00 AM IST
ಕೋಲ್ಕತಾ: ದೇಶದ ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಭದ್ರತೆ ಒದಗಿಸುವುದೇ ತನ್ನ ಮೊದಲ ಆದ್ಯತೆ ಎಂದು ಹೇಳಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುವ ಸೂಚನೆ ನೀಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟಿಗರನ್ನೂ “ಒಡಂಬಡಿಕೆ ವ್ಯಾಪ್ತಿ’ಗೆ ತರುವುದು ಬಿಸಿಸಿಐ ಉದ್ದೇಶವಾಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಪ್ರಥಮ ದರ್ಜೆ ಕ್ರಿಕೆಟಿಗರನ್ನು ಕಾಂಟ್ರಾಕ್ಟ್ ಸಿಸ್ಟಮ್ ವ್ಯಾಪ್ತಿಗೆ ತರಲಾಗುವುದು. ಮಂಡಳಿಯ ವಿತ್ತ ಸಮಿತಿಯ ಮುಂದೆ ಇದರ ಪ್ರಸ್ತಾವ ಮಾಡಲಾಗಿದ್ದು, ನೂತನ ಒಡಂಬಡಿಕೆಯೊಂದನ್ನು ರೂಪಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಇನ್ನೂ ಕೆಲವು ದಿನ ತಗಲುತ್ತದೆ’ ಎಂದು ಗಂಗೂಲಿ ಹೇಳಿದರು.